3ನೇ ಪುಟಕ್ಕೆ ಲೀಡ್
– ಮೈ ರಿಯಾಲಿಟಿ-2024 ವಸ್ತುಪ್ರದರ್ಶನಕ್ಕೆ ಚಾಲನೆ
– ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜನೆ
ಪ್ರತಿನಿಧಿ ವರದಿ ಮೈಸೂರು
ಜನರ ನಿರೀಕ್ಷೆಗೆ ಅನುಗುಣವಾಗಿ ಬಡಾವಣೆಗಳನ್ನು ನಿರ್ಮಿಸುವ ಬಿಲ್ಡರ್ಸ್ಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕಿದ್ದು, ಪರಿಸರ ಸಂರಕ್ಷಣೆಯಲ್ಲಿ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕಾಗಿದೆ ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಅಂಡ್ ಕಮಿಷನರ್ ಆಫ್ ಸ್ಟಾಂಪ್ಸ್ ಡಾ.ಬಿ.ಆರ್.ಮಮತಾ ಸಲಹೆ ನೀಡಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ, ಕ್ರೆಡಾಯ್ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಮೈ ರಿಯಾಲಿಟಿ 2024 ರಿಯಲ್ ಎಸ್ಟೇಟ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಪರಿಸರದ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ವಿವಿಧ ಕಾರಣಗಳಿಂದ ಮರಗಳ ಹನನ ಯಥೇಚ್ಛವಾಗಿ ನಡೆಯುತ್ತಿದೆ. ಇದರಿಂದಾಗಿ ಹವಾಮಾನ ವೈಪರಿತ್ಯ ಉಂಟಾಗಿ, ಮೈಸೂರು, ಬೆಂಗಳೂರು ಸೇರಿದಂತೆ ಎಲ್ಲೆಡೆ ತೀವ್ರ ಸ್ವರೂಪದ ಉಷ್ಣಾಂಶ ದಾಖಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮರಗಳ ಹನನ ನಿಲ್ಲಿದಿದ್ದರೆ ಹವಾಮಾನದ ದುಷ್ಪರಿಣಾಮ ಇನ್ನೂ ಹೆಚ್ಚಾಗಿ ಮತ್ತಷ್ಟು ಸಮಸ್ಯೆ ಆಗಬಹುದು. ಈ ಹಿನ್ನೆಲೆಯಲ್ಲಿ ಬಿಲ್ಡರ್ಸ್ಗಳು ಬಡಾವಣೆ ನಿರ್ಮಾಣಕ್ಕೆ ಜಾಗವನ್ನು ಖರೀದಿಸುವ ಸಂದರ್ಭದಲ್ಲಿ ಮರಗಳು ಬೆಳೆದಿದ್ದರೆ ಸಾಧ್ಯವಾದಷ್ಟು ಅವುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು ಹಾಗೂ ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಹೇಳಿದರು.
ನಿರೀಕ್ಷೆಗೂ ಮೀರಿದ ಪ್ರಗತಿ: ಇತ್ತೀಚಿನ ದಿನಗಳಲ್ಲಿ ರಾಷ್ಟ್ರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿದ್ದು, ರಾಜ್ಯ ಹಾಗೂ ದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ದೇಶದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ 1.3 ಟ್ರಿಲಿಯನ್ ಡಾಲರ್ ವಹಿವಾಟು ನಡೆಸುತ್ತದೆ. ಈ ವರ್ಷ ಸ್ಟಾಂಪ್ಸ್ ಅಂಡ್ ರಿಜಿಸ್ಟ್ರೇಷನ್ನಲ್ಲಿ ಶೇ.15 ಗ್ರೋಥ್ ರೇಟ್ ದಾಖಲಾಗಿದೆ. ಆದಾಯ ಸಂಗ್ರಹದಲ್ಲಿ ಈ ವರ್ಷ 20 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಇಲಾಖೆ ಮುಂದಿತ್ತು. ಆದರೆ 20,287 ಕೋಟಿ ಆದಾಯ ಸಂಗ್ರಹಿಸಲಾಗಿದೆ. 2022-23ನೇ ಸಾಲಿನಲ್ಲಿ 15 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ನೀಡಲಾಗಿತ್ತು. ಆದರೆ 17 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇದರಿಂದ ಗ್ರೋಥ್ ರೇಟ್ ಶೇ.೨೦ರಷ್ಟು ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವರ್ಷಗಳಲ್ಲೂ ರಿಯಲ್ ಎಸ್ಟೇಟ್ ಉದ್ಯಮ ಇನ್ನಷ್ಟು ಪ್ರಗತಿ ಕಾಣಲಿದೆ ಎಂದರು.
