೧೧ರ ಪೋರನಿಂದ ನಡೆದ ಒನಕೆ ಕರಗ
ಚಿಕ್ಕಬಳ್ಳಾಪುರ : ಸತತ ೨೮ ಗಂಟೆಗಳ ಕಾಲ ಕರಗ ಹೊರುವ ಮೂಲಕ ದಾಖಲೆ ಸೃಷ್ಟಿಸಿದ ನಗರದ ಶ್ರೀ ಜಾಲಾರಿ ಗಂಗಮಾಭ ದೇವಾಲಯದ ೬೨ನೇ ವರ್ಷದ ಶ್ರೀ ಧರ್ಮರಾಯರ ಹೂವಿನ ಕರಗಮಹೋತ್ಸವವು ಒನಕೆ ಕರಗದ ಮೂಲಕ ಸಂಪನ್ನಗೊಂಡಿತು.
ಮಹೋತ್ಸವದ ಅಂಗವಾಗಿ ಕಳೆದ ಮೇ೬ ರಿಂದ ಗಣಪತಿ ಹೋಮ, ಗಂಗಾದೇವಿ ಸಹಸ್ರಾರ್ಚನೆ, ಚಂಡಿಕಾಹೋಮ ಹಾಗೂ ಧರ್ಮರಾಯರ ಹಸಿ ಕರಗ ಮಹೋತ್ಸವ ಆಚರಿಸಲಾಗಿತ್ತು. ಶನಿವಾರ ರಾತ್ರಿ ೯ಕ್ಕೆ ಮೇಲೂರಿನ ಕೆ.ಧರ್ಮೇಂದ್ರ ಹೊತ್ತ ಹೂವಿನ ಕರಗಕ್ಕೆ ದೇವಾಲಯದಿಂದ ಚಾಲನೆ ನೀಡಲಾಯಿತು. ಬಳಿಕ ನಗರದ ಪ್ರಮುಖ ರಸ್ತೆ ಬೀದಿಗಳಲ್ಲಿ ಸಂಚರಿಸಿ, ಭಕ್ತರಿಂದ ಪೂಜೆಯನ್ನು ಪಡೆದರು.
ಸತತ ೨೮ ಗಂಟೆಗಳ ಕಾಲ ಕರಗವನ್ನು ಹೊತ್ತು ನಗರದಲ್ಲಿ ಸಂಚರಿಸುವ ಮೂಲಕ ಭಕ್ತರನ್ನು ವಿಸ್ಮಿತರನ್ನಾಗಿಸಿದರು. ಶನಿವಾರ ರಾತ್ರಿ ೯ಕ್ಕೆ ಆರಂಭವಾದ ಕರಗವು ಭಾನುವಾರ ತಡರಾತ್ರಿ ೧೨ರವರೆಗೆ ಹೊತ್ತು ಶ್ರೀ ಜಾಲಾರಿ ಗಂಗಾಮಾಭ ದೇವಾಲಯದಲ್ಲಿ ಮುಂಭಾಗದ ಅಗ್ನಿಕುಂಡ ಪ್ರವೇಶಿಸಿದ ಕೆ.ಧರ್ಮೇಂದ್ರ ಅವರು ಶಾಸ್ತ್ರೋಕ್ತವಾಗಿ ಕರಗವನ್ನು ಕೆಳಗಿಳಿಸಿದರು.
