ಕಾರ್ಯಕ್ರಮಾಧಿಕಾರಿ ಡಾ.ನಾಗೇಶ್ ಆರಾಧ್ಯ ಮಾಹಿತಿ
ಪ್ರತಿನಿಧಿ ವರದಿ ಹೊಳೆನರಸೀಪುರ
ಹಾಸನ ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷಯರೋಗ ಹಾಗೂ ಅಂದತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿ ಡಾ.ನಾಗೆಶ್ ಆರಾಧ್ಯ ತಿಳಿಸಿದರು.
ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಮಲೇರಿಯಾ ಮತ್ತು ಡೆಂಘೆ ವಿರೋಧಿ ಮಾಸಾಚರಣೆ ಬಗ್ಗೆ ಆಯೋಜಿಸಿದ್ದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.
ಡೆಂಘೆ ಪ್ರಕರಣಗಳನ್ನು ಕಡಿಮೆ ಮಾಡಲು ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ನಿಯಂತ್ರಣ ಮಾಡಲು ಕಷ್ಟಸಾಧ್ಯ. ಹಾಗಾಗಿ, ಬೇರೆ- ಬೇರೆ ಇಲಾಖೆಗಳೂ ಸಹ ನಮ್ಮ ಇಲಾಖೆಯೊಂದಿಗೆ ಕೈಜೋಡಿಸಿದಾಗ ಮಾತ್ರ, ಡೆಂಘೆ ಪ್ರಕರಣಗಳಿಂದ ಸಂಭವಿಸುವು ಸಾವಿನ ಪ್ರಕರಣಗಳಿರಬಹುದು, ಅವುಗಳೆಲ್ಲವನ್ನು ಕಡಿವಾಣ ಹಾಕಿ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುವು ಮುನ್ಸೂಚನೆಗಳಿರುವುದರಿಂದ ಈಗಲೇ ಮುನ್ನೆಚ್ಚರಿಕೆಯ ಸಲುವಾಗಿ ಏನೇನು ಮಾಡುವುದರಿಂದ ಡೆಂಘೆ ಪ್ರಕರಣಗಳಿಗೆ ಕಡಿವಾಣ ಹಾಕಿ ತಡೆಗಟ್ಟಬಹುದರ ಬಗ್ಗೆ ಈ ಸಭೆಯನ್ನು ಕರೆಯಲಾಗಿದೆ. ಎಲ್ಲ ಇಲಾಖೆಗಳು ತಮ್ಮ ಕಾರ್ಯುವ್ಯಾಪ್ತಿಯಲ್ಲಿ ಹೇಗೆ ನಿಯಂತ್ರಣ ಮಾಡಬಹುದು ಅನ್ನುವುದನ್ನು ಪಿ.ಪಿ.ಟಿ.ಮೂಲಕ ವೀಕ್ಷಿಸಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೀಟಶಾಸ್ತ್ರ ತಂತ್ರಜ್ಞ ರಾಜೇಶ್ ಕುಲಕರ್ಣಿ ಮಾತನಾಡಿ, ಡೆಂಘೆ ಹರಡುವ ಈಡೀಸ್ ಸೊಳ್ಳೆಗಳ ವಿಶೇಷತೆಯೆಂದರೆ ಬೇರೆ ಸೊಳ್ಳೆಗಳು ರಾತ್ರಿವೇಳೆ ಕಚ್ಚಿದರೆ ಈ ಸೊಳ್ಳೆಯು ಹಗಲು ವೇಳೆ ಕಚ್ಚುತ್ತವೆ. ಶುದ್ಧವಾದ ತಿಳಿ ನೀರಿನಲ್ಲಿ ಲಾರ್ವ ಉತ್ಪತ್ತಿಮಾಡುತ್ತವೆ. ರೋಗಗಳ ಗುಣಲಕ್ಷಣಗಳು ಹಾಗೂ ನಿಯಂತ್ರಣದ ಬಗ್ಗೆ ಸವಿವರವಾಗಿ ಪಿಪಿಟಿ ಮೂಲಕ ಪ್ರಾತ್ಯಕ್ಷತೆ ನಡೆಸಿಕೊಟ್ಟು, ನಮ್ಮ ಇಲಾಖೆಯೊಂದಿಗೆ, ಬೇರೆ ಇಲಾಖೆಗಳು ಹಾಗೂ ಸಾರ್ವಜನಿಕರೂ ಸಹಕಾರ ನೀಡಿ ಎಂದು ತಿಳಿಸುತ್ತಾ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಲೋಕೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ತಾಲೂಕು ಪಂಚಾಯಿತಿ ತಾಂತ್ರಿಕ ಅಧಿಕಾರಿ ಗೋಪಾಲ್, ಪುರಸಭೆಯ ಮುಖ್ಯಾಧಿಕಾರಿ ಮಹೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಯರಾಮ, ವಿವಿಧ ಪ್ರಾ.ಆರೋಗ್ಯ ಕೇಂದ್ರದ ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಮೇಲ್ವಿಚಾರಕರು, ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.