- ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ಅಭಿಪ್ರಾಯ
ಪ್ರತಿನಿಧಿ ವರದಿ ಗೋಣಿಕೊಪ್ಪ
ಪ್ರತಿಭೆ ಅನಾವರಣಕ್ಕೆ ಸ್ವಯಂ ಅವಕಾಶದಿಂದ ದಾರಿ ಕಂಡುಕೊಳ್ಳಬೇಕಿದೆ ಎಂದು ಖ್ಯಾತ ಸಂಗೀತಗಾರ ವಿಜಯ ಪ್ರಕಾಶ್ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಧ ವತಿಯಿಂದ ದುರ್ಗಾಬೋಜಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೈಜ ಪ್ರತಿಭೆ ಹೊರ ತರಲು ಸ್ವಯಂ ಪ್ರಯತ್ನ ಕೂಡ ಮುಖ್ಯ. ಇಂದಿನ ತಂತ್ರಜ್ಞಾನ ಬೆಳವಣಿಗೆಯಲ್ಲಿ ಸಣ್ಣ ವಿಡಿಯೋ ತುಣುಕು ಕೂಡ ಅವಕಾಶ ತೆರೆದುಕೊಳ್ಳಲಿದೆ. ಸ್ವಯಂ ವೇದಿಕೆಯಿಂದ ವಿಶ್ವ ಮಟ್ಟದಲ್ಲಿ ಗಮನ ಸೆಳೆಯಲು ಪ್ರಯತ್ನಿಸಬೇಕಿದೆ. ಯಶಸ್ಸು ಕೂಡ ದೊರೆಯಲಿದೆ ಎಂದು ಭರವಸೆ ಮೂಡಿಸಿದರು.
ನೈಜ ಪ್ರತಿಭೆ ಇರುವವರು ಅಡುಗೆ ಮನೆಯಲ್ಲಿಯೇ ಹಾಡಬಹುದು. ಸರಿಗಮಪ ಉಚ್ಚರಣೆ ಮೂಲಕ ಹಾಡುಗಾರಿಕೆಗೆ ಅವಕಾಶ ಸಿಗುತ್ತದೆ. ಮನೆಯಲ್ಲಿ ಹಾಡು ಗುನುಗುವುದರಿಂದ ಹಾಡುಗಾರನಾಗಿ ಬೆಳೆಯಬಹುದು. ತಂತ್ರಜ್ಞಾನದಲ್ಲಿ ತಮ್ಮ ಪ್ರತಿಣೆಗೆ ಪ್ರೋತ್ಸಾಹ ಸಿಗುವಂತೆ ಮಾಡಿಕೊಳ್ಳಬಹುದು. ಸಂಗೀತದಿಂದ ಸಾಕಷ್ಟು ಸಾಧಿಸಲು ಅವಕಾಶವಿದೆ. ಮನಸ್ಸಿನಲ್ಲಿ ಹೊಸತನ, ಹೊಸ ಚಿಂತನೆ ಹೊರ ಬರಲು ಸಂಗೀತ ಕೇಳಬೇಕು. ನವರಸದಲ್ಲಿ ಸಂಗೀತ ಕೂಡ ಆತ್ಮರಂಜನೆ ನೀಡುತ್ತದೆ. ಹಾಡುವುದು, ಹಾಡು ಕೇಳುವುದು ಮುಖ್ಯ ಎಂದು ಸಲಹೆ ನೀಡಿದರು.