ಅನ್ನ ಕಿತ್ತುಕೊಳ್ಳುತ್ತಿದ್ದೇವೆ: ಜನಸಾಮಾನ್ಯರಿಗೆ ಅಗತ್ಯವಿರುವ ಮನೆ ನಿರ್ಮಿಸಿಕೊಡಲು ನಾವು ಅನ್ನ ಕಿತ್ತುಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ. ಬಡಾವಣೆಗಳ ನಿರ್ಮಾಣಕ್ಕಾಗಿ ನೊಂದಣಿ ಕಚೇರಿಗೆ ಕೃಷಿ ಭೂಮಿಯನ್ನೇ ಅನ್ಯಕ್ರಾಂತ ಮಾಡಿಸಲು ಅರ್ಜಿ ಸಲ್ಲಿಕೆಯಾಗುತ್ತಿವೆ. ಇದನ್ನು ಕಂಡಾಗ ನೋವುಂಟಾಗುತ್ತದೆ. ಬಡಾವಣೆಗಳನ್ನು ನಿರ್ಮಿಸುವುದಕ್ಕೂ ಮುನ್ನ ಆ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿರುತ್ತವೆ. ದವಸ ಧಾನ್ಯ ಬೆಳೆಯುತ್ತಿರುತ್ತಾರೆ. ಬಡಾವಣೆ ನಿರ್ಮಾಣಗೊಂಡರೆ ಆ ಭೂಮಿಯಲ್ಲಿ ಏನನ್ನು ಬೆಳೆಯಲು ಸಾಧ್ಯವಿಲ್ಲ. ಇದರಿಂದ ಮನೆ ನಿರ್ಮಾಣಕ್ಕೆ ಅನ್ನವನ್ನು ಕಿತ್ತುಕೊಳ್ಳುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಗತ್ಯ ದಾಖಲೆಗಳ ಸಲ್ಲಿಕೆ: ರಾಜ್ಯದಲ್ಲೇ ಮೈಸೂರಲ್ಲಿ ಆಸ್ತಿ ನೊಂದಣಿ ವಿಚಾರದಲ್ಲಿ ನೊಂದಣಿ ಕಚೇರಿಗೆ ಅಗತ್ಯವಿರುವ ದಾಖಲೆಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಸಲ್ಲಿಸಲಾಗುತ್ತಿದೆ. ಇದಕ್ಕೆ ಬಿಲ್ಡರ್ಸ್ ಅಸೋಸಿಯೇಷನ್ ಇಂಡಿಯಾ ಮೈಸೂರು ಘಟಕ, ಕ್ರೆಡಾಯ್, ಬಿಲ್ಡರ್ಸ್ ಚಾರಿಟೇಬಲ್ ಟ್ರಸ್ಟ್ ಸದಸ್ಯರ ಬದ್ಧತೆ ಕಾರಣ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಆಸ್ತಿ ನೊಂದಣಿಗೆ ಬರುವ ಡೆವಲಪರ್ಸ್ಗಳು ಅಗತ್ಯ ದಾಖಲೆಗಳನ್ನು ತರುವುದೇ ಇಲ್ಲ. ಇದರಿಂದ ನೊಂದಣಿ ಪ್ರಕ್ರಿಯೆ ವಿಳಂಭವಾಗುತ್ತದೆ. ಅಲ್ಲದೆ, ಆದಾಯ ಸಂಗ್ರಹವೂ ಕುಂಠಿತವಾಗುತ್ತದೆ. ಮೈಸೂರಿನಲ್ಲಿ ಆಸ್ತಿ ನೊಂದಣಿಗೆ ಅಗತ್ಯವಿರುವಂತಹ ದಾಖಲೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಮಾತೃ ದಾಖಲೆ ಪರಿಶೀಲಿಸಿ: ಡೆವಲಪರ್ಗಳು ಬಡಾವಣೆ ಹಾಗೂ ವಸತಿ ಸಮುಚ್ಛಯ ನಿರ್ಮಿಸಲು ಆಸ್ತಿ ಖರಿದಿಸುವ ಮುನ್ನ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಕೆಲವು ಆಸ್ತಿಗಳು ವಿವಾದದಿಂದ ಕೂಡಿರುತ್ತದೆ. ಈ ನಿಟ್ಟಿನಲ್ಲಿ ಮಾರಾಟ ಮಾಡುವವರು ಸುಲಭವಾಗಿ ಮಾರಾಟ ಮಾಡಿ, ಸಮಸ್ಯೆಯಿಂದ ಬಿಡುಗಡೆ ಆಗಲು ಪ್ರಯತ್ನಿಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಆಸ್ತಿಯನ್ನು ಖರೀದಿಸಿದ್ದವರು ಸಮಸ್ಯೆಗೆ ಸಿಲುಕುತ್ತಾರೆ. ಈ ಹಿನ್ನೆಲೆಯಲ್ಲಿ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆ ಪರಿಶೀಲಿಸಬೇಕು. ಅಲ್ಲದೆ, ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಳ್ಳುವುದು ಅನಿವಾರ್ಯ. ಒಂದು ವೇಳೆ ದಾಖಲೆಗಳನ್ನು ಪರಿಶೀಲಿಸದೆ ಖರೀದಿಸಿದ ಜಾಗದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಕಟ್ಟಡಗಳನ್ನು ನಿರ್ಮಾಣ ಅಥವಾ ಬಡಾವಣೆ ನಿರ್ಮಿಸಿದರೆ ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದರು.
