ಮೈಸೂರು: ಕ್ಷೇತ್ರದ ಅಭಿವೃದ್ಧಿ ಕುರಿತು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ಸೇಠ್ ಅವರು ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬಿಜೆಪಿ ಮುಖಂಡರಿಗೆ ಅಭಿವೃದ್ಧಿ ಕೆಲಸಗಳು ಬೇಕಿಲ್ಲ. ಅವರ ಪ್ರಣಾಳಿಕೆ ಏನಿದ್ದರೂ ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಜನರ ನಡುವೆ ದ್ವೇಷ ಬಿತ್ತುವುದಾಗಿದೆ. ನೇಹಾ ಕೊಲೆ ಪ್ರಕರಣಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಲಕ್ಷ್ಮಣ್ ಅವರು ತಮ್ಮದೇ ಆದ ದೂರದೃಷ್ಟಿ ಮೂಲಕ ಪ್ರಣಾಳಿಕೆಯನ್ನು ಜನರಿಗೆ ನೀಡಿದ್ದಾರೆ. ಇದು ರಾಜ್ಯದಲ್ಲಿಯೇ ಪ್ರಥಮ. ಮೈಸೂರು ಹಾಗೂ ಕೊಡಗು ತನ್ನ ಸಾಂಸ್ಕೃತಿಕ, ಪರಂಪರೆ ಹಾಗೂ ಪ್ರವಾಸೋದ್ಯಮದಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಇದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ವಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಲಕ್ಷ್ಮಣ್ ಅವರು ಕಳೆದ 25 ವರ್ಷಗಳಿಂದ ಸಾವಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೈಸೂರು-ಕೊಡಗು ಕ್ಷೇತ್ರಗಳ ಸಮಸ್ಯೆ ಬಗ್ಗೆ ಅವರಿಗೆ ಅರಿವಿದೆ. ಅಲ್ಲದೇ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ವಿಧಾನವೂ ಅವರಿಗೆ ತಿಳಿದಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯ ಭರವಸೆಗಳೇನು?
- 2000 ಕೆರೆಗಳ ಜೀರ್ಣೋದ್ಧಾರಕ್ಕೆ ಆದ್ಯತೆ
2. ಮೈಸೂರು-ಕೊಡಗು ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಒತ್ತು.
3. ಶೀಘ್ರವೇ ಮೈಸೂರು- ಕುಶಾಲನಗರ ರೈಲ್ವೆ ಯೋಜನೆ ಅನುಷ್ಠಾನ.
4. ಮೈಸೂರು ವಿವಾನ ನಿಲ್ದಾಣ ಮೇಲ್ದರ್ಜೆಗೇರಿಸಲು ಕ್ರಮ.
5. ಮಡಿಕೇರಿಯಲ್ಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ.
6. ಐಟಿ ಮತ್ತು ಬಿಟಿ ಕಂಪನಿಗಳಲ್ಲಿ ಕ್ಷೇತ್ರದ ಜನತೆಗೆ ಉದ್ಯೋಗ.
7. ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರ.
8. ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ ಸ್ಥಾಪಿಸಲು ಪ್ರಯತ್ನ.
9. ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.
10. ಪಿರಿಯಾಪಟ್ಟಣದಲ್ಲಿ ಕೃಷಿ ಸಂಶೋಧನಾ ಕೇಂದ್ರ.