ಪ್ರತಿನಿಧಿ ವರದಿ ಹಾಸನ
ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಬಿಸಿಲಿನ ವಾತಾವರಣ ಈ ಬಾರಿ ಉಂಟಾಗಿದ್ದು ಇದರಿಂದ ಮಲೆನಾಡು ಸೇರಿದಂತೆ ಎಲ್ಲೆಡೆ ಜನರು ತತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ವರ್ಷ ಈ ವೇಳೆಗೆ 10ರಿಂದ 15 ಇಂಚು ಮಳೆಯಾಗುತ್ತಿತ್ತು. ಈ ವರ್ಷ ಕೇವಲ ಅರ್ಧ, ಮುಕ್ಕಾಲು ಇಂಚು ಮಳೆಯಾಗಿದ್ದು, ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ಕಾಫಿ, ಮೆಣಸು, ಏಲಕ್ಕಿ ಗಿಡಗಳು ಬಾಡುತ್ತಿವೆ.
2023ರ ನವಂಬರ್ ತಿಂಗಳಲ್ಲಿ ಹದ ಮಳೆಯಾಗಿದ್ದು, ಅದನ್ನು ಹೊರತುಪಡಿಸಿದರೆ ಏಪ್ರಿಲ್ ತಿಂಗಳಲ್ಲಿ ಕೆಲವೆಡೆ 1 ಇಂಚು ಮಳೆಯಾಗಿದೆ. ಅಲ್ಲಿಂದ ಇಲ್ಲಿವರೆಗೆ ಮಳೆಯಾಗದೆ ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯ ಸಕಲೇಶಪುರ ಹೊರತುಪಡಿಸಿದರೆ ಆಲೂರು, ಅರಕಲಗೂಡು, ಬೇಲೂರು ತಾಲೂಕುಗಳು ಅರೆ ಮಲೆನಾಡು ಪ್ರದೇಶವಾಗಿದ್ದು, ಅಲ್ಲಿಯೂ ಬರದ ಛಾಯೆ ಮೂಡಿದೆ.
ಪ್ರತಿ ವರ್ಷ ಯಥಾಸ್ಥಿತಿ ಮಳೆಯಾಗುತ್ತದೆಂದು ನಂಬಿದ್ದ ಬಹುತೇಕ ರೈತರು ಗದ್ದೆಗಳಲ್ಲಿ ಬಹುವಾರ್ಷಿಕ ಅಡಕೆ ಬೆಳೆಗೆ ಮಾರು ಹೋದರು. ಕೆಲ ರೈತರು ಕೊಳವೆ ಬಾವಿ ನೀರು ನಂಬಿಕೊಂಡು ಎತ್ತರದ ಹೊಲದ ಪ್ರದೇಶದಲ್ಲೂ ಅಡಕೆ ಗಿಡ ನಾಟಿ ಮಾಡಿದರು.
ಆದರೆ ಐದು ತಿಂಗಳಿನಿಂದ ಮಳೆಯಾಗದೆ ಕೆರೆ, ಕಟ್ಟೆಗಳಲ್ಲಿ ನೀರಿಲ್ಲದೆ, ಕೊಳವೆ ಬಾವಿಗಳು ಇಂಗುತ್ತಿರುವುದರಿಂದ ಕಾಫಿ, ಅಡಕೆ, ಮೆಣಸು, ಏಲಕ್ಕಿ ಗಿಡಗಳು ಒಣಗಿ ಎಲೆ ಉದುರುತ್ತಿವೆ. ಕೊಳವೆ ಬಾವಿಯಲ್ಲಿ ನೀರಿದ್ದರಿಂದ ರೈತರು ಹಗಲು, ರಾತ್ರಿ ಎನ್ನದೆ ಆಗಾಗ ಬಿಡುವು ನೀಡಿ, ನೀರನ್ನು ಸ್ಪ್ರಿಂಕ್ಲರ್ ಮೂಲಕ ಗಿಡಗಳಿಗೆ ಸಿಂಪಡಿಸುತ್ತಿದ್ದಾರೆ. ಹೆಚ್ಚೆಂದರೆ ಒಂದು ವಾರ ನೀರು ದೊರಕಬಹುದು. ಅಲ್ಲಿಯವರೆಗೆ ಮಳೆಯಾದರೆ ಗಿಡಗಳು ಉಳಿಯುತ್ತವೆ ಇಲ್ಲದಿದ್ದರೆ ನಾಶವಾಗುತ್ತವೆ.
