- ಅಧಿಕಾರಿಗಳಿಗೆ ತಹಸೀಲ್ದಾರ್ ಎಂ.ಮಮತಾ ಸೂಚನೆ
ಪ್ರತಿನಿಧಿ ವರದಿ ಬೇಲೂರು
ತಾಲೂಕಿನಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಕೂಡಲೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಎಂ.ಮಮತಾ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೆ ನಿಯಂತ್ರಣ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಮಳೆಗಾಲ ಸಮೀಪಿಸುತ್ತಿರುವುದರಿಂದ ಹೆಚ್ಚಾಗಿ ಡೆಂಘೆ ಪ್ರಕರಣಗಳು ವ್ಯಾಪಕವಾಗಿ ಕಾಣಿಸುತ್ತಿರುವುದರಿಂದ ತಾಲೂಕಿನಲ್ಲಿ ಸುಮಾರು ೧೦ ಡೆಂಘೆ ಪ್ರಕರಣಗಳು ದಾಖಲಾಗಿದೆ. ಇದರ ಜತೆಗೆ ಚಿಕೂನ್ ಗೂನ್ಯ ಪ್ರಕರಣವು ದಾಖಲಾಗಿದೆ. ಡೆಂಘೆ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು ೪೦ ಪ್ರಕರಣಗಳು ದಾಖಲಾಗಿದ್ದು, ಅವರಿಗೆ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದರು.
ಜನಸಾಮಾನ್ಯರು ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕೇವಲ ಒಂದು ದಿನ ಮಾತ್ರ ಸ್ವಚ್ಛಗೊಳಿಸಿದರೆ. ಸಾಲದು ಪಟ್ಟಣದ ೨೩ ವಾರ್ಡ್ ಗಳಲ್ಲೂ ಕಡ್ಡಾಯವಾಗಿ ಕ್ರಿಮಿನಾಶಕವನ್ನು ಸಿಂಪಡಿಸುವ ಮೂಲಕ ಸ್ವಚ್ಛತೆ ಮಾಡಬೇಕು. ಅಲ್ಲದೆ ಪುರಸಭೆ ವ್ಯಾಪ್ತೀಯಲ್ಲಿ ಬರುವ ಕೋಳಿ ಅಂಗಡಿಗಳಿಗೆ ಸೂಕ್ತ ನಿರ್ದೇಶನ ನೀಡಿ ತ್ಯಾಜ್ಯವನ್ನು ಪುರಸಭೆ ಗಾಡಿಗಳಿಗೆ ಹಾಕುವಂತೆ ಸೂಚಿಸಿದ್ದರು.
ನಿಮ್ಮ ವ್ಯಾಪ್ತಿಯಲ್ಲಿ ಬರುವ ಗ್ಯಾರೇಜ್ ಹಾಗೂ ಗುಜರಿ ವ್ಯಾಪಾರಿಗಳಿಗೆ ತಿಳಿವಳಿಕೆ ನೊಟೀಸ್ ನೀಡಿ ಯಾವುದೇ ವಸ್ತುವನ್ನು ಶೇಖರಣೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ರುಚಿ ಶುಚಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಇದರ ಜತೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿನೀರು, ಸೊಳ್ಳೆ ಪರದೆಗಳನ್ನು ವಿತರಿಸುವಂತೆ ಸೂಚಿಸಿದಲ್ಲದೆ ಎರಡು ದಿನಗಳಿಗೊಮ್ಮೆ ವಾಟರ್ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಬಂದರೆ ನೇರವಾಗಿ ವಾರ್ಡ್ ನ್ ಗಳ ಮೇಲೆ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದರು.
ಶಾಲೆಗಳು ಪ್ರಾರಂಭವಾಗಿರುವುದರಿಂದ ಯಾವುದೇ ವಿದ್ಯಾರ್ಥಿಗಳಿಗೆ ಜ್ವರ ಕೆಮ್ಮು ಇನ್ನಿತರ ತೊಂದರೆ ಇದ್ದರೆ ಅದನ್ನು ಪೊಷಕರಿಗೆ ತಿಳಿಸಿ ಶಾಲೆಗಳಿಗೆ ಕಳಿಸದಂತೆ ಎಚ್ಚರಿಕೆ ನೀಡಬೇಕು. ಗ್ರಾಪಂನಲ್ಲಿ ಎಲ್ಲ ಪಿಡಿಒಗಳ ಸಹಕಾರ ಪಡೆದು ಪ್ರತಿಯೊಬ್ಬರೂ ಕಡ್ಡಾಯವಾಗಿ ಗ್ರಾಮಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವಂತೆ ಎಲ್ಲ ಅಭಿವೃದ್ಧಿ ಅಧಿಕಾರಿಗಳ ಪಾತ್ರ ಅತಿ ಮುಖ್ಯ. ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಶಿಕ್ಷಕರು ಮನೆಮನೆಗೆ ಕರ ಪತ್ರ ನೀಡುವ ಮೂಲಕ ಜಾಗೃತಿ ಮಾಡಿಸಬೇಕು ಎಂದರು.
ಖಾಸಗಿ ಆಂಬುಲೆನ್ಸ್ ಚಾಲಕರಿಗೆ ಎಚ್ಚರಿಕೆ: ಆಬುಲೆನ್ಸ್ ಚಾಲಕರು ಸಾರ್ವಜನಿಕರಿಗೆ ತೊಂದರೆ ಕೊಡದಂತೆ ನಿಗಾವಹಿಸಬೇಕು ಹಾಗೂ ಪ್ರತಿ ವಾಹನಗಳಿಗೆ ಎಲ್ಲ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಆರ್ ಟಿ ಒ ಅಧಿಕಾರಿಗಳಿಗೆ ತಿಳಿಸಿ ವಾಹನ ಜಪ್ತಿ ಮಾಡಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಾಬುಲೆನ್ಸ್ ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸದಂತೆ ಎಚ್ಚರಿಕೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಬಿಆರ್ ಸಿ ಶಿವಮರಿಯಪ್ಪ, ಪುರಸಭೆ ಮುಖ್ಯಾಧಿಕಾರಿ ಇಂದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಬಿಸಿಎಂ ಅಧಿಕಾರಿಗಳು ಹಾಜರಿದ್ದರು.