ಕೋಲಾರ: ದಿವಂಗತ ಶ್ರೀರಾಮರೆಡ್ಡಿ ಮೇಷ್ಟ್ರು ನೆನಪಿನಲ್ಲಿ ಬುಡ್ಡಿ ದೀಪ ವೇದಿಕೆಯ ಆಶ್ರಯದಲ್ಲಿ ಸಂಸ್ಕೃತಿ ಸಂಗಮ-೩ರಡಿ ನೆಲ ಗಮಲು ನಾಟಕೋತ್ಸವವನ್ನು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮೇ ೧೮ ಮತ್ತು ೧೯ ರಂದು ಆಯೋಜಿಸಲಾಗಿದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ.೧೮ರ ಶನಿವಾರ ಹಕ್ಕಿ ಹಾಡು ಮತ್ತು ಮೇ.೧೯ರ ಭಾನುವಾರ ಗಾದೆ ಗರ್ರಕ್ಕ ನಾಟಕ, ದೊಡ್ಡ ಮಾರಿ ಚಿಕ್ಕ ಮಾರಿ ಹಾಗೂ ಕುಸ್ಕುಸ್ ದಿಲ್ ಕುಶ್ ನಾಟಕ ಪ್ರದರ್ಶಿಸಲಾಗುವುದು. ಮಕ್ಕಳು ನೋಡಲೇಬೇಕಾದ ನಾಟಕಗಳು ಇವಾಗಿವೆ ಎಂದರು.
ಪ್ರಬುದ್ಧ ಪ್ರಕಾಶನ, ನಚಿಕೇತನ ನಿಲಯ ಚಂದಗೊಳಿಸೋಣ ತಂಡ, ಕೆಇಬಿ ಎಸ್ಸಿ, ಎಸ್ಟಿ ನೌಕರರ ಕಲ್ಯಾಣ ಸಂಘದ ಸಹಕಾರದೊಂದಿಗೆ ಮಕ್ಕಳ ನಾಟಕಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಉದ್ಘಾಟನೆಯನ್ನು ಕೇಂದ್ರ ವಲಯ ಡಿಐಜಿ ಬಿ.ಆರ್.ರವಿಕಾಂತೇಗೌಡ ನೆರವೇರಿಸಲಿದ್ದಾರೆ. ಮುಖ್ಯ ಅತಿರ್ಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ, ಜಿಲ್ಲಾಧಿಕಾರಿ ಅಕ್ರಂ ಪಾಷಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಭಾಗವಹಿಸಲಿದ್ದಾರೆ. ಇದೇ ಸಂದರ್ಭಧಲ್ಲಿ ನಚಿಕೇತನ ನಿಲಯದ ಕಾರಂಜಿಯ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದರು.
ಸಂಸ್ಕೃತಿ ಸಂಗಮ-೧ ಕಳೆದ ೨೦೨೩ರ ಅಕ್ಟೋಬರ್ ೧೨, ೧೩ ಹಾಗೂ ೧೪ ರಂದು ಕೋಲಾರದಲ್ಲಿ ಆರಂಭವಾಯಿತು. ಸಂಸ್ಕೃತಿ ಸಂಗಮ-೨ರಡಿ ಮಂಡ್ಯ ನೆಲದಲ್ಲಿ ೧೫ ನಾಟಕಗಳ ರಚನೆ ಮತ್ತು ೪ ನಾಟಕಗಳ ಪ್ರದರ್ಶನ ನಡೆಯಿತು. ಇದೀಗ ಸಂಸ್ಕೃತಿ ಸಂಗಮ-೩ರಡಿ ನೆಲ ಗಮಲು ನಾಟಕೋತ್ಸವ ಆಯೋಜಿಸಲಾಗಿದೆ ಎಂದರು.
ಮೇ ೧ ರಿಂದ ಯಡಳ್ಳಿ, ಬೂದಿಕೋಟೆಯ ಕಾರಮಾನಹಳ್ಳಿ ಹಾಗೂ ನಚಿಕೇತ ನಿಲಯ ಮೂರು ಕಡೆ ಮಕ್ಕಳ ಬೇಸಿಗೆ ಶಿಬಿ ಏರ್ಪಡಿಸಲಾಗಿದೆ. ಇಲ್ಲಿ ತಯಾರಾಗುವ ನಾಟಕಗಳೊಂದಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ತಯಾರಾದ ನಾಟಕವೂ ಸೇರಿ ಒಟ್ಟು ೪ ನಾಟಕ ಪ್ರದರ್ಶಿಸಲಾಗುವುದು ಎಂದು ಹೇಳಿದರು.
ವಕೀಲ ಪ್ರಮೋದ್ ಕುಮಾರ್, ಪ್ರಕಾಶ್, ಶ್ರೀರಾಮ್, ಕಲಾವಿದ ರಾಮು, ಛಾಯಾಗ್ರಾಹಕ ರಾಜು, ಆಲೇರಿ ರಾಘವೇಂದ್ರ, ಚೇತನ ಬಾಬು ಇದ್ದರು.