ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಕಷ್ಟ ಅನುಭವಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಉಮಾಪತಿ ಶ್ರೀನಿವಾಸ್ ಕೂಡ ಈ ಪ್ರಕರಣದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ನಟನೆಯ ‘ರಾಬರ್ಟ್’ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಿದರು. ಈ ಸಿನಿಮಾ ಯಶಸ್ಸು ಕಂಡಿತು. ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ ಹೊರತಾಗಿಯೂ ಇಬ್ಬರ ಮಧ್ಯೆ ಕಲಹ ಏರ್ಪಟ್ಟಿತ್ತು. ಇಬ್ಬರೂ ಓಪನ್ ಆಗಿ ಕಿತ್ತಾಡಿಕೊಂಡರು. ‘ಕಾಟೇರ ಟೈಟಲ್ ಕೊಟ್ಟಿದ್ದು ನಾನು’ ಎಂದು ಹೇಳೋ ಮೂಲಕ ಉಮಾಪತಿ ಸುದ್ದಿ ಆದರು. ಇದರಿಂದ ಸಿಟ್ಟಾದ ದರ್ಶನ್ ಅವರು ವೇದಿಕೆ ಮೇಲೆಯೇ ಉಮಾಪತಿಗೆ ತಗಡು ಎಂಬ ಪದ ಬಳಕೆ ಮಾಡಿದ್ದರು. ಈ ಹೇಳಿಕೆ ಚರ್ಚೆ ಆಗಿತ್ತು.
ದರ್ಶನ್ ಅವರ ಈ ಹೇಳಿಕೆಗೆ ಉಮಾಪತಿ ಅವರು ಅಂದು ಉತ್ತರ ಕೊಟ್ಟಿದ್ದರು. ‘ಇವತ್ತು ನಾನು ತಗಡಿರಬಹುದು. ಮುಂದೊಂದು ದಿನ ನಾನು ಚಿನ್ನದ ತಗಡಾಗುತ್ತೇನೆ. ಸಮಯ ಸಂದರ್ಭ ಉತ್ತರ ಕೊಡುತ್ತದೆ. ಹೀಗೆಯೇ ಜೀವನ ಇರುವುದಿಲ್ಲ, ಮುಂದೊಂದು ದಿನ ಬೀಳುತ್ತದೆ’ ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದರು. ‘ದರ್ಶನ್ ಭವಿಷ್ಯವನ್ನು ಉಮಾಪತಿ ಅವರು ಅಂದೇ ಊಹಿಸಿದ್ದರು ಎಂದು ಫ್ಯಾನ್ಸ್ ಈ ವಿಡಿಯೋನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇವುಗಳನ್ನು ಉಮಾಪತಿ ಅವರು ಸ್ಟೇಟಸ್ಗೆ ಹಾಕಿಕೊಳ್ಳುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಆ ಬಳಿಕ ಉಮಾಪತಿ ಅವರು ಎಲ್ಲಿಯೂ ಮಾಧ್ಯಮಗಳ ಮುಂದೆ ಬಂದು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹಂಚಿಕೊಳ್ಳುತ್ತಿರುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.