ಜೀವನಕ್ಕೆ ಸಂಗೀತವನ್ನು ಔಷಧ ರೂಪದಲ್ಲಿ ಬಳಸಿಕೊಳ್ಳಬೇಕು. ಸಂಗೀತ ಕೇಳುವುದರಿಂದ ಮನಸ್ಸಿಗೆ ಮತ್ತು ದೇಹಕ್ಕೆ ಮುದ ದೊರೆಯುತ್ತದೆ. ಇದು ಒಂದು ರೀತಿಯ ಔಷದವಾಗಿದೆ ಎಂಬುವುದು ಸಂಶೋಧನೆ ವರದಿ ಕೂಡ ವ್ಯಕ್ತಪಡಿಸಿದೆ. ಕಲಾವಿದನಿಗಿಂತ ಕಲಾ ರಸಿಕತನ ಶ್ರೇಷ್ಠವಾಗಿದೆ. ಕಲೆಯನ್ನು ಆಸ್ವಾಧಿಸಿದಾಗ ವೈಯಕ್ತಿಕವಾಗಿ ಮಾತ್ರವಲ್ಲದೆ ಸಮಾಜಕ್ಕೂ ಲಾಭ ಎಂದರು.
ಇಂದಿನ ಕಾಲಘಟ್ಟದಲ್ಲಿ ಜೀವನದಲ್ಲಿ ಅತಿಯಾದ ವೇಗ ಗಂಡಾಂತರ ತಂದೊಡ್ಡುತ್ತಿದೆ. ಭವಿಷ್ಯವನ್ನು ಊಹಿಸದೆ ಅವಶ್ಯಕತೆಗಿಂತ ಹೆಚ್ಚಿನ ವೇಗ ಬದುಕಿಗೆ ಬೇಡ ಎಂಬ ಅರಿವು ಮುಖ್ಯವಾಗಬೇಕು. ಬಾನಿಗೊಂದು ಎಲ್ಲೆ ಎಲ್ಲಿದೆ. ನಿನ್ನಾಸೆ ಕೊನೆ ಎಲ್ಲಿದೆ ಎಂಬ ಹಾಡು ಅರ್ಥೈಸಿಕೊಂಡು ಮುಂದುವರಿಯುವ ಅನಿವಾರ್ಯತೆ ಇದೆ. ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯತೆ ಹೆಚ್ಚಿದೆ ಎಂದರು.
ಸಿನೆಮಾಗಳಲ್ಲಿ ಬರುವ ಕಥೆಗಳು ಸಮಾಜದಲ್ಲಿ ನಡೆಯುವ ಘಟನೆಗಳು ಕೂಡ ಹೆಚ್ಚಾಗಿರುತ್ತದೆ. ಒಮ್ಮೊಮ್ಮೆ ಸಿನೆಮಾದಿಂದಲೂ ಸಮಾಜಕ್ಕೆ ಕಥೆ ನೀಡಿದಂತಾಗುತ್ತದೆ. ನಮ್ಮ ಪರಿವರ್ತನೆಗೆ ನಾವು ಚಿಂತನೆ ನಡೆಸಬೇಕು ಎಂದು ವಿಜಯ ಪ್ರಕಾಶ್ ಹೇಳಿದರು.
ಕೊಡಗು ಜಾಗತಿಕ ಮಟ್ಟದಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಸಂಪ್ರದಾಯ, ಪದ್ದತಿ, ಸಂಸ್ಕೃತಿ ಎಲ್ಲಿಯೂ ಕಾಣುವುದಿಲ್ಲ. ಇದರಿಂದಾಗಿ ಸಂಸ್ಕೃತಿ ಉಳಿಸುವ ಅವಶ್ಯಕತೆ ಇದೆ.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಖಜಾಂಜಿ ವಿ.ವಿ.ಅರುಣ್ಕುಮಾರ್, ನಿದೇಶಕರಾದ ಚಿಮ್ಮಣಮಾಡ ದರ್ಶನ್ ದೇವಯ್ಯ, ಜಗದೀಶ್ ಜೋಡುಬೀಟಿ, ಸಿಂಗಿ ಸತೀಶ್, ಎಂ.ಎಂ.ಚನ್ನನಾಯಕ ಇದ್ದರು.
ಫೋಟೋ 13 ಜಿಕೆಪಿ 01 ; ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಧ ವತಿಯಿಂದ ದುರ್ಗಾಬೋಜಿ ಸಭಾಂಗಣದಲ್ಲಿ ‘ಮಾಧ್ಯಮ ಸಂವಾದ’ ನಡೆಯಿತು.