ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದಿದ್ದು, ನಾಳೆ ಫಲಿತಾಂಶ ಹೊರಬರಲಿದೆ. ಇದರ ಮಧ್ಯೆ ಇಂದು ವಿಧಾನ ಪರಿಷತ್ನ ಮೂರು ಶಿಕ್ಷಕರ ಹಾಗೂ ಮೂರು ಪದವೀಧರರ ಕ್ಷೇತ್ರದ ಮತದಾನ ನಡೆಯಲಿದೆ. ಕಾಂಗ್ರೆಸ್ 6 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಿದೆ. ಆದರೆ, ಬಿಜೆಪಿ 4, ಜೆಡಿಎಸ್ 2 ಕ್ಷೇತ್ರಗಳಲ್ಲಿ ಮೈತ್ರಿಯಾಗಿ ಅಖಾಡಕ್ಕಿಳಿದಿವೆ. 6 ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.
ಈಶಾನ್ಯ ಪದವೀಧರರ ಕ್ಷೇತ್ರ
ಈಶಾನ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಡಾ. ಚಂದ್ರಶೇಖರ ಪಾಟೀಲ ಹಾಗೂ ಬಿಜೆಪಿಯಿಂದ ಅಮರನಾಥ ಪಾಟೀಲ್ ಕಣದಲ್ಲಿದ್ದಾರೆ.
ನೈಋತ್ಯ ಪದವೀಧರರ ಕ್ಷೇತ್ರ
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಆಯನೂರು ಮಂಜುನಾಥ್ ಹಾಗೂ ಭಾರತೀಯ ಜನತಾ ಪಕ್ಷದಿಂದ ಧನಂಜಯ ಸರ್ಜಿ ಸ್ಪರ್ಧಿಸಿದ್ದಾರೆ.
ಬೆಂಗಳೂರು ಪದವೀಧರರ ಕ್ಷೇತ್ರ
ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿಗೌಡ ಹಾಗೂ ಭಾರತೀಯ ಜನತಾ ಪಕ್ಷದಿಂದ ಅ.ದೇವೇಗೌಡ ಕಣದಲ್ಲಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರ
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಡಿಟಿ ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ವೈಎ ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ.
ನೈಋತ್ಯ ಶಿಕ್ಷಕರ ಕ್ಷೇತ್ರ
ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳ ಸ್ಪರ್ಧಿಸಿದ್ದು, ಕಾಂಗ್ರೆಸ್ನಿಂದ ಕೆಕೆ ಮಂಜುನಾಥ್ ಹಾಗೂ ಜೆಡಿಎಸ್ನಿಂದ ಎಸ್ಎಲ್ ಭೋಜೇಗೌಡ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರ
ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮರಿತಿಬ್ಬೇಗೌಡ ಹಾಗೂ JDSನಿಂದ ವಿವೇಕಾನಂದ ಸ್ಪರ್ಧಿಸಿದ್ದಾರೆ.
ಮೇಲ್ಮನೆಗೆ 7 ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್
ಇದೇ ಜೂನ್ 13ರಂದು ವಿಧಾನಸಭೆಯಿಂದ ಪರಿಷತ್ಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನ ಘೋಷಿಸಿವೆ. ಕಾಂಗ್ರೆಸ್ಗೆ 7 ಸ್ಥಾನ ಗೆಲ್ಲುವ ಅವಕಾಶವಿದ್ದು, ಅಳೆದು ತೂಗಿ ಫೈನಲ್ ಪಟ್ಟಿ ಪ್ರಕಟಿಸಿದೆ.
ತಂದೆ ಸಿದ್ದರಾಮಯ್ಯಗೆ ವರುಣ ಕ್ಷೇತ್ರ ತ್ಯಾಗ ಮಾಡಿದ್ದ ಯತೀಂದ್ರಗೆ ಮೇಲ್ಮನೆ ಟಿಕೆಟ್ ಸಿಕ್ಕಿದೆ. ಹಾಗೆಯೇ ಸಚಿವರಾಗಿರೋ ಕಾರಣಕ್ಕೆ ಮತ್ತು ಹೈಕಮಾಂಡ್ಗೆ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರೋ ಎನ್.ಎಸ್.ಬೋಸರಾಜುಗೆ ಮಣೆ ಹಾಕಲಾಗಿದೆ. ರಾಯಚೂರು ನಾಯಕರ ವಿರೋಧದ ನಡುವೆ ಬೋಸರಾಜು ಮರು ಆಯ್ಕೆಯಾಗಲಿದ್ದಾರೆ. ಇನ್ನೂ ಮೂರನೇ ಬಾರಿಗೆ ಆಯ್ಕೆಯಾಗ್ತಿರೋ ಡಾ. ಕೆ ಗೋವಿಂದ ರಾಜುಗೆ ಟಿಕೆಟ್ ನೀಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ ಕುಮಾರ್, ಜಗದೇವ್ ಗುತ್ತೇದಾರ್, ಅಲ್ಪಸಂಖ್ಯಾತ ಕೋಟಾದಡಿ ಐವಾನ್ ಡಿಸೋಜಾ, ಶಿವಮೊಗ್ಗದ ಮಾಜಿ ಜಿಪಂ ಅಧ್ಯಕ್ಷೆ ಬಿಲ್ಕಿಸ್ ಬಾನೋಗೆ ಚಾನ್ಸ್ ಸಿಕ್ಕಿದೆ. ಇದರ ಜೊತೆಗೆ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರೋ ಪರಿಷತ್ ಉಪ ಚುನಾವಣೆ ನಡೆಯಲಿದ್ದು, ಬಸನಗೌಡ ಬಾದರ್ಲಿಗೆ ಟಿಕೆಟ್ ನೀಡಲಾಗಿದೆ.
ಬಿಜೆಪಿ 3 ಸ್ಥಾನಕ್ಕೆ ಟಿಕೆಟ್ ಘೋಷಣೆ; ಸಿ.ಟಿ ರವಿಗೆ ಮಣೆ
ಪರಿಷತ್ನಲ್ಲಿ ಬಿಜೆಪಿಗೆ ಮೂರು ಸ್ಥಾನ ಗೆಲ್ಲೋ ಅವಕಾಶವಿದ್ದು, ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ. ಒಕ್ಕಲಿಗ ಸಮುದಾಯದ ಸಿಟಿ ರವಿ ಮತ್ತು ಪರಿಷತ್ ಸದಸ್ಯರಾಗಿರೋ ಗಂಗಾ ಮತಸ್ಥ ಸಮುದಾಯದ ಎನ್ ರವಿಕುಮಾರ್ಗೆ ಮತ್ತೊಂದು ಅವಕಾಶ ನೀಡಲಾಗಿದೆ. ಹಾಗೆಯೇ ಮರಾಠಾ ಸಮುದಾಯದ ಎಂ.ಬಿ ಮುಳೆಗೆ ಟಿಕೆಟ್ ನೀಡಲಾಗಿದೆ.
ಇಂದು ಮತ್ತು ಜೂನ್ 13ರಂದು ನಡೆಯೋ ಪರಿಷತ್ ಚುನಾವಣೆಯಲ್ಲಿ ಗೆದ್ದು, ಮೇಲ್ಮನೆಯಲ್ಲಿ ಹಿಡಿತ ಸಾಧಿಸಲು ಮೂರು ಪಕ್ಷಗಳ ರಣತಂತ್ರ ಭರ್ಜರಿಯಾಗಿಯೇ ನಡೆಯುತ್ತಿದೆ.