ನವದೆಹಲಿ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ. ದೇಶಾದ್ಯಂತ ಇಂದು 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, 1331 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ಇವಿಎಂ ಮೆಷಿನ್ನಲ್ಲಿ ಸೆರೆಯಾಗಲಿದೆ.
ಮೂರನೇ ಹಂತದಲ್ಲಿ ಗುಜರಾತ್ನ ಗಾಂಧಿ ನಗರ, ಮಹಾರಾಷ್ಟ್ರದ ಬಾರಾಮತಿ, ಮಧ್ಯಪ್ರದೇಶದ ರಾಜ್ಗಢ ಮತ್ತು ಯುಪಿಯ ಮೈನ್ಪುರಿ ಕ್ಷೇತ್ರಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಲಿದೆ. ಏಕೆಂದರೆ ಗಾಂಧಿನಗರದಲ್ಲಿ ಚುನಾವಣಾ ಸ್ಪರ್ಧೆ ಇರುವುದು ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ ನಡುವೆ. ಆದರೆ ಬಾರಾಮತಿಯಲ್ಲಿ ಅದು ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ ನಡುವೆ ಇರುತ್ತದೆ. ರಾಜ್ಗಢ ಕ್ಷೇತ್ರದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ರೋಡ್ಮಲ್ ನಗರ್ ನಡುವೆ ನೇರ ಸ್ಪರ್ಧೆಯಿದ್ದರೆ, ಮೈನ್ಪುರಿಯಲ್ಲಿ ಡಿಂಪಲ್ ಯಾದವ್ ಮತ್ತು ಜೈವೀರ್ ಸಿಂಗ್ ನಡುವೆ ನೇರ ಸ್ಪರ್ಧೆಯಿದೆ.
ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1300 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖ ನಾಯಕರಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ (ಗಾಂಧಿನಗರ), ಜ್ಯೋತಿರಾದಿತ್ಯ ಸಿಂಧಿಯಾ (ಗುಣ), ಮನ್ಸುಖ್ ಮಾಂಡವಿಯಾ (ಪೋರಬಂದರ್), ಪುರುಷೋತ್ತಮ್ ರೂಪಾಲಾ (ರಾಜ್ಕೋಟ್), ಪ್ರಹ್ಲಾದ್ ಜೋಶಿ (ಧಾರವಾಡ) ಮತ್ತು ಎಸ್ಪಿ ಸಿಂಗ್ ಬಘೇಲ್ (ಆಗ್ರಾ) ಸೇರಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (ವಿದಿಶಾ) ಮತ್ತು ದಿಗ್ವಿಜಯ್ ಸಿಂಗ್ (ರಾಜ್ಗಢ) ಕೂಡ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇನ್ನು ಕರ್ನಾಟಕದಲ್ಲಿಯೂ ಕೆಲ ಕ್ಷೇತ್ರಗಳು ಸದ್ದು ಮಾಡಿದ್ದು, ಆ ಪೈಕಿ ಬೆಳಗಾವಿಯಲ್ಲಿ ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ನಿಂದ ಮೃಣಾಳ್, ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್ ಮತ್ತು ವಿಶ್ವೇಶ್ವರ್ ಹೆಗಡೆ ಕಾಗೇರಿ, ಶಿವಮೊಗ್ಗದಿಂದ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಮತ್ತು ಗೀತಾ ಶಿವರಾಜ್ ಕುಮಾರ್, ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (ಹಾವೇರಿ) ಮತ್ತು ಬದ್ರುದ್ದೀನ್ ಅಜ್ಮಲ್ (ಧುಬ್ರಿ) ಅವರ ಭವಿಷ್ಯ ಇಂದು ಇವಿಎಂಗಳಲ್ಲಿ ಭದ್ರಗೊಳ್ಳಲಿದೆ. ಉತ್ತರ ಪ್ರದೇಶದಲ್ಲಿ, ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಅನೇಕ ಸದಸ್ಯರು ಈ ಹಂತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಇಂದು ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್ನ 25 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಮಹಾರಾಷ್ಟ್ರದ 11 ಸ್ಥಾನಗಳಲ್ಲಿ, ಉತ್ತರ ಪ್ರದೇಶದಲ್ಲಿ 10 ಸ್ಥಾನಗಳಲ್ಲಿ, ಕರ್ನಾಟಕದ 28 ಸ್ಥಾನಗಳಲ್ಲಿ ಉಳಿದ 14 ಸ್ಥಾನಗಳಲ್ಲಿ, ಛತ್ತೀಸ್ಗಢದಲ್ಲಿ 7 ಸ್ಥಾನಗಳಲ್ಲಿ, ಮಧ್ಯಪ್ರದೇಶದಲ್ಲಿ 9 ಸ್ಥಾನಗಳಲ್ಲಿ, ಬಿಹಾರದಲ್ಲಿ 5, ಅಸ್ಸಾಂನಲ್ಲಿ ತಲಾ 4 ಮತ್ತು ಪಶ್ಚಿಮ ಬಂಗಾಳ ಮತ್ತು ಗೋವಾದ ಎಲ್ಲಾ 2 ಸ್ಥಾನಗಳಿಗೂ ಮತದಾನ ನಡೆಯಲಿದೆ. ಇದರೊಂದಿಗೆ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುವಿನ 2 ಸ್ಥಾನಗಳಿಗೂ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಅನಂತನಾಗ್-ರಾಜೌರಿ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಯನ್ನು ಈಗ ಆರನೇ ಹಂತಕ್ಕೆ ಮುಂದೂಡಲಾಗಿದೆ.
