10ದಿನಗಳ ಗಡಿವು ನೀಡಿದ ಕಬ್ಬು ಬೆಳೆಗಾರರು * ಸಮಸ್ಯೆ ಬಗೆಹರಿಸದಿದ್ದರೆ ಹೋರಾಟದ ಎಚ್ಚರಿಕೆ
ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಾಳೆ ಬೇಳೆಗಾರರು
ಸರ್ಕಾರದಿಂದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಯ
ರೈತರ ಕುಂದು ಕೊರತೆ ಸಭೆಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಎಚ್ಚರಿಕೆ
ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲಾಧಿಕಾರಿ ರೈತರ ಸಮಸ್ಯೆಗಳನ್ನು ಜಿಲ್ಲಾ ಮಂತ್ರಿಗಳ ಗಮನಕ್ಕೆ ತಂದು, 10 ದಿನಗಳ ಒಳಗೆ ರೈತರೊಂದಿಗೆ ಸಭೆ ನಡೆಸಿ, ಸಮಸ್ಯೆಗೆ ಸೂಕ್ತ ಪರಿಹಾರ ನೀಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಎಚ್ಚರಿಸಿದ್ದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತರ ಕುಂದು ಕೊರತೆ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲ ಮತ್ತು ಪ್ರಕೃತಿ ವಿಕೋಪದ ದಾಳಿಗೆ ಸಿಲುಕಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜಿಲ್ಲೆಯಲ್ಲಿ ಕಳೆದ ತಿಂಗಳಿನಿಂದ ಸುರಿದ ಗಾಳಿ ಸಹಿತ ಬಾರಿ ಮಳೆಯಿಂದ ಬಾಳೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಎಕರೆ ಬಾಳೆ ಬೆಳೆಯಲು ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಹಣ ಖರ್ಚಾಗಲಿದೆ. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್, ಮಾನದಂಡದ ಪ್ರಕಾರ ತೋಟಗಾರಿಕಾ ಬೆಳೆಗಳಿಗೆ ಕೇವಲ 23 ಸಾವಿರ ರೂ. ಪರಿಹಾರ ನೀಡುವ ಅವಕಾಶವಿದೆ. ಇದತರಿಂದ ರೈತರಿಗೆ ಹೆಚ್ಚಿನ ನಷ್ಟವಾಗಲಿದೆ. ಸರ್ಕಾರ ಬಾಳೆ ಬೆಳೆಗಾರರನ್ನು ರಕ್ಷಿಸಲು ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಸೂಕ್ತ ಪರಿಹಾರ ಸಿಗಲಿ: ರಾಜ್ಯದಲ್ಲಿ 222 ತಾಲೂಕುಗಳು ತೀವ್ರ ಬರಗಾಲದಿಂದ ಕೂಡಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ವಂಚಿಸುತ್ತಿದೆ. ಹೀಗಾಗಿ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭವನ್ನು ಕೊಡಿಸಲು ಕ್ರಮವಹಿಸಬೇಕು ಎಂದರು.
ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರವನ್ನು ಅಳವಡಿಸಿ, ತೂಕದಲ್ಲಿ ಆಗುವ ಮೋಸವನ್ನು ತಡೆಗಟ್ಟಬೇಕು. ಈ ಸಾಲಿನಿಂದ ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ಮುಂಗಡ ಹಣವನ್ನು ಪಾವತಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಸ್ಥಳೀಯ ರೈತ ಮುಖಂಡರೊಂದಿಗೆ ತಜ್ಞರ ಸಮಿತಿ ರಚಿಸಬೇಕು. ಜತೆಗೆ ಸಕ್ಕರೆ ಇಲಾಖೆ ಆಯುಕ್ತರೊಂದಿಗೆ ಸಭೆ ನಡೆಸಬೇಕು. ಕಳೆದ ವರ್ಷದ ಬಾಕಿ ಇರುವ ಪ್ರತಿ ಟನ್ನಿಗೆ 150 ರೂ. ನೀಡುವ ಹಣವನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿದೆ. ಇವರಿಂದ ಜಿಲ್ಲೆಯ ರೈತರಿಗೆ 12 ಕೋಟಿ ರೂ. ಬರಬೇಕಿದೆ. ಈ ಹಣವನ್ನು ರೈತರಿಗೆ ಕೊಡಿಸಿಕೊಡಬೇಕು ಎಂದು ಎಚ್ಚರಿಸಿದರು.
ಯೋಜನೆ ಮರು ಜಾರಿಗೊಳಿಸಿ: ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿಗೊಳಿಸಬೇಕು, ರಾಜ್ಯದಲ್ಲಿರುವ ಸುಮಾರು 27 ಲಕ್ಷ ಹಾಲು ಉತ್ಪಾದಕರಿಗೆ 700ಕೋಟಿ ಹೆಚ್ಚುವರಿ ಪ್ರೋತ್ಸಾಹ ಧನವನ್ನು ಕೂಡಲೇ ರೈತರಿಗೆ ಕೊಡಿಸಬೇಕು, ಕಾಡಂಚಿನ ಪ್ರದೇಶದ ರೈತರ ಬೆಳೆ ಮತ್ತು ಪ್ರಾಣ ರಕ್ಷಣೆಗೆ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರವನ್ನು ನೀಡಬೇಕು, ರಾಜ್ಯ ಸರ್ಕಾರ ಬಿತ್ತನೆ ಬೀಜಗಳ ಬೆಲೆ ಏರಿಕೆ ಮಾಡಿರುವುದನ್ನು ಕೂಡಲೇ ಕೈಬಿಡಬೇಕು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರತಿ ಗ್ರಾಮಗಳಿಗೂ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕು. ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಬೇರೂರಿರುವ ಡೊನೇಷನ್ ವಸೂಲಿ ಹಾವಳಿಯನ್ನು ತಪ್ಪಿಸಬೇಕು. ಅನುದಾನ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ಮಾನದಂಡವನ್ನು ಮೀರಿ ಹಣ ಸುಲಿಗೆಯಾಗುತ್ತಿದೆ. ಇದನ್ನು ತಡೆಗಟ್ಟಿ ಪೋಷಕರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯದರ್ಶಿ ಮಲೆಯೂರು ಹರ್ಷ, ಜಿಲ್ಲಾಧ್ಯಕ್ಷರಾದ ಹಾಲಿನ ನಾಗರಾಜ್, ತಾಲೂಕ ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಬಸವರಾಜಪ್ಪ ನಂಜುಂಡ ನಾಯಕ, ಸಿದ್ದರಾಜು, ಮಹೇಶ್, ಮಂಜುನಾಥ್, ಗುರು, ಗುರುಮಲ್ಲಪ್ಪ, ಮಹೇಶ್, ಸಿದ್ದಲಿಂಗಪ್ಪ, ಸಿದ್ದಪ್ಪ, ಶ್ರೀಕಂಠ, ಮಹಾದೇವಸ್ವಾಮಿ, ಮೋಹನ್, ಚಂದ್ರಪ್ಪ, ಸುರೇಶ್ ಸೇರಿದಂತೆ ಇತರರು ಇದ್ದರು.
6ಸಿಎಚ್ಎನ್.2: ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರೈತರ ಕುಂದು ಕೊರತೆ ಸಭೆ ನಡೆಯಿತು.