ಪ್ರತಿನಿಧಿ ವರದಿ ಪಿರಿಯಾಪಟ್ಟಣ
ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಅಂಚೆ ಮತ ಪತ್ರಗಳನ್ನು ಸಕಾಲದಲ್ಲಿ ಒದಗಿಸದ ಚುನಾವಣಾ ಅಧಿಕಾರಿಗಳ ನಡೆಯನ್ನು ಖಂಡಿಸಿ ಚುನಾವಣಾ ತರಬೇತಿಗೆಂದು ಹಾಜರಾಗಿದ್ದ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುಷ್ಪ ವಿದ್ಯಾಸಂಸ್ಥೆಯಲ್ಲಿ ಶನಿವಾರ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತರಬೇತಿ ಮುಗಿದ ನಂತರ ಅಂಚೆ ಮತ ಪತ್ರಗಳನ್ನು ಒದಗಿಸಬೇಕಿದ್ದ ತಾಲೂಕು ಆಡಳಿತದ ಚುನಾವಣಾ ಉಸ್ತುವಾರಿ ಅಧಿಕಾರಿಗಳು ಅಂಚೆ ಮತ ಪತ್ರಗಳನ್ನು ತಲುಪಿಸದ ಕಾರಣ ಆಕ್ರೋಶಗೊಂಡ ಚುನಾವಣಾ ಕರ್ತವ್ಯದ ಸಿಬ್ಬಂದಿ, ನಾವು ಕೊಳ್ಳೇಗಾಲ ಸೇರಿದಂತೆ ದೂರದ ಊರುಗಳಿಂದ ಬಂದಿದ್ದೇವೆ. ನಮಗೆ ಅಂಚೆ ಮತಪತ್ರಗಳನ್ನು ನೀಡದೆ ಸತಾಯಿಸುತ್ತಿದ್ದೀರಿ. ನಾಳೆ, ನಾಡಿದ್ದು ಬನ್ನಿ ಎಂದು ಹೇಳುತ್ತಿದ್ದೀರಿ. ಮತ್ತೊಮ್ಮೆ ಅದಕ್ಕಾಗಿ ಇಲ್ಲಿಗೆ ಬರಲು ಸಾಧ್ಯವಿಲ್ಲ. ನಮ್ಮ ಮತಗಳನ್ನು ಬೇರೆಯವರು ಚಲಾಯಿಸುವುದಿಲ್ಲ ಎಂಬ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಸಮಜಾಯಿಷಿ ನೀಡಿದ ಸಹಾಯಕ ಚುನಾವಣಾ ಅಧಿಕಾರಿ ಜಿ.ಡಿ.ಶೇಖರ್, ಮತಪತ್ರಗಳನ್ನು ಕ್ರಮಬದ್ಧವಾಗಿ ನಮಗೆ ತಲುಪಿಸಬೇಕಿತ್ತು. ಅವುಗಳು ಸಕಾಲದಲ್ಲಿ ಇಲ್ಲಿಗೆ ತಲುಪಿಲ್ಲ. ಆದ್ದರಿಂದ ನೀವು ಯಾವ ತಾಲೂಕು ಕೇಂದ್ರದಲ್ಲಿ ಮತ ಚಲಾಯಿಸುತ್ತೇನೆಂದು ಲಿಖಿತ ರೂಪದಲ್ಲಿ ನಮಗೆ ಬರೆದುಕೊಟ್ಟರೆ, ಅಲ್ಲಿಗೆ ನಿಮ್ಮ ಅಂಚೆ ಮತಪತ್ರಗಳನ್ನೂ ತಲುಪಿಸಲಾಗುವುದು ಎಂದು ಸಿಬ್ಬಂದಿಯನ್ನು ಸಮಾಧಾನಪಡಿಸಿದರು.