ಇನ್ನು, ಪಶ್ಚಿಮ ಬಂಗಾಳದ 4 ಲೋಕಸಭಾ ಕ್ಷೇತ್ರಗಳಾದ ಮಾಲ್ಡಾ ಉತ್ತರ, ಮಾಲ್ಡಾ ದಕ್ಷಿಣ, ಜಂಗಿಪುರ ಮತ್ತು ಮುರ್ಷಿದಾಬಾದ್ನಲ್ಲಿ ಇಂದು ಮತದಾನ ನಡೆಯಲಿದೆ. ಮೂರನೇ ಹಂತದಲ್ಲಿ ಸ್ಪರ್ಧಿಸಿರುವ 57 ಅಭ್ಯರ್ಥಿಗಳ ಪೈಕಿ ಜಂಗಿಪುರದಲ್ಲಿ 14, ಮಾಲ್ಡಾ ಉತ್ತರದಲ್ಲಿ 15, ಮಾಲ್ಡಾ ದಕ್ಷಿಣದಲ್ಲಿ 17 ಮತ್ತು ಮುರ್ಷಿದಾಬಾದ್ನಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುರ್ಷಿದಾಬಾದ್ನಲ್ಲಿ ಹಿರಿಯ ಸಿಪಿಐ(ಎಂ) ನಾಯಕ ಮೊಹಮ್ಮದ್ ಸಲೀಂ, ಟಿಎಂಸಿಯ ಅಬು ತಾಹಿರ್ ಖಾನ್ ಮತ್ತು ಬಿಜೆಪಿ ಅಭ್ಯರ್ಥಿ ಗೌರಿ ಶಂಕರ್ ಘೋಷ್ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ.
ಮಾಲ್ಡಾ ಉತ್ತರದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಐಪಿಎಸ್ ಅಧಿಕಾರಿ ಪ್ರಸೂನ್ ಬ್ಯಾನರ್ಜಿ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಹಿರಿಯ ನಾಯಕ ಮುಸ್ತಾಕ್ ಆಲಂಗೆ ಟಿಕೆಟ್ ನೀಡಿದ್ದು, ಬಿಜೆಪಿ ಖಗೇನ್ ಮುರ್ಮು ಅವರನ್ನು ಕಣಕ್ಕಿಳಿಸಿದೆ. ಮಾಲ್ಡಾ ದಕ್ಷಿಣದಲ್ಲಿ ಬಿಜೆಪಿಯಿಂದ ಶ್ರೀರೂಪಾ ಮಿತ್ರ ಚೌಧರಿ, ಕಾಂಗ್ರೆಸ್ನಿಂದ ಇಶಾ ಖಾನ್ ಚೌಧರಿ ಮತ್ತು ಟಿಎಂಸಿಯಿಂದ ಶಹನವಾಜ್ ಅಲಿ ರೆಹಾನ್ ಸ್ಪರ್ಧಿಸಿದ್ದಾರೆ. ಜಂಗೀಪುರದಲ್ಲಿ ಟಿಎಂಸಿಯ ಖಲೀಲುರ್ ರೆಹಮಾನ್ ಅವರು ಬಿಜೆಪಿಯ ಧನಂಜಯ್ ಘೋಷ್ ಮತ್ತು ಕಾಂಗ್ರೆಸ್ನ ಖಲೀಲುರ್ ರೆಹಮಾನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಯುಪಿಯ ಈ ಸ್ಥಾನಗಳಲ್ಲಿ ತೀವ್ರ ಪೈಪೋಟಿ
ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್ಪುರಿ, ಇಟಾಹ್, ಬದೌನ್, ಆಮ್ಲಾ ಮತ್ತು ಬರೇಲಿಯಲ್ಲಿ ಮತದಾನ ನಡೆಯಲಿದೆ. ಈ ಹಂತದಲ್ಲಿ 1.88 ಕೋಟಿ ಮತದಾರರು 100 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇದರಲ್ಲಿ 1 ಕೋಟಿಗೂ ಹೆಚ್ಚು ಪುರುಷ ಮತದಾರರು ಮತ್ತು 87 ಲಕ್ಷಕ್ಕೂ ಹೆಚ್ಚು ಮಹಿಳಾ ಮತದಾರರು ಸೇರಿದ್ದಾರೆ. ಈ ಚುನಾವಣೆಯಲ್ಲಿ ಕೇಂದ್ರ ಸಚಿವ ಎಸ್ಪಿ ಸಿಂಗ್ ಬಘೇಲ್, ಯುಪಿ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್, ಕಂದಾಯ ಖಾತೆ ರಾಜ್ಯ ಸಚಿವ ಅನುಪ್ ಪ್ರಧಾನ್ ಬಾಲ್ಮಿಕಿ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಅನೇಕ ಕುಟುಂಬ ಸದಸ್ಯರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಡಿಂಪಲ್ ಸೇರಿದಂತೆ ಈ ನಾಯಕರ ಪ್ರತಿಷ್ಠೆ
