- ಸೂಕ್ತ ದಾಖಲೆಗಳು ಇದ್ದರೂ ರೈತನಿಗೆ ವಿನಾಕಾರಣ ತೊಂದರೆ
- ದಾನವಹಳ್ಳಿ ರೈತ ಹರೀಶ್ ಮನವಿ
- ಪೋಲಿಸರ ದೌರ್ಜನ್ಯ ಮುಂದುವರೆದರೆ ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಚ್ಚರ
ಕೋಲಾರ: ಸೂಕ್ತ ದಾಖಲೆಗಳು ಇದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ವೇಮಗಲ್ ಠಾಣೆಯ ಪೋಲೀಸರು ವಿನಾಕಾರಣ ತೊಂದರೆಗಳನ್ನು ನೀಡುತ್ತಿದ್ದು ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಮಗೆ ರಕ್ಷಣೆ ನೀಡುವಂತೆ ದಾನವಹಳ್ಳಿ ರೈತ ಹರೀಶ್ ಮನವಿ ಮಾಡಿದರು.
ತಾಲೂಕಿನ ನರಸಾಪುರ ಹೋಬಳಿಯ ದಾನವಹಳ್ಳಿ ಗ್ರಾಮದ ಸರ್ವೆ ನಂ.೨ರಲ್ಲಿ ಸುಮಾರು ವರ್ಷಗಳ ಹಿಂದೆಯೇ ನಾವು ಸ್ವಂತವಾಗಿ ಖರೀದಿಸಿರುವ ಎರಡು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಹೋದಾಗ ವಿನಾಕಾರಣ ದಾನವಹಳ್ಳಿ ಗ್ರಾಮದ ಅಶೋಕ್, ಕೆಂಪರಾಜು, ಅಂಜಿನಪ್ಪ ಸೇರಿದಂತೆ ಇತರರೊಂದಿಗೆ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ತೊಂದರೆ ಕೊಡತ್ತಾರೆ ಎಂದು ಆರೋಪಿಸಿದರು.
ದಾನವಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 116 ಎಕರೆ ಗೋಮಾಳ ಜಮೀನು ಇದ್ದು, ಸುಮಾರು 1974ರಲ್ಲಿ ವೆಂಕಟಸ್ವಾಮಿ ಅವರಿಗೆ ಸರ್ಕಾರವೇ ಎರಡು ಎಕರೆ ಜಾಗವನ್ನು ಮಂಜೂರಾತಿ ಮಾಡಿದ್ದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಸಹ ಇದ್ದು ಬೆಳಮಾರನಹಳ್ಳಿ ಗ್ರಾಮದ ಮುನಿಶ್ಯಾಮಪ್ಪನವರ ಮಗ ಡಿ.ಹಿರಣ್ಣಯ್ಯ ಅವರಿಗೆ ಮಾರಾಟ ಮಾಡಿ ಕ್ರಯಪತ್ರ ಸಹ ಮಾಡಿಕೊಟ್ಟಿದ್ದಾರೆ. ಕ್ರಯ ಪತ್ರದ ಅನ್ವಯ ಹಿರಣ್ಣಯ್ಯ ಅವರಿಗೆ ಕಂದಾಯ ಇಲಾಖೆಯಿಂದ ದಾಖಲೆಗಳನ್ನು ನಮೂದಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪು ದಾಖಲೆಗಳು ಇಲ್ಲ ಬೇಕಿದ್ದರೆ ಅಧಿಕಾರಿಗಳು ಪರಿಶೀಲನೆ ನಡೆಸಲಿ ಅದು ಬಿಟ್ಟು ತೊಂದರೆ ಕೊಡಬಾರದು ಎಂದು ತಿಳಿಸಿದರು.
ಕಂದಾಯ ಇಲಾಖೆಯ ದಾಖಲೆಗಳನ್ನು ಮತ್ತು ಮಾಲೀಕನ ದಾಖಲೆಗಳನ್ನು ನೋಡಿ ಹಿರಣ್ಣಯ್ಯ ಅವರಿಂದ 2006 ರಲ್ಲಿ ದಾನವಹಳ್ಳಿ ಗ್ರಾಮದ ಟಿ.ರಮೇಶ್ ಸಹೋದರರಾದ ಟಿ.ಮುನೇಗೌಡ, ಟಿ.ವೆಂಕಟೇಶ್ ಅವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ ಸದರಿ ಕ್ರಯ ಪತ್ರದ ಆಧಾರದಲ್ಲಿ ಅವರ ಹೆಸರಿನಲ್ಲಿ ಪಹಣಿ ಸಹ ಆಗಿದ್ದು ಕಳೆದ ಮೂರು ನಾಲ್ಕು ತಿಂಗಳಿಂದ ನಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಲು ಬಿಡುತ್ತಿಲ್ಲ ಜತೆಗೆ ಜಮೀನಿಗೆ ಹಾಕಲಾಗಿರುವ ಕಲ್ಲು ಚಪ್ಪಡಿಗಳ ಕಾಂಪೌಂಡ್ ಅನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿ ಯಾರ ಬಳಿ ಸೂಕ್ತ ದಾಖಲೆಗಳು ಇವೆ ಅವರಿಗೆ ಜಮೀನನ್ನು ಗುರುತಿಸಿ ಕೊಡಲಿ. ಅದನ್ನು ಬಿಟ್ಟು ದಾಖಲೆಗಳನ್ನು ತೋರಿಸದೇ ವಿನಾಕಾರಣ ನಮಗೆ ತೊಂದರೆ ಕೊಡತ್ತಾರೆ. ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ನಮಗೆ ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ಸಹ ಮನವಿ ಸಲ್ಲಿಸಲಾಗಿದೆ. ಇದೇ ರೀತಿಯಲ್ಲಿ ಪೋಲಿಸರ ದೌರ್ಜನ್ಯ ದಬ್ಬಾಳಿಕೆ ಮುಂದುವರೆದರೆ ನಮ್ಮ ಕುಟುಂಬವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ಶ್ರೀನಿವಾಸ್ ಚಂದ್ರಪ್ಪ ಇದ್ದರು.