– ನಿರ್ಮಲ ಆಸ್ಪತ್ರೆಯಲ್ಲಿ ಪರಿಸರ ದಿನಾಚರಣೆ
ಮೈಸೂರು: ಉತ್ತಮ ಪರಿಸರವನ್ನು ಕಾಯ್ದುಕೊಳ್ಳುವ ಮೂಲಕ ಪ್ರತಿಯೊಬ್ಬರು ಆರೋಗ್ಯದಿಂದ ಇರಬಹುದು, ಹೀಗಾಗಿ ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡೋಣ ಎಂದು ನಿರ್ಮಲ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ಬಸವರಾಜು ಹೇಳಿದರು.
ನಗರದ ನಿರ್ಮಲ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಯಿಂದ ನಾವೇ ಹೊರತು ನಮ್ಮಿಂದ ಭೂಮಿಯಲ್ಲ, ಈ ವರ್ಷದ ಘೋಷವಾಕ್ಯವಾದ ಭೂಮಿಯ ರಕ್ಷಣೆ, ಭೂಸವೆತದಿಂದ ಹಾಗೂ ಮರುಭೂಮೀಕರಣದಿಂದ ಭೂಮಿಯನ್ನು ಕಾಯ್ದುಕೊಳ್ಳುವಿಕೆ ಮೂಲಕ ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಉತ್ತಮ ಪರಿಸರ ಕಾಯ್ದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಆರೋಗ್ಯದಿಂದ ಇರಬಹುದು. ಆದ್ದರಿಂದ ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡೋಣ ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಪರಿಸರ ದಿನಾಚರಣೆ ಅಂಗವಾಗಿ ಆಸ್ಪತ್ರೆಯಿಂದ ರೋಗಿಗಳು, ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಅಲ್ಲದೇ ಆಸ್ಪತ್ರೆಯ ಸುತ್ತಮುತ್ತ ಗಿಡಗಳನ್ನು ನೆಡಲಾಯಿತು ಹಾಗೂ ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವ ಆಶಯವನ್ನು ಹೊಂದಿರುವುದಾಗಿ ಆಸ್ಪತ್ರೆಯ ನಿರ್ದೇಶಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ನಿರ್ಮಲ, ಒರಲ್ ಮ್ಯಾಕ್ಸಿಲೋ ಫೇಶಿಯಲ್ ಸರ್ಜನ್ ಡಾ. ಮನು ಪ್ರಸಾದ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಕುಮಾರ್, ಮುರಳಿ, ಡಾ. ಮುಕುಂದ್, ಡಾ.ಜೀವನ್ ಹಾಗೂ ಸಿಬ್ಬಂದಿ ಇದ್ದರು.
===================