ಡಿಂಪಲ್ ಯಾದವ್ ಅವರು ಮೈನ್ಪುರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ, ಎಸ್ಪಿಯ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್ ಅವರು 2014 ರಲ್ಲಿ ಗೆದ್ದಿದ್ದ ಫಿರೋಜಾಬಾದ್ ಸ್ಥಾನವನ್ನು ಮತ್ತೆ ಗೆಲ್ಲಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ, ಬದೌನ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆದಿತ್ಯ ಯಾದವ್ ಎಸ್ಪಿ ಭದ್ರಕೋಟೆಯನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. 2014ರಲ್ಲಿ ಅವರ ಸೋದರ ಸಂಬಂಧಿ ಧರ್ಮೇಂದ್ರ ಯಾದವ್ ಪ್ರತಿನಿಧಿಸಿದ್ದರು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರ ಪುತ್ರ ರಾಜವೀರ್ ಸಿಂಗ್ ಅವರು ಇಟಾಹ್ ಕ್ಷೇತ್ರದಿಂದ ಹ್ಯಾಟ್ರಿಕ್ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಮಧ್ಯಪ್ರದೇಶದ 9 ಸ್ಥಾನಗಳಿಗೆ ಮತದಾನ
ಮಧ್ಯಪ್ರದೇಶದ 9 ಕ್ಷೇತ್ರಗಳ ಪೈಕಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ದಿಗ್ವಿಜಯ್ ಸಿಂಗ್ ಅವರ ರಾಜಕೀಯ ಭವಿಷ್ಯ ಈ ಚುನಾವಣೆಯಲ್ಲಿ ನಿರ್ಧಾರವಾಗಲಿದೆ. ಇಲ್ಲಿ ಮೊರೆನಾ, ಭಿಂಡ್, ಗ್ವಾಲಿಯರ್, ಗುಣ, ಸಾಗರ್, ವಿದಿಶಾ, ಭೋಪಾಲ್, ರಾಜ್ಗಢ್ ಮತ್ತು ಬೇತುಲ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದಲ್ಲಿ 20,456 ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಜ್ಯೋತಿರಾದಿತ್ಯ ಸಿಂಧಿಯಾ ಗುಣಾದಿಂದ, ಶಿವರಾಜ್ ಸಿಂಗ್ ಚೌಹಾಣ್ ವಿದಿಶಾದಿಂದ ಸ್ಪರ್ಧಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ರಾಜ್ಗಢದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು 30 ವರ್ಷಗಳ ನಂತರ ಲೋಕಸಭೆ ಚುನಾವಣೆಯಲ್ಲಿ ಪುನರಾಗಮನ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಮಧ್ಯಪ್ರದೇಶದ ಒಟ್ಟು 29 ಸ್ಥಾನಗಳ ಪೈಕಿ 12 ಸ್ಥಾನಗಳಿಗೆ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ಉಳಿದ ಎಂಟು ಸ್ಥಾನಗಳಿಗೆ ಮೇ 13 ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ.
ಬಾರಾಮತಿಯಲ್ಲಿ ಸುಪ್ರಿಯಾ ಸುಳೆ ಮತ್ತು ಸುನೇತ್ರಾ ನಡುವೆ ಪೈಪೋಟಿ
ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಇದರಲ್ಲಿ ಬಾರಾಮತಿ ಸ್ಥಾನವೂ ಸೇರಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಸ್ಪರ್ಧಿಸುತ್ತಿದ್ದಾರೆ. ಮೂರನೇ ಹಂತದಲ್ಲಿ ಬಾರಾಮತಿ, ರಾಯಗಢ, ಉಸ್ಮಾನಾಬಾದ್, ಲಾತೂರ್, ಸೋಲಾಪುರ, ಮಾಧಾ, ಸಾಂಗ್ಲಿ, ಸತಾರಾ, ರತ್ನಗಿರಿ-ಸಿಂಧುದುರ್ಗ, ಕೊಲ್ಲಾಪುರ ಮತ್ತು ಹತ್ಕನಂಗ್ಲೆಯಲ್ಲಿ ಮತದಾನ ನಡೆಯಲಿದೆ.
ಒಟ್ನಲ್ಲಿ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯಲಿದೆ. ಹೀಗಾಗಿ ಭಾನುವಾರ ಸಂಜೆಯಿಂದಲೇ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ಮಂಗಳವಾರ (ಮೇ 7) ದೇಶದ 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.