ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರು ಪ್ರಜ್ಜಲ್ ರೇವಣ್ಣ ಪ್ರಕರಣ ಜೆಡಿಎಸ್-ಬಿಜೆಪಿ ಮೈತ್ರಿ ಮೇಲೆ ಯಾವುದೇ ಪರಿಣಾಮ ಬೀರದು, ಎರಡು ಪಕ್ಷಗಳ ನಡುವಿನ ಹೊಂದಾಣಿಕೆ ಮುಂಬರುವ ಚುನಾವಣೆಗಳಲ್ಲೂ ಮುಂದುವರಿಯುವುದು ಅಂತ ಹೇಳಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಗೆ ಎರಡು ಸ್ಥಾನ ಬಿಟ್ಟುಕೊಟ್ಟು, ಬಿಜೆಪಿ 4 ಸ್ಥಾನಗಳನ್ನು ಇಟ್ಟುಕೊಳ್ಳಲು ಮಾತುಕತೆಯಾಗಿದೆ, ಪ್ರಾಯಶಃ ಇಂದು ಸಾಯಂಕಾಲ ಪಕ್ಷದ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಲು ಎಸ್ಐಟಿ ಸಮರ್ಥವಾಗಿದೆ ಅನ್ನೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ, ಅದರೆ ಬಹಳಷ್ಟು ಜನ ಸಿಬಿಐ ತನಿಖೆಯೇ ಸೂಕ್ತ ಅಂತ ಹೇಳುತ್ತಿರವುದರಿಂದ ತಾನು ಸಹ ಕೇಂದ್ರ ತನಿಖಾ ದಳಕ್ಕೆ ಪ್ರಕರಣ ಒಪ್ಪಿಸಲಿ ಅನ್ನುತ್ತೇನೆ ಎಂದು ಬಿಎಸ್ವೈ ಹೇಳಿದರು. ಪೆನ್ ಡ್ರೈವ್ ಗಳ ಬಗ್ಗೆ ಮತ್ತು ಈಶ್ವರಪ್ಪ ಬಗ್ಗೆ ತಾನು ಮಾತಾಡಲು ಇಷ್ಟಪಡಲ್ಲವೆಂದ ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿವೈ ರಾಘವೇಂದ್ರ ಎರಡೂವರೆ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದರು.