ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಾಯರ್ ನಾರಾಯಸ್ವಾಮಿ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ ಜತೆಗೆ ನೆಹರೂ ಕುಟುಂಬ ತನುಮನವನ್ನೇ ತ್ಯಾಗ ಮಾಡಿದೆ. ನೆಹರೂ ಪ್ರಧಾನಿಯಾಗಿದ್ದ ವೇಳೆ ಶಿಕ್ಷಣ, ಆರೋಗ್ಯ, ಆಸ್ಪತ್ರೆ ನಿರ್ಮಾಣ, ಕೃಷಿ, ಕೈಗಾರಿಕೆ, ರೈಲ್ವೆ ಅಭಿವೃದ್ಧಿ ಸೇರಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಾಯರ್ ನಾರಾಯಸ್ವಾಮಿ ತಿಳಿಸಿದರು.
ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದ್ದು, ಏನೂ ಮಾಡದ ಬಿಜೆಪಿ ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸಿ ಲಾಭ ಪಡೆಯುತ್ತಿದೆ ಎಂದು ಹೇಳಿದರು. ಇಂದಿರಾ ಗಾಂಧಿಯೂ ಸಹ ದೇಶಕ್ಕಾಗಿ ದುಡಿದಿದ್ದಾರೆ. ಬಿಜೆಪಿಯವರೇ ಇಂದಿರಾ ಗಾಂಧಿ ಅವರನ್ನು ದುರ್ಗೆ ಎಂದು ಹೊಗಳಿದ್ದರು. ಸೊನಿಯಾ ಗಾಂಧಿ ಅವರು ಅಧಿಕಾರದ ಆಸೆಗೆ ಒಳಗಾಗದೇ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರನ್ನು ೨ ಬಾರಿ ಪ್ರಧಾನಿಯನ್ನಾಗಿ ಮಾಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಕಾಂಗ್ರೆಸ್ ಜಾರಿ ಮಾಡಿದೆ. ಇವತ್ತು ಕಾಂಗ್ರೆಸ್ ಏನೂ ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. ಕಾಂಗ್ರೆಸ್ ಮಾಡಿದ ಕಾರ್ಯಕ್ರಮಗಳನ್ನು ಬಿಜೆಪಿ ಕಾಪಿ ಮಾಡಿರುವುದೇ ಸಾಧನೆ ಎಂದರು.
ವೀರಪ್ಪ ಮೊಯಿಲಿ ಅವರು ಸಂಸದರಾಗಿದ್ದಾಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಲಾಭವನ, ಡಿಜಿಟಲ್ ಗ್ರಂಥಾಲಯ, ಪತ್ರಿಕಾ ಭವನ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಬಿಜೆಪಿ ಹೇಳಿಕೊಳ್ಳುವಂತಹ ಕೆಲಸ ಮಾಡಿಲ್ಲ ಎಂದು ನುಡಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ರಕ್ಷಾ ರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಕ್ಷೇತ್ರದ ಜನರ ಪುಣ್ಯವಾಗಿದ್ದು, ಮತದಾರರು ರಕ್ಷಾರಾಮಯ್ಯ ಅವರನ್ನು ಬೆಂಬಲಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಮಂಜುನಾಥ್ ಮಾತನಾಡಿ, ಹಿಂದೆ ಪ್ರಚಾರದ ಕೊರತೆಯಿಂದ ಕಾಂಗ್ರೆಸ್ ಮಾಡಿರುವ ಕೆಲಸಗಳು ಬೆಳಕಿಗೆ ಬರಲಿಲ್ಲ. ಈಗ ಬೆರಳಣಿಕೆಯಷ್ಟು ಕೆಲಸಗಳನ್ನು ಮಾಡದ ಬಿಜೆಪಿ, ಸಣ್ಣ ಕೆಲಸಕ್ಕೂ ದೊಡ್ಡ ಪ್ರಚಾರ ಪಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ತಂದಿರುವ ೫ ಗ್ಯಾರೆಂಟಿಗಳು ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ ಆಶಾಭಾವನೆ ಇದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಮಿತ್ರ ನಾರಾಯಣಸ್ವಾಮಿ, ಕಾಂಗ್ರೆಸ್ ಯುವ ಮುಖಂಡರಾದ ಪಟ್ರೆನಹಳ್ಳಿ ಕೃಷ್ಣ, ಮರಸನಹಳ್ಳಿ ಪ್ರಕಾಶ್, ಜಾತವರ ರಾಮಕೃಷ್ಣಪ್ಪ ಇದ್ದರು.