ಜಿಲ್ಲಾ ರಕ್ತನಿಧಿ ಘಟಕದ ವೈದ್ಯ ಕರುಂಬಯ್ಯ ಮಾಹಿತಿ
ರಕ್ತದಾನ ಶಿಬಿರ
ಸೋಮವಾರಪೇಟೆ: ಜಿಲ್ಲೆಯಲ್ಲಿ ಡೆಂಘೆಯಿಂದ ಪ್ರಕರಣಗಳು ಹೆಚ್ಚು ವರದಿಯಾದಂತೆ ರಕ್ತಕ್ಕೆ ಬೇಡಿಕೆಯೂ ದ್ವಿಗುಣಗೊಂಡಿದೆ. ಆದರೆ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಅಸಾಧ್ಯ. ಈ ಹಿನ್ನೆಲೆ ಆರೋಗ್ಯವಂತರೆಲ್ಲರೂ ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದರು.
ತಾಲೂಕಿನ ಜಾನಪದ ಪರಿಷತ್ ಹಾಗೂ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ರಕ್ತದಾನ ಶಿಬಿರ ನಡೆಯಿತು.
ಇದರೊಂದಿಗೆ ಹಲವು ಮಕ್ಕಳು ರಕ್ತ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆಗೆ ಒಳಗಾಗುತ್ತಿದ್ದು, ಅವರಿಗೂ ರಕ್ತದ ಅವಶ್ಯಕತೆಯಿದೆ. ರಕ್ತನಿಧಿ ಘಟಕದಲ್ಲಿ ಸಂಗ್ರಹಗೊಳ್ಳುವ ಅರ್ಧ ಪ್ರಮಾಣದ ರಕ್ತ ಗರ್ಭಿಣಿಯರಿಗೆ ಬಳಕೆಯಾಗುತ್ತಿದೆ ಎಂದು ಕರುಂಬಯ್ಯ ಹೇಳಿದರು.
ತಿಂಗಳಿಗೆ ಸರಾಸರಿ ೫೦೦ ಯೂನಿಟ್ ರಕ್ತದ ಅವಶ್ಯಕತೆಯಿದೆ. ಆದ್ದರಿಂದ ರಕ್ತದಾನ ನಿರಂತರ ಪ್ರಕ್ರಿಯೆಯಾಗಿರಬೇಕು. ಆರೋಗ್ಯವಂತರು ಪ್ರತಿ ೩ ರಿಂದ ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇಂತಹ ಶಿಬಿರಗಳನ್ನು ಸ್ಥಳೀಯವಾಗಿ ಆಯೋಜಿಸಿದರೆ ಹೆಚ್ಚು ಅನುಕೂಲ. ಈ ನಿಟ್ಟಿನಲ್ಲಿ ಜಾನಪದ ಪರಿಷತ್ ಹಾಗೂ ಒಕ್ಕಲಿಗರ ಯುವ ವೇದಿಕೆಯ ಸೇವೆ ಶ್ಲಾಘನೀಯ ಎಂದರು.
ವೇದಿಕೆಯಲ್ಲಿದ್ದ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಬಿ.ಜೆ.ದೀಪಕ್ ಮಾತನಾಡಿ, ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ನಮಗೆ ರಕ್ತದ ಅವಶ್ಯಕತೆಯಿದ್ದಾಗ ಮಾತ್ರ ಅದರ ಬೆಲೆ ತಿಳಿಯುತ್ತದೆ. ಆದ್ದರಿಂದ ಸ್ವಯಂಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು. ನಮ್ಮ ರಕ್ತ ಮತ್ತೋರ್ವರ ಜೀವ ಉಳಿಸುತ್ತದೆ ಎಂಬ ಸಾರ್ಥಕತೆ ಪಡೆಯಬೇಕು. ಕಾಲೇಜುಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರಕ್ತದಾನ ಶಿಬಿರಕ್ಕೆ ಪ್ರೋತ್ಸಾಹ ನೀಡುತ್ತಿರುವ ಡಾ.ಕರುಂಬಯ್ಯ, ಸೋಮವಾರಪೇಟೆ ಲ್ಯಾಬ್ನ ಸಿಬ್ಬಂದಿ ತಸ್ಮಿಯಾ ಅವರುಗಳನ್ನು ಸನ್ಮಾನಿಸಲಾಯಿತು. ಒಟ್ಟು ೫೧ ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.
ಜಾನಪದ ಪರಿಷತ್ ಅಧ್ಯಕ್ಷ ಕೆ.ಎ.ಪ್ರಕಾಶ್, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಮೀನಾಕ್ಷಿ ವೇದಿಕೆಯಲ್ಲಿದ್ದರು. ಜಾನಪದ ಪರಿಷತ್ ಕಾರ್ಯದರ್ಶಿ ಎಂ.ಎ.ರುಬೀನಾ, ಅರುಣ ಕುಸುಬೂರು, ಸುಶೀಲಾ ಹಾನಗಲ್ ಕಾರ್ಯಕ್ರಮ ನಿರ್ವಹಿಸಿದರು.