ಪ್ರತಿನಿಧಿ ವರದಿ ಹಾಸನ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದು, ಪ್ರಚಾರದ ವೇಳೆ ನಾಲ್ಕು ಕ್ಷೇತ್ರದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರ ಸಮಸ್ಯೆಯನ್ನು ಆಧಾರಿಸಿ ಪ್ರಣಾಳಿಕೆಯಲ್ಲಿ ಐದು ಅಂಶಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿ ವಿವೇಕಾನಂದ ಅವರು 124 ಕೋಟಿ ಒಡೆಯ ಎಂದು ತೋರಿಸಿದ್ದು, ಒಬ್ಬ ಮತದಾರರಿಗೆ 7 ರಿಂದ 9 ಕೋಟಿ ರೂ ಹಂಚುವುದಾಗಿ ಹೇಳಿದ್ದು, ಈಗಾಗಲೇ ಶಿಕ್ಷಕರು ಅವರ ಮುಖಕ್ಕೆ ಉಗಿದು ಕಳುಹಿಸಿದ್ದು, ಆಡಳಿತ ಪಕ್ಷದವರು ಪ್ರತಿ ಮತದಾರರಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದು, ಇವನ್ನೆಲ್ಲಾ ಗಮನಿಸಿದ ಮತದಾರರು ಅವರಿಗೆ ತಕ್ಕ ಉತ್ತರ ಹೇಳಿ ಕಳುಹಿಸಿದ್ದಾರೆ ಎಂದರು.
ಜೂ.3 ರಂದು ನಡೆಯುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ನನಗೆ ಗೆಲುವು ತಂದುಕೊಟ್ಟರೇ ಮುಂದಿನ ಹೋರಾಟಗಳನ್ನು ಸಿದ್ಧಪಡಿಸಿಕೊಂಡಿದ್ದು, ಪ್ರಮುಖವಾಗಿ ಅತಿಥಿ ಶಿಕ್ಷಕರುಗಳು ಮತ್ತು ಉಪನ್ಯಾಸಕರುಗಳ ಸೇವೆಯನ್ನು ಖಾಯಂಗೊಳಿಸುವುದು, 7ನೇ ವೇತನ ಆಯೋಗ ಜಾರಿಗೆ ಹೋರಾಟ ನಡೆಸುವುದು. ಹಳೆಯ ಪಿಂಚಣಿ ಪದ್ಧತಿ (ಓ.ಪಿ.ಎಸ್.) ಜಾರಿಗೆ ಬರುವಂತೆ ಮಾಡಲಾಗುವುದು. ಖಾಸಗಿ ಅನುದಾನಿತ ಶಿಕ್ಷಕರುಗಳಿಗೆ ಸರ್ಕಾರಿ ಶಿಕ್ಷಕರು ಗಳಿಸಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುವುದು, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುವುದು ಈ ಉದ್ದೇಶಗಳ ಈಡೇರಿಕೆಗೆ ತಮ್ಮ ಅಮೂಲ್ಯ ಪ್ರಥಮ ಪ್ರಾಶಸ್ಯ ಮತ ಕೊಟ್ಟು ಜಯಶೀಲನನ್ನಾಗಿ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ ಇದು ನನ್ನ ಕೊನೆಯ ಚುನಾವಣೆ, ದಯವಿಟ್ಟು ಆಶೀರ್ವದಿಸಿ ಎಂದು ಕೋರಿದರು.
ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯ ಸಂಚಾಲಕ ಕೆಂಪಶೆಟ್ಟಿ, ಸಂಘಟನ ಕಾರ್ಯದರ್ಶಿ ಶಿವರಾಜಪ್ಪ, ಕುಮಾರ್ ಇತರರು ಉಪಸ್ಥಿತರಿದ್ದರು.