ಕೋಲಾರ: ಮೀಸಲು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳ ನಾಯಕರ, ಕಾರ್ಯಕರ್ತರ ಪರಿಶ್ರಮದಿಂದ, ಜನರ ಆಶೀರ್ವಾದದಿಂದ ಗೆಲುವ ಲಭಿಸಿದೆ ಅವರ ಆಶೋತ್ತರಗಳಿಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ನೂತನ ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ನಗರದ ಮತ ಎಣಿಕೆ ಕೇಂದ್ರದ ಬಳಿ ಮಾತನಾಡಿ, ಭಯದಿಂದಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, ಎರಡು ಬಾರಿ ಸೋಲು ಕಂಡಿದ್ದ ನನಗೆ ಈ ಚುನಾವಣೆ ಕಷ್ಟವಾಗಿತ್ತು. ಆದರೆ, ಜೆಡಿಎಸ್ ಹಾಗೂ ಬಿಜೆಪಿ ನಾಯಕರ, ಕಾರ್ಯಕರ್ತರ ಪ್ರಚಾರ, ಬೆಂಬಲದಿಂದ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಗಿಂತ ೭೧ ಸಾವಿರಕ್ಕೂ ಹೆಚ್ಚು ಮತ ಗಳಿಸುವ ಮೂಲಕ ಗೆಲುವಿನ ನಗೆ ಕಾಣುವಂತಾಗಿದೆ ಎಂದರು.
ಪ್ರಧಾನಿ ಮೋದಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಜನಪ್ರಿಯ ಅಭಿವೃದ್ಧಿ ಕಾರ್ಯಗಳಿಂದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಜಯಶಾಲಿಯನ್ನಾಗಿ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಬಗೆಯದ ರೀತಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಒದಗಿಸುವುದು ಹಾಗೂ ಯುವಕ-ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ನನ್ನ ಮುಖ್ಯ ಗುರಿಯಾಗಿದೆ. ಪಕ್ಷತೀತವಾಗಿ ಎಲ್ಲರೊಂದಿಗೆ ಬೆರೆತು ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ. ಎಲ್ಲರೂ ನನಗೆ ಸಹಕಾರ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಈ ನನ್ನ ಗೆಲುವಿಗೆ ಮುಳಬಾಗಿಲು ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಬಹುಮತ ದೊರಕಿದೆ. ನನ್ನ ತಂದೆ ತಾಯಿಗೆ, ಮೈತ್ರಿ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ನನ್ನ ಗೆಲುವು ಅರ್ಪಿಸುತ್ತೇನೆ ಎಂದು ನುಡಿದರು.