ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವೀಡಿಯೋಗಳ ಪೆನ್ ಡ್ರೈವ್ ಪ್ರಕರಣ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕನ ಆಪ್ತರೇ ಬಂಧನವಾಗಿದ್ದು, ಕಮಲ ನಾಯಕರಿಗೆ ಆಘಾತವಾಗಿದೆ. ಇದೀಗ ಮತ್ತೊಂದು ವಿಚಾರ ಬಹಿರಂಗಗೊಂಡಿದ್ದು, ಬಿಜೆಪಿಗರು ಇನ್ನಷ್ಟು ನಿದ್ದೆಗೆಡುವಂತೆ ಮಾಡಿದೆ. ಅದು ಪ್ರಕರಣ ಬೆಳಕಿಗೆ ಬರುವ ಮುನ್ನವೇ ಅಂದರೆ ಏಪ್ರಿಲ್ 21 ರಂದು ಪ್ರೀತಂಗೌಡ ಆಪ್ತ ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್ ನಾಯಕರು ದೂರು ನೀಡಿದ್ದರು.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ್ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಬೆಳಕಿಗೆ ಬಂತು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು.
ತದನಂತರ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (SIT) ರಚಿಸಿತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೆತ್ತಿಕೊಂಡ ಬಳಿಕ ಆರಂಭಿಕವಾಗಿಯೇ ಪ್ರೀತಂಗೌಡರ ಕೆಲ ಆಪ್ತರನ್ನು ಬಂಧಿಸಿತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಎಸ್ಐಟಿ ರವಿವಾರ (ಮೇ 12) ರಂದು ಪ್ರೀತಂಗೌಡ ಅವರ ಮತ್ತಿಬ್ಬರು ಆಪ್ತರನ್ನು ಬಂಧಿಸಿದೆ.
ಎ ಮಂಜು ಕೈ ಸೇರಿದ್ದ ಪೆನ್ಡ್ರೈವ್
ಪೈನ್ಡ್ರೈವ್ ಹಂಚಿಕೆ ಆರೋಪ ಹೊತ್ತಿರುವ ನವೀನ್ಗೌಡ ಎಂಬವರು ರವಿವಾರ ಫೇಸ್ಬುಕ್ನಲ್ಲಿ ಹಾಕಿದ್ದ ಒಂದು ಪೋಸ್ಟ್ ಶಾಸಕ ಎ ಮಂಜು ಕೊರಳಿಗೆ ಉರುಳು ತಂದಿದೆ. ಹೌದು ನವೀನ್ಗೌಡ ನಿನ್ನೆ (ಮೇ 12) ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ “ಏಪ್ರಿಲ್ 20 ರಂದು ನನಗೆ ರಸ್ತೆಯಲ್ಲಿ ಸಿಕ್ಕಿದ್ದ ಪೆನ್ಡ್ರೈವ್ ಅನ್ನು ಅರಕಲಗೂಡು ಶಾಸಕರಾದ ಎ ಮಂಜು ಅವರಿಗೆ ಏಪ್ರಿಲ್ 21 ರಂದು ಅರಕೂಲಗೂಡಿನ ಮಾರುತಿ ಕಲ್ಯಾಣ ಮಂಟಪದಲ್ಲಿ ನೀಡಿದ್ದೆ. ಹೆಚ್ ಕುಮಾರಸ್ವಾಮಿ ಅವರು ಹೇಳಿದ ಹಾಗೆ ವಿಡಿಯೋ ವೈರಲ್ ಹಿಂದೆ ಇರುವ ಮಹಾನಾಯಕ ಅರಕಲಗೂಡು ಶಾಸಕರೇ ಆಗಿರಬಹುದು” ಎಂದು ಪೋಸ್ಟ್ ಹಾಕಿಕೊಂಡಿದ್ದನು. ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದ್ದಂತೆ ತನ್ನ ಫೋಸ್ಟ್ ಅನ್ನು ಡಿಲಿಟಿ ಮಾಡಿದೆ.