ರೋಬಸ್ಟಾ ಕಾಫಿ ಬೆಲೆ ಇಳಿಕೆ:
ರೋಬಸ್ಟಾ ಗಿಡಗಳಿಗೆ ಹೆಚ್ಚು ನೆರಳು ಇರಬಾರದೆಂಬ ಉದ್ದೇಶದಿಂದ ಕಾಫಿ ಕೊಯ್ಲು ಮಾಡಿದ ನಂತರ ಮರಗಸಿ ಮಾಡಿ ಬಯಲು ಮಾಡುತ್ತಾರೆ. ಬಿಸಿಲ ಧಗೆ ಅತಿಯಾಗಿ ನೆರಳಿಲ್ಲದಿರುವುದರಿಂದ ವಿಶೇಷವಾಗಿ ರೋಬಸ್ಟಾ ಕಾಫಿ ಗಿಡಗಳು ಸಂಪೂರ್ಣ ಒಣಗುತ್ತಿವೆ. ಅರೆಬಿಕಾಗಿಂತ ರೋಬಸ್ಟಾ ಕಾಫಿಗೆ ಹೆಚ್ಚು ಬೆಲೆ ಇತ್ತಾದರೂ ಕಳೆದ ಒಂದು ವಾರದಿಂದ ಬೆಲೆ 1000ರಿಂದ 2000 ರೂ. ವರೆಗೆ ಇಳಿದಿದ್ದು, ಇದನ್ನೆ ನಂಬಿರುವ ರೈತರು ಒಂದೆಡೆ ಗಿಡ ಒಣಗುತ್ತಿದ್ದರೆ, ಇನ್ನೂಂದೆಡೆ ಬೆಲೆ ಇಳಿಕೆಯಿಂದ ದಿಕ್ಕೇ ದೋಚದಂತಾಗಿದೆ.
ಈ ಮಧ್ಯೆ ಆಲೂರು, ಸಕಲೇಶಪುರ ತಾಲೂಕುಗಳಿಗೆ ಸೀಮಿತವಾಗಿದ್ದ ಕಾಡಾನೆಗಳ ಹಾವಳಿ, ಬೇಲೂರು ತಾಲೂಕಿಗೂ ಮುಂದುವರೆದಿದ್ದು, ಈಗಾಗಲೇ ಪ್ರಾಣ ಹಾನಿಗಳು ಉಂಟಾಗಿರುವುದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಭಯ ಪಡುತ್ತಿದ್ದಾರೆ. ಆನೆಗಳು ಆಹಾರ ಹಾಗೂ ನೀರನ್ನು ಹರಸಿಕೊಂಡು ಕಾಡಿನಿಂದ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಲಕ್ಷಾಂತರ ಮೌಲ್ಯದ ಬೆಳೆ ನಾಶದಿಂದಾಗಿ ಕೆಲ ರೈತರು ಕಂಗಾಲಾಗಿದ್ದಾರೆ. ಹೊಳೆ ಹಾಗೂ ಸರ್ಕಾರಿ ಕೆರೆಗಳಲ್ಲಿ ಮೋಟಾರ್ ಇಳಿಸಲು ಅನುಮತಿ ನಿರಾಕರಿಸಿದ್ದು, ಇದರಿಂದಾಗಿ ಕಾಫಿ ಗಿಡಗಳಿಗೆ ನೀರು ಸಿಂಪಡಿಸುವುದು ಬೆಳೆಗಾರರಿಗೆ ಕಷ್ಟವಾಗಿದೆ.
ಜಿಲ್ಲೆಯಲ್ಲಿ ಮಳೆಯಾಗದ ಕಾರಣ ವಾತವರಣದಲ್ಲಿನ ಧಗೆ ಏರುತ್ತಿದೆ. ಇದಲ್ಲದೆ ಮಳೆ ಕೈಕೊಟ್ಟಿರುವುದರಿಂದ ಹೊಳೆ, ಕೆರೆ, ಹಳ್ಳಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿದೆ. ಹೇಮಾವತಿ, ಯಗಚಿ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಬೋರ್ ವೆಲ್ ಗಳು, ಬಾವಿಗಳು ಬತ್ತಿ ಹೋಗುತ್ತಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ಹಲವು ಪ್ರದೇಶಗಳಲ್ಲಿ ಉಂಟಾಗಿದೆ. ವಾತವರಣದಲ್ಲಿನ ಅತಿಯಾದ ಉಷ್ಣಾಂಶದಿಂದಾಗಿ ಅರಣ್ಯದಲ್ಲಿನ ಪ್ರತಿಯೊಂದು ಸಸ್ಯಪ್ರಭೇದವು ಒಣಗಿನಿಂತಿವೆ. ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಹಲವೆಡೆ ದಿನನಿತ್ಯದ ಅಗತ್ಯಗಳಿಗಾಗಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಫಿ ತೋಟಗಳಲ್ಲಿ, ಹೊಲಗದ್ದೆಗಳಲ್ಲಿ ಹಾಗೂ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಸುಡುವ ಬಿಸಿಲಿನಲ್ಲೆ ಕೆಲಸ ಮಾಡಬೇಕಾಗಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಲವು ಕಾರ್ಮಿಕರು ಬಿಸಿಲಿನ ಝಳಕ್ಕೆ ಹೆದರಿ ಕೂಲಿ ಕೆಲಸಕ್ಕೆ ಸರಿಯಾಗಿ ಹೋಗದಿರುವುದರಿಂದ ಕಾಫಿ ತೋಟಗಳಲ್ಲಿ ಕೆಲಸಗಳು ಮುಂದಕ್ಕೆ ಹೋಗುವಂತಾಗಿದೆ. ಬಿಸಿಲ ಹಿನ್ನೆಲೆಯಲ್ಲಿ ಜನ ತಂಪುಪಾನೀಯಗಳ ಮೊರೆಗೆ ಹೋಗುತ್ತಿರುವುದರಿಂದ ಅತಿಯಾದ ತಂಪು ಪಾನೀಯಗಳ ಸೇವನೆಯಿಂದ ನೆಗಡಿ ಹಾಗೂ ಜ್ವರಕ್ಕೆ ತುತ್ತಾಗುತ್ತಿದ್ದಾರೆ.
