ಪ್ರತಿನಿಧಿ ವರದಿ ನಂಜನಗೂಡು
ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ರೋಟರ್ ಗೆ ಸಿಲುಕಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
8 ವರ್ಷದ ಭವಿಷ್ ಮೃತ ಬಾಲಕ. ಈತನ ತಾಯಿ ಮಮತಾ ದೇವರಸನಹಳ್ಳಿ ಗ್ರಾಮದಿಂದ ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮಕ್ಕೆ ಮದುವೆಯಾಗಿದ್ದರು. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ತನ್ನ ಎರಡು ಮಕ್ಕಳೊಂದಿಗೆ ತಾಯಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಜಮೀನಿನಲ್ಲಿ ಬಿತ್ತನೆ ಮಾಡಲು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲಾಗುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಭವಿಷ್ ಮಾವನೊಂದಿಗೆ ಹಠ ಹಿಡಿದಿದ್ದು, ಒತ್ತಾಯಕ್ಕೆ ಮಣಿದು ಟ್ರ್ಯಾಕ್ಟರ್ ಮೇಲೆ ಕೂರಿಸಿದ್ದಾರೆ. ಉಳುಮೆ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿರುವುದು ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಮಾವನ ಗಮನಕ್ಕೆ ಬಂದಿಲ್ಲದ ಕಾರಣ ರೋಟರಿಗೆ ಸಿಲುಕಿ ಭವಿಷ್ ದೇಹ ತುಂಡು ತುಂಡಾಗಿ ಕತ್ತರಿಸಿ
ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಬಾಲಕನ ಮೃತದೇಹ ಕಂಡ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಘಟನೆ ಅವರದೇ ಜಮೀನಿನಲ್ಲಿ ಆಕಸ್ಮಿಕವಾಗಿ ಸಂಭವಿಸಿರುವ ಕಾರಣ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಗು ಹಠಮಾರಿತನಕ್ಕೆ ತನ್ನ ಜೀವ ಕಳೆದುಕೊಂಡಿದ್ದು ದುರದೃಷ್ಟಕರ.