ಮೈ ರಿಯಾಲಿಟಿ ಪ್ರದರ್ಶನ ಅಧ್ಯಕ್ಷ ಕೆ.ಎನ್.ರವಿಶಂಕರ್, ಕಾರ್ಯದರ್ಶಿ ಅಶ್ವಿನ್ ಆರ್.ಪಾಳೆಗಾರ್, ಕ್ರೆಡಾಯ್ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್, ಬಿಎಐ ಮೈಸೂರು ಅಧ್ಯಕ್ಷ ಎ.ಎಸ್. ಯೋಗನರಸಿಂಹ, ಕಾರ್ಯದರ್ಶಿ ಕೆ.ಆರ್.ಪ್ರಭಾಕರ್ ರಾವ್, ಕಾರ್ಯದರ್ಶಿ ಎಲ್.ಅರುಣ್ ಪಂಡಿತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
==================
ಕೋಟ್
ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿತ್ತು. ಅದನ್ನು ಜನಸ್ನೇಹಿಗೊಳಿಸಲು ಕಾವೇರಿ ತಂತ್ರಾಂಶ ಅಭಿವೃದ್ದಿಪಡಿಸಿ, ನೋಂದಣಿ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಆದರೂ ಸಣ್ಣಪುಟ್ಟ ಲೋಪಗಳಿರುವುದು ಗೊತ್ತಾಗಿದೆ. ಇದನ್ನು ಸರಿಪಡಿಸಿ ಸುಲಲಿತ ಸೇವೆ ನೀಡಲು ಕಾವೇರಿ-೨ ತಂತ್ರಾಂಶ ಅಳವಡಿಸಲಾಗಿದ್ದು, ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ.
ಡಾ.ಬಿ.ಆರ್. ಮಮತಾ,
ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಅಂಡ್ ಕಮಿಷನರ್ ಆಫ್ ಸ್ಟಾಂಪ್ಸ್.
=================
ಮೈಸೂರು ನಗರ ವ್ಯವಸ್ಥಿತವಾಗಿ ಬೆಳೆಯಲು ಬಿಲ್ಡರ್ಸ್ಗಳ ಬದ್ದತೆಯೇ ಕಾರಣ. ಮೈಸೂರಿನಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಇದ್ದು, ಜನರಿಗೆ ಯಾವುದೇ ತೊಂದರೆ ಆಗದಂತೆ ನಗರ ಬೆಳೆಯುತ್ತಿದೆ. ಇನ್ನು ಸುಸಜ್ಜಿತವಾಗಿ ಬೆಳೆಯಲು ಬಿಲ್ಡರ್ಸ್ ಅಸೋಸಿಯೇಷನ್ಗೆ ಇಲಾಖೆ ಸಹಕಾರ ನೀಡಲಿದೆ.
ಡಾ.ಪಂಕಜ,
ಜಂಟಿ ನಿರ್ದೇಶಕರು,
ಟೌನ್ ಹಾಗೂ ಕಂಟ್ರಿ ಪ್ಲಾನಿಂಗ್.
=================
ಬಾಕ್ಸ್
ವಸ್ತು ಪ್ರದರ್ಶನಕ್ಕೆ ಚಾಲನೆ: ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಮೈ ರಿಯಾಲಿಟಿ-2024 ರಿಯಲ್ ಎಸ್ಟೇಟ್ ವಸ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಈ ಪ್ರದರ್ಶನದಲ್ಲಿ ೩೦ ಮಳಿಗೆಗಳಲ್ಲಿ ವಿವಿಧ ಬಿಲ್ಡರ್ಸ್ಗಳು ಬಡಾವಣೆ, ವಸತಿ ಸಮುಚ್ಛಯ, ಮನೆ ನಿರ್ಮಾಣ ಸೇರಿದಂತೆ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ಮಾಹಿತಿಗಳನ್ನು ಜನರಿಗೆ ನೀಡಿದ್ದಾರೆ. ಮೈಸೂರಿನಲ್ಲಿ ಮನೆ, ನಿವೇಶನ ಖರೀದಿ ಮಾಡಲು ಬಯಸುವವರಿಗೆ ಒಂದೇ ಸೂರಿನಡಿ ಸೂಕ್ತ ಮಾಹಿತಿ ದೊರೆಯಲಿದೆ. ಜೂ.೧೦ರವರೆಗೆ ಪ್ರತಿದಿನ ಬೆಳಗ್ಗೆ ೧೦ರಿಂದ ರಾತ್ರಿ ೮.೩೦ರವರೆಗೆ ಪ್ರದರ್ಶನ ವೀಕ್ಷಿಸಬಹುದ್ದು, ಈ ಪ್ರದರ್ಶನದಲ್ಲಿ ವಿವಿಧ ಕಂಪನಿಗಳ ಕಾರು ಹಾಗೂ ದ್ವಿಚಕ್ರ ವಾಹನ ಪ್ರದರ್ಶನ, ಸಾಲ ಸೌಲಭ್ಯದ ಮಾಹಿತಿ ನೀಡುವ ಮಳಿಗೆಗಳು ಸಹ ಇದೆ.
=================
ಫೋಟೋಗಳು ಬರಲಿದೆ