– ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ
– ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆ ಕುರಿತಂತೆ ಸಭೆ
ಪ್ರತಿನಿಧಿ ವರದಿ ಮೈಸೂರು
ಮೈಸೂರನ್ನು ತ್ಯಾಜ್ಯ ಮುಕ್ತ ನಗರವನ್ನಾಗಿ ರೂಪಿಸಲು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಘನ ಮತ್ತು ದ್ರವ ತ್ಯಾಜ್ಯಗಳು ವ್ಯವಸ್ಥಿತ ನಿರ್ವಹಣೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವ್ಯವಸ್ಥಿತ ರೀತಿಯಲ್ಲಿ ಘನ ತ್ಯಾಜ್ಯವನ್ನು ನಿರ್ವಹಣೆ ಮಾಡುವುದರಿಂದ ಪರಿಸರ ನೈರ್ಮಲ್ಯವನ್ನು ಕಾಪಾಡುವ ಜೊತೆಗೆ ಆರೋಗ್ಯಪೂರ್ಣ ವಾತಾವರಣ ನಿರ್ಮಿಸಬಹುದು. ನಗರದ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿ ಕಸ, ಒಣ ಕಸ ಹಾಗೂ ನಿರುಪಯುಕ್ತ ಕಸ ಎಂದು ಮೂರು ಭಾಗಗಳಾಗಿ ಪ್ರತ್ಯೇಕವಾಗಿ ವಿಂಗಡಿಸಿ, ವಿಲೇವಾರಿ ಮಾಡಬೇಕು. ನಗರದ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯದ ರಾಶಿ ಕಂಡುಬರಬಾರದು ಎಂದರು.
ಮೈಸೂರನ್ನು ತ್ಯಾಜ್ಯ ಮುಕ್ತ ನಗರಿಯಾನ್ನಾಗಿ ಮಾಡಲು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕು. ಈ ಬಾರಿ ಸ್ವಚ್ಛತಾ ನಗರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆಯು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಅಧಿಕಾರಿಗಳು ಮುಂದಾಗಬೇಕು. ಇದನ್ನು ಎಲ್ಲರೂ ವೈಯಕ್ತಿಕವಾಗಿ ಪರಿಗಣಿಸಿ ಇಲಾಖೆಗಳ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಿ ಯಶಸ್ವಿ ಮಾಡಬೇಕು. ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ತ್ಯಾಜ್ಯದ ರಾಶಿಗಳು ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ಸುತ್ತಮುತ್ತಲಿನ ವಾತಾವರಣ ಹಾಳಾಗಲು ಕಾರಣವಾಗುತ್ತಿದೆ. ಹಾಗಾಗಿ ಮೊದಲು ತ್ಯಾಜ್ಯಗಳು ಹುಟ್ಟುತ್ತಿರುವ ಮೂಲವನ್ನು ತಿಳಿದು ಅಲ್ಲಿಂದಲೇ ನಿಯಂತ್ರಿಸಬೇಕು ಎಂದು ಹೇಳಿದರು.
ಪ್ಲಾಸ್ಟಿಕ್ ನಿರ್ಮೂಲನೆ ಮಾಡಿ ಮೈಸೂರನ್ನು ಮತ್ತೆ ಸ್ವಚ್ಛತಾ ನಗರಿ ಮಾಡಲು ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರವು ಬಹಳ ಮುಖ್ಯವಾಗಿರುತ್ತದೆ. ಚತ್ತೀಸ್ಗಢದ ಅಂಬಿಕಾಪುರದಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ವಿನೂತ ಯೋಜನೆ ಜಾರಿಯಾಗಿದ್ದು ಈ ಯೋಜನೆಯ ಪರಿಕಲ್ಪನೆ ವಿಶೇಷವಾಗಿದೆ. ಈ ಮಾದರಿಯಲ್ಲಿ ಟನ್ ಗಟ್ಟಲೇ ಉತ್ಪತ್ತಿಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಹಸಿವು ನೀಗಿಸುವುದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ತಡೆಗಟ್ಟುವಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕೊಟ್ಟರೆ ಅವರಿಗೆ ಇಂದಿರಾ ಕ್ಯಾಂಟಿನ್ನಲ್ಲಿ ಉಚಿತ ಊಟ ನೀಡುವ ಯೋಜನೆ ರೂಪಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮುಂಬರುವ ದಿನಗಳಲ್ಲಿ ಕ್ಲೀನ್ ಸಿಟಿ ಸರ್ವೆಯಲ್ಲಿ ಮೈಸೂರು 7 ಸ್ಟಾರ್ ಪಡೆಯುವುವ ಗುರಿಯನ್ನು ಹೊಂದಿದ್ದು, ಈ ಗುರಿಯನ್ನು ತಲುಪುವಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ನಗರದಲ್ಲಿ ಇತ್ತೀಚಿಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಆದಷ್ಟು ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕು. ಕೆಲವೊಂದು ಪುನರ್ ಬಳಕೆ ಮಾಡಲು ಅವಕಾಶವಿರುವ ವಸ್ತುಗಳನ್ನು ಉಪಯೋಗಿಸಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ನಗರದ 65 ವಾರ್ಡ್ ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ಕೆಲಸವನ್ನು ಕಟ್ಟು ನಿಟ್ಟಾಗಿ ಮಾಡಿ, ಪ್ರತಿಯೊಂದು ಹಂತದಲ್ಲಿಯೂ ಅಭಿವೃದ್ಧಿ ಮಾಡಬೇಕು ಎಂದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಎನ್.ಎನ್. ಮಧು, ಮುಡಾ ಆಯುಕ್ತ ದಿನೇಶ್ ಕುಮಾರ್, ಪಾಲಿಕೆ ಉಪ ಆಯುಕ್ತರಾದ ಸಿಂಧು, ಹೆಚ್ಚುವರಿ ಆಯುಕ್ತರಾದ ಕುಸುಮಾ ಕುಮಾರಿ, ಆರೋಗ್ಯಾಧಿಕಾರಿ ವೆಂಕಟೇಶ್ ಇತರರಿದ್ದರು.
=================