ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಚಿವ ಚಲುವರಾಯಸ್ವಾಮಿ ಮತ್ತು ರಾಜ್ಯದ ಅಪ್ ಮುಖಂಡ ಹಾಗೂ ಕನ್ನಡ ಪರ ಹೋರಾಟಗಾರ ಮುಖ್ಯಮಂತ್ರಿ ಚಂದ್ರು ಮತ್ತು ಹಲವಾರು ಸ್ಥಳೀಯ ನಾಯಕರು ನಾಗಮಂಗಲ ತಾಲ್ಲೂಕಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ದರ್ಶನ್ ಕ್ಕಿಂತ ಮೊದಲು ಮಾತಾಡಿದ ಚಂದ್ರು ತಮ್ಮ ಎಂದಿನ ಶೈಲಿಯಲ್ಲಿ ಮಾತಾಡಿ ನೆರೆದಿದ್ದ ಜನರನ್ನು ರಂಜಿಸಿದರು. ನೀವೆಲ್ಲ ದರ್ಶನ್ ಮಾತನ್ನು ಕೇಳಬೇಕಾದರೆ ಮೊದಲು ನನ್ನ ಮಾತು ಕೇಳಬೇಕು ಅಂದಾಗ ದಿ ಬಾಸ್ ಮಾತು ಕೇಳಲು ಉರಿಬಿಸಲಲ್ಲಿ ನಿಂತಿದ್ದ ಜನ ಮಾತಾಡಿ ಮಾತಾಡಿ ಅಂತ ಕೂಗಿದರು. ಕೈಗೆ ಬೋಲ್ಟ್ ಗಳನ್ನು ಹಾಕಿಕೊಂಡೇ ಪ್ರಚಾರಕ್ಕೆ ಬಂದಿದ್ದ ದರ್ಶನ್, ಸ್ಟಾರ್ ಚಂದ್ರು ಅವರು ಸ್ಥಳೀಯರಾಗಿರುವ ಕಾರಣಕ್ಕೆ ಆದ್ಯತೆ ನೀಡಲೇಬೇಕು ಮತ್ತು ಅವರನ್ನು ಗೆಲ್ಲಿಸಿದರೆ ಈ ಭಾಗದ ಪ್ರಭಾವಿ ನಾಯಕ ಮತ್ತು ಸಚಿವರೂ ಆಗಿರುವ ಚಲುವರಾಯಸ್ವಾಮಿ ಅವರ ಕೈ ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಮಾಡಿದ ಸಹಾಯ ಮತ್ತು ಪ್ರಚಾರವನ್ನು ದರ್ಶನ್ ಜ್ಞಾಪಿಸಿಕೊಂಡರು.