ಕೊಯಮತ್ತೂರು: ”ನನ್ನ ತಂದೆ ಕರುಣಾನಿಧಿ ಆಗಿದ್ದರೆ ನಾನೂ ಕೂಡ ಇಷ್ಟೊತ್ತಿಗೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ. ನನ್ನ ತಂದೆಯ ಹೆಸರು ಕುಪ್ಪುಸ್ವಾಮಿ, ಹಾಗಾಗಿ ನಾನು ಚುನಾವಣೆಯಲ್ಲಿ ಗೆಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. 2026ರಲ್ಲಿ ನಾವು ತಮಿಳುನಾಡಿನಲ್ಲಿ ಸರ್ಕಾರ ರಚಿಸುತ್ತೇವೆ’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ನಂತರ ಕೊಯಮತ್ತೂರಿನಲ್ಲಿ ಬಿಜೆಪಿ ನಾಯಕ ಈ ರೀತಿ ಹೇಳಿದ್ದಾರೆ. ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ಸೋಲಿನ ಬಗ್ಗೆ ಡಿಎಂಕೆ ನಾಯಕಿ ಕನಿಮೊಳಿ ಟೀಕಿಸಿದ ನಂತರ ಬಿಜೆಪಿ ನಾಯಕರ ಪ್ರತಿಕ್ರಿಯೆ ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನನಗೆ ಯಾವ ಅರ್ಹತೆ ಇದೆ ಎಂದು ಪದೇ ಪದೇ ಕೇಳುತ್ತಾರೆ. ಈಗ ಎರಡನೇ ಬಾರಿಗೆ ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಅವರಿಗೆ ಉತ್ತರ ನೀಡುತ್ತೇನೆ. ಈ ಅರ್ಹತೆಯೂ ಇಲ್ಲದ ವ್ಯಕ್ತಿ ಇಲ್ಲಿ ಬಿಜೆಪಿ ನಾಯಕರಾಗಿ ಮುಂದುವರಿದರೆ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಕನಿಮೊಳಿ ಹೇಳಿದ್ದರು. ಡಿಎಂಕೆ ಸಂಸ್ಥಾಪಕ ಎಂ ಕರುಣಾನಿಧಿ ಅವರ ಪುತ್ರಿ ಕನಿಮೊಳಿ ತೂತುಕುಡಿಯಿಂದ ಲೋಕಸಭೆಗೆ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇವರು ಎಐಎಡಿಎಂಕೆ ಅಭ್ಯರ್ಥಿ ವಿರುದ್ಧ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಮತ್ತೊಂದೆಡೆ, ಜೂನ್ 4, 2024 ರಂದು ಫಲಿತಾಂಶ ಪ್ರಕಟವಾದಾಗ ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಅವರು ಡಿಎಂಕೆಯ ಗಣಪತಿ ರಾಜ್ಕುಮಾರ್ ವಿರುದ್ಧ 1 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಕುರಿತು ಮಾತನಾಡಿದ ಅಣ್ಣಾಮಲೈ, “10 ವರ್ಷಗಳ ಹಿಂದೆ ನವೀನ್ ಪಟ್ನಾಯಕ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಯನ್ನು ಕೇಳಲಾಗಿತ್ತು. ಹಾಗಾಗಿರುತ್ತಿದ್ದರೆ ಇಂದು ಬಿಜೆಪಿ ಒಡಿಶಾವನ್ನು ಗೆಲ್ಲುತ್ತಿತ್ತೇ? 2004 ರಲ್ಲಿ ಶೂನ್ಯ ಸ್ಥಾನದಿಂದ 2009 ರಲ್ಲಿ 1 ಸ್ಥಾನಕ್ಕೆ, ಈಗ ನಾವು ಒಡಿಶಾವನ್ನು ಆಳುತ್ತಿದ್ದೇವೆ. ಹಂತ ಹಂತವಾಗಿ ಒಂದು ಪಕ್ಷ ಬೆಳೆಯುವುದು ಹೀಗೆ. ನಾನು ತಮಿಳುನಾಡಿನಲ್ಲಿ ಪಕ್ಷವನ್ನು ಬೆಳೆಸಲು ಬಂದಿದ್ದೇನೆ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಅಲ್ಲ. ಪಕ್ಷವು ಹೊಂದಾಣಿಕೆಯ ನಾಯಕತ್ವವನ್ನು ಬಯಸಿದರೆ, ಅವರು ಅಂತಹ ನಾಯಕನನ್ನು ನಿಯೋಜಿಸುತ್ತಾರ ಎಂದು ಹೇಳಿದ್ದಾರೆ.