ಮೈಸೂರು
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪಾರಿವಾಳಗಳಿಗೆ ಧಾನ್ಯ ಹಾಕುವುದನ್ನು ನಿಷೇಧಿಸಿ, ಅರಮನೆಯ ಸೌಂದರ್ಯ ಹಾಗೂ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ತಪ್ಪಿಸಬೇಕೆಂದು ಆರ್. ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರದ ಆವರಣದಲ್ಲಿ ಕೆಲವರು ಪ್ರತಿನಿತ್ಯವೂ ಪಾರಿವಾಳಗಳಿಗೆ ಧಾನ್ಯಗಳನ್ನು ಹಾಕುತ್ತಾರೆ. ಇದರಿಂದ ನೂರಾರು ಪಾರಿವಾಳಗಳು ಬರುವುದರಿಂದ ಅರಮನೆಯ ಅಂದಗೆಡಲು ಹಾಗೂ ಕಟ್ಟಡಕ್ಕೆ ಅಸ್ಥಿರತೆ ಉಂಟಾಗಲು ಕಾರಣವಾಗಿದೆ. ಅಲ್ಲದೇ ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳಗಳು ಬರುವುದರಿಂದ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಹಾಗೂ ಅದರ ಆವರಣ ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾರಿತ್ರಿಕ ಕೊಡುಗೆಗಳನ್ನು ನೀಡಿದ ಅವರನ್ನು ಅಪಮಾನಿಸುವಂತಾಗಿದೆ. ಅಲ್ಲದೇ ಅರಮನೆಯ ಸುತ್ತಮುತ್ತ ವ್ಯಾಪಾರವನ್ನಾಶ್ರಯಿಸಿರುವ ಹಾಗೂ ದೇವಸ್ಥಾನಗಳ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಅರ್ಚಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಮೈಸೂರಿನ ಹೆಮ್ಮೆ, ವಿಶ್ವವಿಖ್ಯಾತಿಯ ಸುಂದರ ಅರಮನೆಯ ಆಯಾಕಟ್ಟಿನ ಸ್ಥಳಗಳಲ್ಲಿ ಗೂಡು ಕಟ್ಟಿಕೊಂಡಿರುವ ಪಾರಿವಾಳಗಳು ಅರಮನೆಯ ಸೌಂದರ್ಯ ಹಾಗೂ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಮೈಸೂರು ಜಿಲ್ಲಾಡಳಿತ, ಮೈಸೂರು ಮಹಾನರ ಪಾಲಿಕೆ ಹಾಗೂ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು, ಪಾರಿವಾಳಗಳಿಗೆ ಧಾನ್ಯ ತಂದು ಚೆಲ್ಲುವವರಿಗೆ ತಡೆದು ಅರಮನೆಯ ಸುತ್ತಳತೆಯ 2 ಕಿ.ಮೀ ವ್ಯಾಪ್ತಿಯವರೆಗೆ ಇಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡುವುದನ್ನು ನಿಷೇಧಿಸುವಂತೆ ಪರಂಪರೆ ಹಾಗೂ ಪರಿಸರ ಕಾಳಜಿಯ ನಾಗರೀಕರ ಪರವಾಗಿ ಒತ್ತಾಯಿಸುತ್ತೇನೆ.
ಅಲ್ಪ ವೆಚ್ಚದಲ್ಲಿ ಮಹಾನ್ ಪುಣ್ಯ ಕಟ್ಟಿಕೊಳ್ಳುತ್ತೇವೆ ಎಂಬ ಭ್ರಮೆಯಲ್ಲಿ ಕೆಲವರು ಪಾರಿವಾಳಗಳಿಗೆ ಧಾನ್ಯಗಳನ್ನು ತಂದು ಚೆಲ್ಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಂಡು ಪಾರಂಪರಿಕ ಅರಮನೆ ಸುರಕ್ಷತೆ ಕಾಪಾಡುವಂತೆ ಮೈಸೂರಿನ ಪರಂಪರೆ ಹಾಗೂ ಪರಿಸರ ಕಾಳಜಿಯ ನಾಗರೀಕರ ಪರವಾಗಿ ಮನವಿ ಮಾಡುತ್ತೇನೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
================