ಧರ್ಮರಾಯರ ಕರಗ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳುವ ಒನಕೆ ಕರಗ ಮಹೋತ್ಸವವು (ವಸಂತೋತ್ಸವ) ನಗರದ ಭುವನೇಶ್ವರಿ ವೃತ್ತದಲ್ಲಿ ಅದ್ಧೂರಿಯಾಗಿ ನಡೆಯಿತು. ಕರಗ ಪೂಜಾರಿ ಧರ್ಮೇಂದ್ರ ಅವರು ಕುಣಿಯುವ ವ್ಯಕ್ತಿ ಕೆಂಪುಬಟ್ಟೆಯ ವೀರಗಾಸೆ, ಸೊಂಟಕ್ಕೆ ನಡುಪಟ್ಟಿ, ಕೊರಳಿಗೆ ಹಾರ, ಹಣೆಗೆ ಗಂಧ, ಕುಂಕುಮ, ಕಾಲಿಗೆ ಗೆಜ್ಜೆ ಧರಿಸಿ ಸುಮಾರು ೫-೬ ಉದ್ದದ ಒನಕೆಯ ಮೇಲೆ ಅರಿಶಿಣ ನೀರು ತುಂಬಿದ ತಾಮ್ರದ ಪಾತ್ರೆಯನ್ನಿಟ್ಟು ತಮಟೆಯ ವಾದನಕ್ಕೆ ತಕ್ಕಂತೆ ನೃತ್ಯ ಮಾಡಿದರು.
ನೃತ್ಯ ಮಾಡುವ ವೇಳೆ ಪಾತ್ರೆಯಲ್ಲಿದ್ದ ಅರಿಶಿಣದ ನೀರನ್ನು ತಮ್ಮ ನೃತ್ಯ ಕಲೆಯ ಮೂಲಕ ನೆಲಕ್ಕೆ ಚುಮ್ಮುವಂತೆ ಮಾಡುವ ದೃಶ್ಯಗಳನ್ನು ನೆರೆದಿದ್ದ ನಾಗರಿಕರು ಮೊಬೈಲ್ಗಳಲ್ಲಿ ಸೆರೆಹಿಡಿಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಒನಕೆ ಕರಗ ಮಹೋತ್ಸವದ ಕೊನೆಯ ಘಟ್ಟವಾಗಿ ಪಾತ್ರೆಯಲ್ಲಿ ಉಳಿದ ನೀರನ್ನು ಅಲ್ಲಿ ನೆರೆದವರ ಮೇಲೆ ಎರಚುವ ಮೂಲಕ ಕರಗ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ಗಮನ ಸೆಳೆದ ೧೨ರ ಪೋರ: ತುದಿಯಲ್ಲಿ ನೀರು ತುಂಬಿರುವ ಪಾತ್ರೆಯನ್ನು ಮೇಲಿರಿಸಿರುವ ಸುಮಾರು ೫-೬ ಅಡಿ ಉದ್ದದ ಒನಕೆಯನ್ನು ತಲೆಯ ಮೇಲಿಟ್ಟುಕೊಂಡು ತಮಟೆಯ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ೧೨ರಪೋರ ಸುಮಾರು ೫ ರಿಂದ ೧೦ ನಿಮಿಷ ಒನಕೆ ಕರಗ ಹೊತ್ತು ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದ ಸಾರ್ವಜನಿಕರನ್ನು ನಿಬ್ಬೆರಗಾಗುವಂತೆ ಮಾಡುವಲ್ಲಿ ಯಶಸ್ವಿಯಾದ. ಕರಗ ಪೂಜಾರಿ ಧರ್ಮೇಂದ್ರ ಅವರ ಅಕ್ಕನ ಮಗನಾದ ೧೨ ವರ್ಷದ ಪ್ರಜ್ಚಲ್ (ಅಚ್ಚು) ಚಮತ್ಕಾರಯುತ ಕಲೆಯನ್ನು ಪ್ರದರ್ಶಿಸಿದ ಪೋರನಾಗಿದ್ದು, ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವದ ಅಂಗವಾಗಿ ನಡೆದ ಒನಕೆ ಕರಗ ಮಹೋತ್ಸವದಲ್ಲಿ ಸಾಂಕೇಂತಿಕವಾಗಿ ಒನಕೆ ಕರಗವನ್ನು ಹೊತ್ತು ಎಲ್ಲರ ಮೆಚ್ಚುಗೆಗೆ ಪಾತ್ರನಾದ.