ಶಿವಮೊಗ್ಗ: ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಮುಸ್ಲಿಂ ಯುವಕನೊಬ್ಬನಿಂದ ಹಿಂದೂ ಯುವತಿ ನೇಹಾ ಹಿರೇಮಠ ಕೊಲೆಯಾಗಿರುವುದು ಅತ್ಯಂತ ಖಂಡನೀಯ ಎಂದು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಅನ್ನೋದಿಕ್ಕೆ ನೇಹಾ ಹತ್ಯೆ ಪ್ರಕರಣ ಮತ್ತೊಂದು ನಿದರ್ಶನ ಎಂದರು. ನೇಹಾ ಕೊಲೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿರುವುದು ಅತ್ಯಂತ ವಿಷಾದಕರ ಮತ್ತು ಖಂಡನಾರ್ಹ ಎಂದ ಈಶ್ವರಪ್ಪ, ಅವರ ಹೇಳಿಕೆಗಳು ಅಪಾರ ಶೋಕ ಮತ್ತು ಶಾಕ್ ನಲ್ಲಿರುವ ನಿರಂಜನ ಹಿರೇಮಠ ಕುಟುಂಬಕ್ಕಲ್ಲದೆ ಇಡೀ ರಾಜ್ಯದ ಜನತೆಗೆ ನೋವುಂಟು ಮಾಡಿವೆ ಎಂದರು. ಕೊಲೆಯಾದ ಕೆಲವೇ ಗಂಟೆಗಳಲ್ಲಿ ಹಂತಕನನ್ನು ಬಂಧಿಸಲಾಗಿದೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾರನ್ನು ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ಅಂಥ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು, ಕೊಲೆಗಳು ನಡೆಯಲು ಬಿಡಲ್ಲ ಎಂದು ಅವರು ಹೇಳಬೇಕಾಗಿತ್ತು ಎಂದರು.