ತಗ್ಗು ಪ್ರದೇಶಗಳೀಗೆ ನುಗ್ಗಿದ ನೀರು
ಪ್ರತಿನಿಧಿ ವರದಿ ಚಿಕ್ಕಮಗಳೂರು
ಜಿಲ್ಲೆಯ ಕೆಲವೆಡೆ ಮಂಗಳವಾರ ಆಲಿಕಲ್ಲು ಸಹಿತ ಮಳೆಯಾಗಿದ್ದು, ಹಲವೆಡೆ ಒಂದೂವರೆ ಗಂಟೆಗೂ ಅಧಿಕ ಕಾಲ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಉರಿ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಸಂತಸ ತಂದಿದ್ದು, ಭೂಮಿಯನ್ನು ತಂಪಾಗಿಸಿದೆ.
ನಗರದಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಮಳೆಯ ನೀರು ಕೆಲ ತಗ್ಗು ಪ್ರದೇಶಗಳಿಗೆ, ರಸ್ತೆಗಳಿಗೆ ನುಗ್ಗಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ನಗರದ ಎಂ.ಜಿ ರಸ್ತೆಯ 2ನೇ ಕ್ರಾಸ್ ರಸ್ತೆಗೆ ನೀರು ನುಗ್ಗಿ ಕೆಲ ದ್ವಿಚಕ್ರ ವಾಹನಗಳು ಅರ್ಧ ನೀರಲ್ಲಿ ಮುಳುಗಿಹೋಗಿದ್ದವು. ಗಾಂಧಿ ನಗರ, ಮಾರ್ಕೆಟ್ ರಸ್ತೆ, ಶಂಕರಪುರ ಬಡಾವಣೆ ಸೇರಿ ಹಲವೆಡೆ ತಗ್ಗು ಪ್ರದೇಶಗಳ ಕೆಲ ಮನೆಗಳಿಗೂ ನೀರು ನುಗ್ಗಿದೆ. ನೀರು ಸರಾಗವಾಗಿ ಹರಿಯಲು ಸ್ಥಳವಕಾಶವಿಲ್ಲದೆ ನೀರು ನುಗ್ಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಜಿಲ್ಲಾ ಆಟದ ಮೈದಾನದಲ್ಲಿ ಕೂಡ ಮಳೆ ನೀರು ತುಂಬಿ ರಸ್ತೆಗೆ ಹರಿದಿದೆ. ಮೌಂಟೆನ್ಯೂ ಶಾಲೆ ಸಮೀಪ ರಸ್ತೆಗೆ ಮರ ಉರುಳಿ ಬಿದ್ದು, ಸಂಚಾರಕ್ಕೆ ಕೆಲಹೊತ್ತು ತೊಂದರೆಯಾಯಿತು. ಆಲ್ಡೂರು ರಸ್ತೆಯ ಆಂಬರ್ ವ್ಯಾಲಿ ಶಾಲೆ ಬಳಿ ಮರವೊಂದು ಉರುಳಿ ಬಿದ್ದಿದ್ದರಿಂದ ಒಂದು ಕಡೆಯ ರಸ್ತೆ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ನಗರದ ಮಧುವನ ಲೇಔಟು, ಅಯ್ಯಪ್ಪನಗರ, ನೆಹರು ನಗರ ಸೇರಿ ಹಲವೆಡೆ ಕೆಲ ಮರಗಳ ರೆಂಬೆಗಳು ಗಾಳಿಗೆ ಮುರಿದು ಬಿದ್ದಿವೆ. ಕೆಲವೆಡೆ ವಿದ್ಯುತ್ ತಂತಿಗೆ ಸಣ್ಣ ಪುಟ್ಟ ಹಾನಿಯುಂಟಾಗಿದೆ. ಚಿಕ್ಕಮಗಳೂರು ತಾಲೂಕಿನ ಕಣಿವೆ, ಲಕ್ಯಾ, ಕೈಮರ, ಅರಿಶಿಣಗುಪ್ಪೆ, ಮಲ್ಲೇನಹಳ್ಳಿ, ಇಂದಾವರ, ಹುಕ್ಕುಂದ ಸೇರಿ ಹಲವೆಡೆ ಮಧ್ಯಾಹ್ನದಿಂದ ಸಂಜೆವರೆಗೆ ಮಳೆಯಾಗಿದೆ.