ರಾಮನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಮನಗರದ ಎಸ್ ಪಿ ಮತ್ತು ಡಿಸಿ ಅವರು ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜೆಡಿಎಸ್ ಮಾಧ್ಯಮ ವಕ್ತಾರ ವಿ. ನರಸಿಂಹಮೂರ್ತಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಉದ್ದೇಶಪೂರ್ವಕವಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುವುದು ನಿಲ್ಲದಿದ್ದರೆ ಜಿಲ್ಲಾ ಪೊಲೀಸ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಜೆಡಿಎಸ್ ಕಾರ್ಯಕರ್ತರು ಸೈನಿಕರಿದ್ದಂತೆ ಇಂತಹ ಕುತಂತ್ರಕ್ಕೆಲ್ಲ ಜಗ್ಗುವುದಿಲ್ಲ. ಇದು ರಾಮನಗರ , ಕನಕಪುರ ಅಲ್ಲ ಎಂದರು.
ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ ಲೋಕಸಭೆ ಚುನಾವಣೆ ಮತದಾನದ ನಂತರ ಡಿ.ಕೆ. ಸಹೋದರರಿಗೆ ಸೋಲಿನ ಮುನ್ಸೂಚನೆ ಸಿಕ್ಕಿದೆ. ಇದರಿಂದ ಹತಾಶರಾಗಿ ಈಗಿಂದಲೇ ರಾಮನಗರದಲ್ಲಿ ದ್ವೇಷದ ರಾಜಕೀಯ ಪ್ರಾರಂಭಿಸಿದ್ದಾರೆ. ಇದರ ಪರಿಣಾಮ ರಾಜಕೀಯ ಪ್ರೇರಿತವಾಗಿ ಸುಳ್ಳು ಮೊಕ್ಕದಮ್ಮೆ ಗಳನ್ನು ಹಾಕಿ ನಮ್ಮ ಕಾರ್ಯಕರ್ತರನ್ನು ರಾತ್ರೋ ರಾತ್ರಿ ಬಂಧಿಸಿದ್ದಾರೆ. ಯಾವುದೇ ಆಧಾರವಿಲ್ಲದ ಕೇಸ್ ನಲ್ಲಿ ಸೂಕ್ತ ತನಿಖೆಯನ್ನು ನಡೆಸದೆ ನಮ್ಮ ಕಾರ್ಯಕರ್ತರಿಗೆ ಕಿರುಕುಳ ನೀಡಿ ಬಂಧಿಸುತ್ತಿದ್ದಾರೆ ಎಂದರು.
ಎಸ್ ಐಟಿ ಪೊಲೀಸರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಆಶ್ಲೀಲ ವಿಡಿಯೋ ಬಿಡುಗಡೆ ಮಾಡಿದವನ್ನು ಬಂಧಿಸದೆ ಸುಮ್ಮನ್ನಿದ್ದಾರೆ. ಆದರೆ ರಾಮನಗರದ ಪೊಲೀಸರು ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಎಸ್ ಐಟಿಗೆ ರಾಮನಗರ ಪೊಲೀಸರನ್ನು ಬಳಸಿಕೊಳ್ಳಬೇಕು ಎಂದರು.
ರಾಮನಗರದ ಎಸ್ಪಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸೇರಬೇಕು. ಮೊನ್ನೆ ಎಂಪಿ ಚುನಾವಣೆಗೆ ನಿಲ್ಲಬಹುದಿತ್ತು ಎಂದು ಎಸ್ ಪಿ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ನಾಯಕರಿಗಿಂತ ತುಂಬಾ ಉತ್ಸಾಹದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ ಎಂದು ಆಪಾದಿಸಿದರು.
ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಆಕ್ರೋಶ : ಶಾಸಕರ ತೇಜೋವಧೆ ಮಾಡುವಂತ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಇಲ್ಲಿನ ಸಿಇಎನ್ ಪೊಲೀಸ್ ಠಾಣೆ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ತಡರಾತ್ರಿ ಪೊಲೀಸರು ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದ್ದರು. ಈ ಕಾರಣ ಕಾರ್ಯಕರ್ತರ ರಕ್ಷಣೆಗೆ ಠಾಣೆ ಎದುರು ಜಮಾಯಿಸಿದ ಉಬಯ ಪಕ್ಷದ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಅಲ್ಲದೆ ಡಿ.ಕೆ.ಸಹೋದರರು, ಶಾಸಕರ ಅಣತಿಯಂತೆ ರಾಮನಗರ ಪೊಲೀಸರು ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದರು.
ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳಬಾರದು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಇಎನ್ ಠಾಣೆಯಲ್ಲಿ ಕೆಲ ಕಾಲ ಪೊಲೀಸರು ಮತ್ತು ಮುಖಂಡರು ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರಾದ ಎಚ್.ಎಂ. ಪುರುಷೋತ್ತಮ್ ಮತ್ತು ಶ್ರೀನಿವಾಸ್ ರಾಮನಗರ ಇವರ ವಿರುದ್ಧ ದೂರು ದಾಖಲಿಸಿದರು.
ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಗಳನ್ನು ಹಾಕಾಲಾಗಿದೆ ಎಂದು ದೂರು ಸಲ್ಲಿಸಿ ಶೀಘ್ರ ಆರೋಪಿಗಳ ಬಂಧನ ಮಾಡಬೇಕು ಎಂದು ಆಗ್ರಹಿಸಿದರು.
ನಗರಸಭಾ ಸದಸ್ಯ ಆರ್.ಎ. ಮಂಜುನಾಥ್, ಮುಖಂಡರಾದ ಸಬ್ಬಕೆರೆ ಶಿವಲಿಂಗಯ್ಯ, ಗೂಳಿಗೌಡ, ಕೃಷ್ಣ, ರಮೇಶ್, ಗೋವಿಂದರಾಜು ಕೊತ್ತೀಪುರ, ಅಂಜನಾಪುರ ವಾಸು, ರಾಜಶೇಖರ್, ಜಯಕುಮಾರ್, ಮಂಜೇಶ್ ಗೌಡ, ರಂಗನಾಥ್, ಸಂಜಯ್ ಪದಂ, ರಂಗನಾಥಪ್ಪ, ಯೋಗೇಶ್ ಇತರರು ಇದ್ದರು.