ಪ್ರತಿನಿಧಿ ವರದಿ ಕೊಳ್ಳೇಗಾಲ
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಎ.ಆರ್.ಕೃಷ್ಣಮೂರ್ತಿ ಅವರನ್ನು ಕಾಂಗ್ರೆಸ್ ನ ಬಾಹ್ಯ ಅಭ್ಯರ್ಥಿ ಎಂದೇ ಭಾವಿಸಿಕೊಂಡು ಕೊಳ್ಳೇಗಾಲ ಕ್ಷೇತ್ರದ ಜನತೆ ಅಧಿಕ ಮತ ನೀಡಿ ಸುನಿಲ್ ಬೋಸ್ ಗೆಲ್ಲಿಸಬೇಕು ಎಂದು ಓಲೆ ಮಹಾದೇವ ಕಿವಿ ಮಾತು ಹೇಳಿದರು.
ತಾಲೂಕಿನ ತಿಮ್ಮರಾಜಿಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಸಾಕಷ್ಟು ಗ್ರಾಮದಲ್ಲಿ ಅಭ್ಯರ್ಥಿ ಬಗ್ಗೆ ಚಕಾರವೆತ್ತಿದ್ದು, ಸಚಿವ ಡಾ.ಎಚ್.ಸಿ.ಮಹಾದೇವಪ್ಪ , ಕೊಳ್ಳೇಗಾಲದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದೇನೆಯಲ್ಲದೇ, ಈ ಚುನಾವಣೆಯಲ್ಲಿ ಸುನಿಲ್ ಬೋಸ್ ಗೆದ್ದರೆ, ನಮ್ಮ ಎ.ಆರ್.ಕೆ ಅವರು ಗೆದ್ದಂತೆ ಎಂದರು.
ಸುನಿಲ್ ಬೋಸ್ ಗೆದ್ದ ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಸುಮ್ಮನೆ ಕೂರುವುದಿಲ್ಲ. ಈಗಲಾಗಲೇ ತಾವು ಶಾಸಕರಾದ 9 ತಿಂಗಳಿಗೆ 130 ಕೋಟಿ ಅನುದಾನವನ್ನು ತಂದಿದ್ದಾರೆ. ಅಂತೆಯೇ, ದೆಹಲಿಯಿಂದ ನಮ್ಮ ಕ್ಷೇತ್ರಕ್ಕೆ ಬೇಖಾದ ಅನುದಾನಗಳನ್ನು ತಂದು ಅಭಿವೃದ್ಧಿಗೊಳಿಸಲಿದ್ದಾರೆ . ಬಿಜೆಪಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುವ ಸಾಧ್ಯತೆ ಇದೆ. ಸಂವಿಧಾನ ಬದಲಾಯಿಸಿದರೆ ಬಡ ಜನರಿಗೆ ತೊಂದರೆಯಾಗುತ್ತದೆ. ಶ್ರೀಮಂತರಿಗೆ ಅನುಕೂಲವಾಗುತ್ತದೆ. ಬಿಜೆಪಿಗೆ ಮತ ಹಾಕಿದರೆ ಬಡವರು ಉದ್ಧಾರ ಆಗುವುದಿಲ್ಲ. ಪ್ರಧಾನಿ ಮೋದಿ ಅವರು ಜನ ಸಾಮಾನ್ಯರ ಕೈಗೆ ಸಿಗುವುದಿಲ್ಲ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, 19 ವರ್ಷ ರಾಜಕೀಯ ವನವಾಸ ಅನುಭವಿಸಿದ ನನಗೆ ಕೊಳ್ಳೇಗಾಲ ಕ್ಷೇತ್ರದ ಜನತೆ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 1.8 ಲಕ್ಷಕ್ಕೂ ಅಧಿಕ ಮತ ನೀಡಿ 59 ಸಾವಿರಕ್ಕೂ ಹೆಚ್ಚು ಅಂತರದ ಮತಗಳಿಂದ ಗೆಲ್ಲಿಸಿದ್ದೀರಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ನೀಡಬೇಕು. ಈ ಮೂಲಕ ಕೇಂದ್ರದಲ್ಲಿ ಬಿಜೆಪಿ ತೊಲಗಿಸಿ ಕಾಂಗ್ರೆಸ್ ಆಡಳಿತಕ್ಕೆ ತರಬೇಕು ಎಂದು ಮನವಿ ಮಾಡಿದರು.
ಛಲವಾಧಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿದರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣ ಭಾಗದ ಜನರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಚುನಾವಣೆಯಿಂದ ಹೊರಗಿಟ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅನಿವಾರ್ಯವಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿಗೆ ಜಯ ಸಿಗಬೇಕು:
ಇತ್ತೀಚೆಗೆ ಬಿಎಸ್ಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಜಿ.ಪಂ.ಮಾಜಿ ಸದಸ್ಯ ಎಲ್.ನಾಗರಾಜ್ ಕಮಲ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡ ಜನರ ಪರ ಕೆಲಸ ಮಾಡುತ್ತಿದೆ. 5 ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಜಾತಿ ಬೇಧವಿಲ್ಲದೇ ಎಲ್ಲಾ ವರ್ಗದ ಬಡವರ ಪಾಲಿಗೆ ಆಶಾದಾಯಕವಾಗಿದೆ. ಈ ಗ್ಯಾರಂಟಿ ಯೋಜನೆಗಳಿಗೆ ನಿಜವಾದ ಜಯ ಸೇರಬೇಕಾದರೆ, ಫಲಾನುಭವಿಗಳೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕರೆ ನೀಡಿದರು. ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಜನರು ಎಚ್ಚೆತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಎ.ಆರ್.ಬಾಲರಾಜು, ನಿವೃತ್ತ ತಹಸೀಲ್ದಾರ್ ಸಿ.ಮಹಾದೇವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ತಿಮ್ಮರಾಜಿಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು, ಅಧ್ಯಕ್ಷ ರಶ್ಮಿ ರಾಜು, ಮುಖಂಡರಾದ ಕಿನಕಹಳ್ಳಿ ಪ್ರಭು ಪ್ರಸಾದ್, ಸಿದ್ದಯ್ಯನಪುರ ನಂಜೇಗೌಡ, ಬೂದಿತಿಟ್ಟು ಗುರುಸ್ವಾಮಿ, ಬಾಗಳಿ ರೇವಣ್ಣ, ಅರೇಪಾಳ್ಯ ಸೋಮಣ್ಣ ಸೇರಿದಂತೆ ಇತರರು ಇದ್ದರು.
19ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹಾದೇವ ಅವರು ಭಾಗವಹಿಸಿ ಮಾತನಾಡಿದರು.