ಪ್ರತಿನಿಧಿ ವರದಿ ಮಂಡ್ಯ
ಮುಂಬರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಶಿಕ್ಷಕ ವೃಂದದಲ್ಲಿ ಕನ್ನಡ ಪರಹೋರಾಟಗಾರ, ಚಿಂತಕ ಜಾಣಗೆರೆ ವೆಂಕಟರಾಮಯ್ಯ ಮನವಿ ಮಾಡಿದರು.
ಶಿಕ್ಷಣವು ಪ್ರಜಾಸತ್ತೆ, ಪ್ರಜಾಸತ್ತಾತ್ಮಕವಾಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಮರಿತಿಬ್ಬೇಗೌಡರ ಆಯ್ಕೆ ಅನಿವಾರ್ಯವಾಗಿದ್ದು, ಹಾಗಾಗಿ ಅವರನ್ನು ಶಿಕ್ಷಕ ವೃಂದದವರು ಬೆಂಬಲಿಸುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಹೊಸ ಶಿಕ್ಷಣ ನೀತಿ ನಮ್ಮನ್ನು ನೂರು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರ ಹಿಂದೆ ಹಿಡನ್ ಅಜೆಂಡಾ ಅಡಗಿದೆ. ಇದನ್ನು ಎಲ್ಲರೂ ವಿರೋಧಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಮಕ್ಕಳಿಗೆ ತಳ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗ ಸಿಗುವುದಿಲ್ಲ ಎಂದು ಆರೋಪಿಸಿದರು.
ಎಲ್ಲಾ ಕ್ಷೇತ್ರಗಳು ಖಾಸಗಿಕರಣ ಆಗುತ್ತಿರುವ ಹಿನ್ನೆಲೆ ಶಿಕ್ಷಣವು ಮಾರಾಟದ ಸರಕಾಗುತ್ತದೆ. ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗ ಎಂಬುವುದು ಕನಸಿನ ಮಾತಗುತ್ತಿದೆ. ಆದ ಕಾರಣ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸಾಹಿತಿ ಪ್ರೊಫೆಸರ್ ಮುಕುಂದರಾಜು ಮಾತನಾಡಿ, ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಮತ್ತು ಕೇಂದ್ರದಲ್ಲಿ ಅಧಿಕಾರಲ್ಲಿರುವ ಬಿಜೆಪಿ ಸರ್ಕಾರ, ಶಿಕ್ಷಣ ಕ್ಷೇತ್ರವನ್ನು ನೂತನ ಶಿಕ್ಷಣ ನೀತಿ ತರುವ ಮೂಲಕ ಕುಲಗೆಡಿಸಿದೆ ಎಂದು ಹೇಳಿದರು.
ಮರಿತಿಬ್ಬೇಗೌಡರು ಹೋರಾಟದಿಂದ ಬಂದವರಾಗಿದ್ದು, ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸ ನಮ್ಮಗಿದೆ. ಶಿಕ್ಷಕರು ತಮ್ಮ ಮತಗಳನ್ನು ಮಾರಿಕೊಳ್ಳದೆ, ಯಾವುದೇ ಆಮಿಷಕ್ಕೆ ಒಳಗಾಗದೆ ಶೈಕ್ಷಣಿಕ ವಲಯ ಉತ್ತಮ ಭವಿಷ್ಯಕ್ಕಾಗಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ವಿಶ್ರಾಂತ ಪ್ರಾಧ್ಯಾಪಕ ಡಾ.ಬೈರಮಂಗಲ ರಾಮೇಗೌಡ, ಸಾಹಿತಿ ಕಾ.ತ.ಚಿಕ್ಕಣ್ಣ, ಕರ್ನಾಟಕ ಬಂಜಾರ ಅಭಿವೃದ್ಧಿ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.