- ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮನವಿ
ಪ್ರತಿನಿಧಿ ವರದಿ ಚಿಕ್ಕಮಗಳೂರು
ಜೂ.3ರ ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಚಿಕ್ಕಮಗಳೂರು ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.
ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಹಾಗೂ ಕೆ.ಕೆ.ಮಂಜುನಾಥ್ ಕುಮಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿರುತ್ತಾರೆ. ಇವರ ಹೆಸರಿನ ಮುಂದೆ ಗೀಟು ಎಳೆಯುವ ಮೂಲಕ ಮತದಾನ ಮಾಡುವಂತೆ ಪದವೀಧರರು ಹಾಗೂ ಶಿಕ್ಷಕರಲ್ಲಿ ವಿನಂತಿ ಮಾಡಿದ್ದು, ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತದಾನ ನಡೆಯಲಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ರಾಜ್ಯ ಹಾಗೂ ದೇಶದ ನಾಲ್ಕು ಸದನಗಳಾದ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ನಾಲ್ಕು ದಶಕಗಳ ಕಳಂಕ ರಹಿತ ರಾಜಕಾರಣವನ್ನು ಮಾಡಿದವರಾಗಿರುತ್ತಾರೆ. ಆಯನೂರು ಮಂಜುನಾಥ್ ಅವರಿಗೆ ಶಿಕ್ಷಕರ, ಪದವೀಧರರ ಅಲ್ಲದೆ ರಾಜ್ಯದ ದುಡಿಯುವ ವರ್ಗದ ನಾಯಕರಾಗಿ ಸುದೀರ್ಘ ಅನುಭವ ಹೊಂದಿರುವ ಇವರ ಆಯ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರಲಿದೆ ಎಂದಿದ್ದಾರೆ.
ಶಿಕ್ಷಕರಾಗಿ, ಶಿಕ್ಷಕರ ಸಂಘದ ರಾಜ್ಯ ಪದಾಧಿಕಾರಿಯಾಗಿ ಆ ಕ್ಷೇತ್ರದ ಎಲ್ಲ ಆಗುಹೋಗುಗಳನ್ನು ಬಲ್ಲವರಾಗಿರುವ ಮತ್ತು ಎರಡು ಬಾರಿ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳಿಂದ ಪರಾಜಯಗೊಂಡಿರುವ ಕೆ.ಕೆ.ಮಂಜುನಾಥ್ ಕುಮಾರ್ ಅವರ ಆಯ್ಕೆ ಶಿಕ್ಷಕರ ಆಯ್ಕೆಯಾಗಿರುತ್ತದೆ ಎಂದು ವ್ಯಾಖ್ಯಾನಿಸಿದ್ದಾರೆ.