- ಕನಿಷ್ಠ ಮೂಲಭೂತ ಸೌಲಭ್ಯಕ್ಕಾಗಿ ಗ್ರಾಮ ಜನತೆಯ ಪರದಾಟ
ಸುರೇಶ್ ಅಜ್ಜೀಪುರ ಹನೂರು
ಗುಂಡಿ ಬಿದ್ದ ರಸ್ತೆ, ಚರಂಡಿಯಿಲ್ಲದೆ ರಸ್ತೆಯಲ್ಲಿ ಹರಿಯುವ ಚರಂಡಿ ನೀರು, ಕುಡಿಯುವ ನೀರಿಗೆ ತೊಂದರೆ, ಸ್ಮಶಾನಕ್ಕಾಗಿ ಹಳ್ಳವೇ ಆಶ್ರಯ ಇದು ಅಂಬಿಕಾಪುರ ಮೇಡು ಗ್ರಾಮದ ಸ್ಥಿತಿಯಾಗಿದೆ.
ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ದೊಮ್ಮನಗದ್ದೆ, ವಡ್ಡರದೊಡ್ಡಿ ಹಾಗೂ ಕುರುಬರದೊಡ್ಡಿ, ಜೊತೆಗೆ ಈ ಅಂಬಿಕಾಪುರ ಗ್ರಾಮ, ಅಂಬಿಕಾಪುರ ಮೇಡು ಗ್ರಾಮವು ಪಂಚಾಯಿತಿ ಕೇಂದ್ರ ಸ್ಥಾನದಿಂದ ಸನಿಹದಲ್ಲೇ ಇದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ವಿವಿಧ ಸಮುದಾಯದ ಜನರು ವಾಸಿಸುವ ಈ ಗ್ರಾಮದಲ್ಲಿ ಕನಿಷ್ಠ ಮೂಲ ಸೌಲಭ್ಯಕ್ಕಾಗಿ ಪರದಾಟ ಶುರುವಾಗಿದೆ.
ಗುಂಡಿ ಬಿದ್ದ ರಸ್ತೆ: ಅಂಬಿಕಾಪುರ ಗ್ರಾಮದಲ್ಲಿ ಮುಖ್ಯ ರಸ್ತೆಯು ಭಾರಿ ಗಾತ್ರದ ಗುಂಡಿ ಬಿದ್ದು ವಾಹನ ಸಂಚಾರರು ಸಂಚರಿಸಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ಗುಂಡಿ ಬಿದ್ದ ಪರಿಣಾಮ ಸಣ್ಣ ಪುಟ್ಟ ವಾಹನ ಸವಾರರು ಸಂಚಾರ ಮಾಡಲಾಗದೆ ಬಿದ್ದು ಗಾಯಗಳಾಗಿರುವ ನಿದರ್ಶನ ಸಹ ಇದೆ. ಹಾಗಾಗಿ, ಕನಿಷ್ಠ ಪಕ್ಷ ಮಣ್ಣಾದರು ಹಾಕಿಸಿ ಗುಂಡಿ ಮುಚ್ಚುವ ಕಾರ್ಯಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಸ್ತೆಯಲ್ಲಿ ಹರಿಯುವ ಚರಂಡಿ ನೀರು: ಗ್ರಾಮದಲ್ಲಿ ಮುಖ್ಯವಾಗಿ ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸದ ಪರಿಣಾಮ ಮನೆಗಳ ಗಲೀಜು ನೀರು ತಿರುಗಾಡುವ ರಸ್ತೆಯಲ್ಲಿ ಹರಿಯುತ್ತದೆ. ಆ ನೀರು ಅಲ್ಲೇ ನಿಲ್ಲುವುದರಿಂದ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟು, ಸಾಂಕ್ರಮಿಕ ರೋಗ ಹರಡುವ ಭೀತಿಯಲ್ಲಿ ಜನ ಕಾಲ ಕಳೆಯುತ್ತಿದ್ದಾರೆ. ಅದೇ ಹಾದಿಯಲ್ಲಿ ಜನರು ಸಹ ಸಂಚಾರ ಮಾಡಬೇಕಾಗಿದ್ದು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಸ್ಮಶಾನ ವ್ಯವಸ್ಥೆ ಇಲ್ಲ: ಗ್ರಾಮದಲ್ಲಿರುವ ಜನರಿಗೆ ಸ್ಮಶಾನ ವ್ಯವಸ್ಥೆ ಇಲ್ಲದೇ ಉಡುತೊರೆ ಹಳ್ಳದ ಬಳಿಯಲ್ಲೇ ಶವ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲದಲ್ಲಿ ಬಿಟ್ಟರೆ ಮಳೆಗಾಲದಲ್ಲಿ ಶವ ಸಂಸ್ಕಾರವನ್ನು ಹಳ್ಳದ ನೀರಿನಲ್ಲೇ ಮಾಡಬೇಕಾದ ಪರಿಸ್ಥಿತಿಯಾಗಿದೆ. ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಛೆತ್ತು ಸ್ಮಶಾನ ಮಂಜೂರು ಮಾಡಲು ಮುಂದಾಗಬೇಕು. ಈಗಾಗಲೇ, ಸ್ಮಶಾನ ಬೇಕು ಎಂದು ಅನೇಕ ಬಾರಿ ಪ್ರತಿಭಟನೆ ಸಹ ಮಾಡಲಾಗಿದ್ದು, ಅಧಿಕಾರಿಗಳ ಗಮನಕ್ಕೆ ಸಹ ತರಲಾಗಿದೆ. ಆದರೂ, ಇಂದು ನಾಳೆ ಎಂದೇ ಕಾಲ ದೂಡಬೇಕಿದೆ.