ಮಳೆ ನಂಬಿಕೊಂಡು ಅಡಕೆ, ಶುಂಟಿ, ಕಾಫಿ ಬೆಳೆ ಮಾಡಿದ್ದೇವೆ. 6 ತಿಂಗಳಾದರೂ ಮಳೆಯಾಗಿಲ್ಲ. ಭೂಮಿ ಉಳುಮೆ ಮಾಡಿಲ್ಲ. ಎಲ್ಲ ಗಿಡಗಳು ಬಿಸಿಲ ಧಗೆಯಿಂದ ಸುಟ್ಟು ಹೋಗುತ್ತಿವೆ. ಕಾಫಿ ಕೊಯ್ಲು ಮಾಡುವಾಗ ಕಾಡಾನೆಗಳು ಗಿಡಗಳನ್ನು ತುಳಿದು ನಾಶ ಮಾಡಿದವು. ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗಲಿಲ್ಲ. ಈಗ ಮಳೆಯಾಗದೆ ನಷ್ಟಕ್ಕೊಳಗಾಗಿದ್ದೇವೆ.
ಎಸ್.ಎಸ್.ಶಿವಮೂರ್ತಿ, ಕಾಫಿ ಬೆಳೆಗಾರ, ಸಿದ್ಧಾಪುರ
ತೀವ್ರ ಬರ ಕಾಡುತ್ತಿದೆ. ನಮ್ಮ ತೋಟ ಉಳಿಸಿಕೊಳ್ಳಲು ಬೋರ್ ವೆಲ್ ನಿಂದಾದರೂ ನೀರು ಹಾಯಿಸಿಕೊಳ್ಳೋಣ ಎಂದರೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಇನ್ನೊಂದೆಡೆ ಆನೆಗಳು ಕಾಫಿ ತೊಟಗಳಿಗೆ ಹಿಂಡು ಹಿಂಡಾಗಿ ನುಗ್ಗಿ ಕಾಫಿ ಗಿಡಗಳನ್ನು ನಾಶಮಾಡುತ್ತಿದ್ದು, ಇದರಿಂದ ಕಾರ್ಮಿಕರು ಭಯ ಪಟ್ಟು ಕೆಲಸಕ್ಕೆ ಬರುತ್ತಿಲ್ಲ.
ಬಿ.ಕೆ.ಲಿಂಗರಾಜು, ಅಧ್ಯಕ್ಷರು, ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಭರತೂರು
ಕಾಫಿ ತೋಟಗಳು ನೀರಿಲ್ಲದೆ ಬಣಗುಡುತ್ತಿವೆ. ಈ ಮಧ್ಯೆ ಆನೆಗಳು ಕಾಫಿ ತೊಟಗಳಿಗೆ ಹಿಂಡಿಂಡಾಗಿ ನುಗ್ಗಿ ಕಾಫಿ ಗಿಡಗಳನ್ನು ನಾಶಮಾಡುತ್ತಿವೆ ಆನೆಗಳಿಗೆ ಹೆದರಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.
ವೈ.ಎಸ್.ಸಿದ್ದೇಗೌಡ, ಗೆಂಡೆಹಳ್ಳಿ ಬೇಲೂರು ತಾಲ್ಲೂಕು
ಎಸ್.ಎಸ್.ಶಿವಮೂರ್ತಿ
ಬಿ.ಕೆ.ಲಿಂಗರಾಜು
ವೈ.ಎಸ್.ಸಿದ್ದೇಗೌಡ
ಮೆಣಸಿನ ಬಳ್ಳಿ ಒಣಗಿರುವುದು