ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಬಸ್ತಿಪುರ ರಸ್ತೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಾದಿಗೆ ಶುಕ್ರವಾರ ಬೆಳಗ್ಗೆ ಚುನಾವಣೆ ನಡೆಯಲಿದೆ.
ಸಂಘಕ್ಕೆ ಅಧ್ಯಕ್ಷಗಾದಿಗೆ 2022 ನ.10ರಂದು ಅವಿರೋಧವಾಗಿ ಆಯ್ಕೆಗೊಂಡಿದ್ದ ಪಟ್ಟಣದ ಭೀಮನಗರ ನಿವಾಸಿ ಪಿ.ಸೋಮಶೇಖರ್, 1 ವರ್ಷಕ್ಕೂ ಹೆಚ್ಚು ಕಾಲ ಉತ್ತಮ ಆಡಳಿತ ನಡೆಸಿ, ಸಂಘದ ಅಭಿವೃದ್ಧಿ ಹಾಗೂ ರೈತರಿಗೆ ಸಾಕಷ್ಟು ನೆರವಾಗಿದ್ದರು. ಬಳಿಕ ಸಂಘದ ನಿರ್ದೇಶಕರ ಆಂತರಿಕ ಒಪ್ಪಂದಂತೆ ಪಿ.ಸೋಮಶೇಖರ್ ಮಾ.13ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ನೀಡಿದ್ದರು. ಇದಾದ 15 ದಿನಗಳ ನಂತರ ನಿಯಮಾನುಸಾರ ಸಂಘದ ಸಿಇಒ ಬಿ.ನಾಗರಾಜು ಸಹಕಾರ ಸಂಘಗಳ ಕಾಯ್ದೆ ಅನ್ವಯ ರಾಜೀನಾಮೆ ಅಂಗಿಕರಿಸಿದ್ದರಲ್ಲದೇ, ಸಂಘದ ಅಧ್ಯಕ್ಷಗಾದಿಯ ಉಳಿದ ಅವಧಿಗೆ ಆಯ್ಕೆ ಮಾಡಲು ರಿರ್ಟನಿಂಗ್ ಅಧಿಕಾರಿಯನ್ನು ನೇಮಕ ಮಾಡಲು ಶಿಫಾರಸ್ಸು ಮಾಡಿಕೊಡುವಂತೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗೆ ಪತ್ರ ಬರೆದಿದ್ದರು.
ಈ ನಡುವೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆ ನೂತನಾಧ್ಯಕ್ಷರನ್ನು ಆಯ್ಕೆ ಮಾಡಲು ತೊಡಕಾಗಿತ್ತು. ಇದೀಗ ಲೋಕ ಚುನಾವಣೆ ನೀತಿ ಸಂಹಿತೆ ಮುಗಿದಿರುವ ಹಿನ್ನೆಲೆ ಜೂ.7ಕ್ಕೆ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಹಾಗಾಗಿ, ಸಂಘದ ಒಟ್ಟು 12 ನಿರ್ದೇಶಕರಿಗೆ ಚುನಾವಣಾಧಿಕಾರಿ ಮೊಹಮ್ಮದ್ ನದೀಮ್ ಅವರು ಚುನಾವಣೆಯಲ್ಲಿ ಪಾಲ್ಗೊಳ್ಳಲು ನೋಟೀಸ್ ನೀಡಿದ್ದಾರೆ. ಬೆಳಗ್ಗೆ 9ರಿಂದ 10 ಗಂಟೆವರೆಗೆ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, 11 ಗಂಟೆ ಬಳಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಧ್ಯಕ್ಷಗಾದಿಗೆ ಸಂಘದ ನಿರ್ದೇಶಕರಾದ ಹಂಪಾಪುರದ ಎಚ್.ಎಂ.ಮಹಾದೇವಪ್ಪ ಹಾಗೂ ಕೆಂಪನಪಾಳ್ಯ ಗ್ರಾಮದ ಕೆ.ಎಸ್.ಮಹೇಶ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ನಿರೀಕ್ಷೆಯಂತೆ ಎಚ್.ಎಂ.ಮಹದೇವಪ್ಪ ಅವರಿಗೆ ಅಧ್ಯಕ್ಷಗಾದಿ ಒಲಿಯುವ ಸಾಧ್ಯತೆ ಹೆಚ್ಚಾಗಿದೆ.
6ಕೆಜಿಎಲ್-1
ಫೋಟೋ ಶೀರ್ಷಿಕೆ:
ಅಧ್ಯಕ್ಷಗಾದಿ ಆಕಾಂಕ್ಷಿಗಳಾದ ಎಚ್.ಎಂ.ಮಹಾದೇವಪ್ಪ ಹಾಗೂ ಕೆ.ಎಸ್.ಮಹೇಶ್ ಅವರ ಫೋಟೋ ಇದೆ