ನಿವೇಶನ ಹಂಚಿಕೆಯಾಗಿಲ್ಲ: ಅಂಬಿಕಾಪುರ ಗ್ರಾಮದ ಆದಿ ಜಾಂಭವ ಸಮುದಾಯದ ಬೀದಿಯಲ್ಲಿ ಸುಮಾರು 33 ಮನೆಗಳಿದ್ದು 120ಕ್ಕು ಹೆಚ್ಚು ಮತಗಳಿದೆ. ಆದರೇ, ಇವರು ಈಗಾಗಲೇ ಒಂದು ಮನೆಯಲ್ಲಿ 3 ಕುಟುಂಬಗಳು ವಾಸ ಮಾಡುತ್ತಿದೆ. ಇದರಿಂದ ನಿಜವಾದ ಜನರಿಗೆ ನಿವೇಶನ ಹಂಚಿಕೆಯಾಗದೆ ಆಗೆ ಉಳಿದಿದ್ದು ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿದಿನಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಲಕ್ಷಣ, ಪೆರುಮಾಳ್, ಶರವಣ, ದೊರೆ, ಸೆಲ್ವರಾಜು, ರಾಜ, ಇನ್ನಿತರರು ಆಗ್ರಹಿಸಿದ್ದಾರೆ.
ಜಲಜೀವನ್ ಮಿಷನ್ ನೀರು ಬರುತ್ತಿಲ್ಲ: ಗ್ರಾಮದಲ್ಲಿ ಜಲಜೀವನ್ ಮಿಷನ್ ಮುಗಿದಿದ್ದರೂ ಸಹ ಇನ್ನು ಕೂಡ ಸಂಪರ್ಕನೀಡಿಲ್ಲ. ಜನರು ನೀರಿಗಾಗಿ ನಿಲ್ಲಬೇಕಾಗಿದೆ. ಜನರಿಗೆ ಅನಾನುಕೂಲವಾಗಿದೆ ಹಾಗಾಗಿ ಆದಷ್ಟು ಬೇಗ ಜಲಜೀವನ್ ಮಿಷನ್ ಗೆ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
—————————–
ಅಂಬಿಕಾಪುರ ಗ್ರಾಮದಲ್ಲಿ ಸ್ಮಶಾನವಿಲ್ಲ ಜೊತೆಗೆ ಎಲ್ಲೆಲ್ಲಿ ಸ್ಮಶಾನ ವ್ಯವಸ್ಥೆ ಇಲ್ಲ ಎಂಬುದನ್ನು ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ.
-ವೈ.ಕೆ.ಗುರುಪ್ರಸಾದ್, ತಹಸೀಲ್ದಾರ್ ಹನೂರು ತಾಲೂಕು
ನಮ್ಮ ಗ್ರಾಮದಲ್ಲಿ ಜನರು ನೆಲೆನಿಂತು ಸಾಕಷ್ಟು ವರ್ಷ ಕಳೆದಿದೆ. ಇದೀಗ ಒಂದೇ ಮನೆಯಲ್ಲಿ ಮೂರು ಮೂರು ಕುಟುಂಬ ವಾಸ ಮಾಡುತ್ತಿದೆ. ಇದರಿಂದ ನಿವೇಶನ ಹಂಚಿಕೆ ಮಾಡಬೇಕು ಜೊತೆಗೆ ಸ್ಮಶಾನ ವ್ಯವಸ್ಥೆ ಇಲ್ಲದೆ ಪರದಾಟ ಶುರುವಾಗಿದೆ. ಮುಂದಾದರು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಬಣ್ಣಾರಿ, ಗ್ರಾಪಂ ಸದಸ್ಯರು, ಅಜ್ಜೀಪುರ ಗ್ರಾಮ ಪಂಚಾಯಿತಿ ಅಂಬಿಕಾಪುರ ಮೇಡು ಗ್ರಾಮ
——————————–
ಚಿತ್ರ: ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಗ್ರಾಮಸ್ಥರು ಸ್ಮಶಾನವಿಲ್ಲದೇ ಆಶ್ರಯ ಪಡೆದಿರುವ ಉಡುತೊರೆ ಹಳ್ಳ.
ಚಿತ್ರ: ಅಂಬಿಕಾಪುರ ಗ್ರಾಮದಲ್ಲಿ ರಸ್ತೆಯ ಮದ್ಯ ಭಾಗದಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದಿರುವುದು.