ಪ್ರತಿನಿಧಿ ವರದಿ ಹುಣಸೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎರಡನೆಯ ಮತ್ತು ಅಂತಿಮ ಹಂತದ ತರಬೇತಿ ಕಾರ್ಯಾಗಾರ ಸಂಪನ್ನಗೊಂಡಿತು.
ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ೩೧ ಕೊಠಡಿಗಳಲ್ಲಿ ಭಾನುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ತಾಲೂಕಿನ ಎಲ್ಲ ೨೭೪ ಮತಗಟ್ಟೆಗಳ ೧೨೩೦ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾಸ್ಟರ್ ಟ್ರೇನಿಂಗ್ ನೀಡಲಾಯಿತು.
ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಮತಗಟ್ಟೆಯಲ್ಲಿ ಸೌಹಾರ್ದಯುತ ವಾತಾವರಣ ಸ್ಥಾಪಿಸಿಕೊಳ್ಳಿ. ಮತಗಟ್ಟೆಗೆ ಆಗಮಿಸುವ ಮತದಾರರನ್ನು ಸ್ವಾಗತಿಸಿ, ಆದರದಿಂದ ಮತಚಲಾಯಿಸಲು ಅನುವು ಮಾಡಿಕೊಡಿ. ಯಾವುದೇ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಮಾಸ್ಟರ್ ಟ್ರೇನರ್ಸ್ ಅಥವಾ ನಿಮ್ಮ ವ್ಯಾಪ್ತಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದರು.
ಸಮಸ್ಯೆಗಳು ಎದುರಾದಾಗ ಪರಿಹರಿಸುವ ಕರ್ತವ್ಯ ಮತಗಟ್ಟೆ ಅಧಿಕಾರಿಯದ್ದಾಗಿರುತ್ತದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸಮಸ್ಯೆಗಳನ್ನು ಪರಿಹರಿಸಲು ಅವರಿಂದಲೇ ಸಾಧ್ಯವಿದೆ. ಹಾಗಾಗಿ, ನಿಮ್ಮ ಅಧಿಕಾರ ಮತ್ತು ಜವಾಬ್ದಾರಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಿ. ಮಾಕ್ಪೋಲಿಂಗ್ ಕುರಿತು ಗಮನಹರಿಸಿ. ವಿವಿಧ ಪಕ್ಷಗಳ ಏಜೆಂಟ್ ಸಮ್ಮುಖದಲ್ಲಿ ಮಾಕ್ ಪೋಲಿಂಗ್ ನಡೆಯಲಿ ಎಂದು ಸೂಚಿಸಿದರು.
ತರಬೇತಿಯಲ್ಲಿ ಇವಿಎಂ ಯಂತ್ರ, ವಿವಿ ಪ್ಯಾಟ್ ಬಳಕೆ, ಮತದಾನದ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಕುರಿತು ಮಾಹಿತಿ ಒದಗಿಸಲಾಯಿತು.
ಇಒ ಶಿವಕುಮಾರ್, ತಹಸೀಲ್ದಾರ್ ಎಂ.ನಯನ, ಮಾಸ್ಟರ್ ಟ್ರೇನರ್ಸ್ ಸಂತೋಷ್ ಕುಮಾರ್, ಪಿಆರ್ಒ, ಎಪಿಆರ್ಒಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಜಿಲ್ಲಾ ತರಬೇತಿ ನೋಡಲ್ ಅಧಿಕಾರಿ, ಡಯಟ್ ಉಪನಿರ್ದೇಶಕ ನಾಗರಾಜಯ್ಯ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
೨೧ಊUಓ೩: ಹುಣಸೂರು ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಚುನಾವಣಾ ಸಿಬ್ಬಂದಿಗೆ ಇವಿಎಂ ಮತ್ತು ವಿವಿ ಪ್ಯಾಟ್ಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಾಯಿತು. ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ.