ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಲೋಕಸಭೆ ಕ್ಷೇತ್ರವು ಘಟಾನುಘಟಿಗಳ ಹೋರಾಟದ ಕಾರಣದಿಂದ ರಾಜ್ಯದ ಕೇಂದ್ರ ಬಿಂದು ಆಗುತ್ತಲೇ ಇರುತ್ತದೆ. ರಾಜ್ಯದ ಮೂವರು ಮಾಜಿ ಮುಖ್ಯಮಂತ್ರಿಗಳು ಪ್ರತಿನಿಧಿಸಿರುವ ಏಕೈಕ ಕ್ಷೇತ್ರವಿದು. ಜೆ.ಎಚ್.ಪಟೇಲ್, ಎಸ್ ಬಂಗಾರಪ್ಪ ಹಾಗೂ ಬಿ.ಎಸ್ ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಪ್ರತಿನಿಧಿಗಳಾಗಿ ದೆಹಲಿಗೆ ಹೋಗಿದ್ದಾರೆ. ಅದರಲ್ಲೂ ಬಂಗಾರಪ್ಪ ನಾಲ್ಕು ವಿಭಿನ್ನ ಪಕ್ಷಗಳಿಂದ ಶಿವಮೊಗ್ಗವನ್ನು ಸ್ಪರ್ಧಿಸಿದ್ದು ವಿಶೇಷ. ವಿಚಿತ್ರವೆಂದರೆ ಈ ಬಾರಿ ಅಪ್ಪಂದಿರು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಮಕ್ಕಳು ಕಣಕ್ಕಿಳಿದಿದ್ದಾರೆ.
ಇಲ್ಲಿಯವರೆಗೆ ಹತ್ತು ಬಾರಿ ಕಾಂಗ್ರೆಸ್ಗೆ ಶಿವಮೊಗ್ಗದ ಜನರು ಕರುಣೆ ತೋರಿದ್ದರೆ, ಆರು ಬಾರಿ ಬಿಜೆಪಿಯತ್ತ ಒಲವು ತೋರಿದ್ದಾರೆ. ವಿಶೇಷವೆಂದರೆ ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬೇರೆ ಪಕ್ಷಗಳಿಗೆ ಸಾಧ್ಯವಾಗಲೇ ಇಲ್ಲ. 2009ರಲ್ಲಿ ಬಂಗಾರಪ್ಪರ ಕೋಟೆಯನ್ನು ಬೇಧಿಸಿದ ಯಡಿಯೂರಪ್ಪರ ಪುತ್ರ ರಾಘವೇಂದ್ರ, ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಮಧ್ಯೆ ಕೆಲ ವರ್ಷಗಳ ಮಟ್ಟಿಗೆ ಯಡಿಯೂರಪ್ಪ ಅವರು ಶಿವಮೊಗ್ಗವನ್ನು ಪ್ರತಿನಿಧಿಸಿದ್ದರು.
2009ರಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಶಿವಮೊಗ್ಗ ಲೋಕಸಭೆ ಚುನಾವಣೆ ನಡೆದಿದೆ. ನಾಲ್ಕೂ ಬಾರಿಯೂ ಯಡಿಯೂರಪ್ಪ ವರ್ಸಸ್ ಬಂಗಾರಪ್ಪ ಎನ್ನುವಂತಾಗಿದೆ. 2009ರಲ್ಲಿ ಬಂಗಾರಪ್ಪರನ್ನು ರಾಘವೇಂದ್ರ ಸೋಲಿಸಿದರೆ, ನಂತರದ 2014, 2018, 2019ರಲ್ಲಿ ಬಂಗಾರಪ್ಪರ ಮಕ್ಕಳೇ ಸ್ಪರ್ಧಿಸಿ ಸೋತಿದ್ದಾರೆ. ಒಮ್ಮೆ ಗೀತಾ ಶಿವರಾಜ್ಕುಮಾರ್ ಹಾಗೂ ಎರಡು ಬಾರಿ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು.
ಈ ಬಾರಿಯೂ ಬಿ.ವೈ ರಾಘವೇಂದ್ರಗೆ ಗೀತಾ ಶಿವರಾಜ್ಕುಮಾರ್ ಪೈಪೋಟಿ ನೀಡುತ್ತಿದ್ದಾರೆ. ಇದರ ಜತೆಗೆ ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸಿರುವುದರಿಂದ ಅಖಾಡಕ್ಕೆ ಇನ್ನಷ್ಟು ರಂಗೇರಿದೆ.
2014ರಲ್ಲಿ ಯಡಿಯೂರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 3.50 ಲಕ್ಷ ಮತಗಳಿಂದ ಗೆದ್ದಿದ್ದರೆ, 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿರುದ್ಧ ರಾಘವೇಂದ್ರ ಅವರು 2.20 ಲಕ್ಷ ಮತಗಳಿಂದ ವಿಜಯಗಳಿಸಿದ್ದರು. ಈ ಬಾರಿ ಎರಡು ಕುಟುಂಬದ ಜಟ್ಟಿ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡಬೇಕು.
ಈ ಲೋಕಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯ ಏಳು ಹಾಗೂ ಉಡುಪಿ ಜಿಲ್ಲೆಯ ಒಂದು ವಿಧಾನಸಭೆ ಕ್ಷೇತ್ರವನ್ನು ಒಳಗೊಂಡಿದೆ. ಶಿವಮೊಗ್ಗ ನಗರ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ತೀರ್ಥಹಳ್ಳಿ. ಶಿಕಾರಿಪುರ, ಸೊರಬ, ಸಾಗರ ಹಾಗೂ ಬೈಂದೂರು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 17.29 ಲಕ್ಷ ಮತದಾರರು ಇದ್ದರು. ಇವರಲ್ಲಿ ಶೇ.78.33ಮಂದಿ ಮತ ಚಲಾಯಿಸಿದ್ದಾರೆ.