ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮನೆಗಳ್ಳತನದ ಪ್ರಕರಣಗಳಿಗಿಂತ ಅತೀ ಹೆಚ್ಚು ಸೈಬರ್ ಕಳ್ಳತನದ ಪ್ರಕರಣಗಳು ದಾಖಾಲಗುತ್ತಿವೆ. ಸಾಮಾಜಿಕ ಜಾಲತಾಣದ ಮೂಲಕ ಲಿಂಕ್ಗಳನ್ನ ಕಳುಹಿಸಿ ನಿಮ್ಮ ಹಣ ಡಬಲ್ ಮಾಡುತ್ತೆವೆ ಅಂತ ಆಮಿಷ ತೋರಿಸಿ, ಖಾತೆಯಲ್ಲಿರುವ ಎಲ್ಲ ಹಣವನ್ನು ದೋಚಿ ಸೈಬರ್ ಖದೀಮರು ಪರಾರಿಯಾಗುತ್ತಿದ್ದಾರೆ. ಕಷ್ಟ ಪಟ್ಟು ಸಂಪಾದಿಸಿದ ಹಣವನ್ನ ಕಳೆದುಕೊಂಡು ಜನ ಕಂಗಾಲಾಗುತ್ತಿದ್ದಾರೆ. ಹಣವೂ ಸಿಗದೆ, ನ್ಯಾಯ ಸಿಗದೆ ಸಂತ್ರಸ್ತರು ಪರದಾಡುವಂತಾಗಿದೆ. ಹೀಗಾಗಿ, ಈ ಸೈಬರ್ ಕ್ರೈಂ ಅನ್ನು ತಡೆಗಟ್ಟಲು ಪೊಲೀಸ್ ಅಧಿಕಾರಿಗಳು ಹೊಸದಾಗಿ “ಪೊಲೀಸ್ ಇ – ಶಾಲೆಯನ್ನು” ತರೆದಿದ್ದಾರೆ. ಈ ಶಾಲೆಯನ್ನು ಐಜಿಪಿ ಬಿಎಸ್ ಲೋಕೇಶ್ ಅವರು ಉದ್ಘಾಟಸಿದರು.
ಪೊಲೀಸ್ ಇ – ಶಾಲೆ ಕಾರ್ಯವಿಧಾನ
ಬಳ್ಳಾರಿ ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಇ – ಶಾಲೆಯನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲ ಶಾಲೆ-ಕಾಲೇಜುಗಳಲ್ಲಿ ವರ್ಚುವಲ್ ಮುಖಾಂತರ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ದಿನ ಅಥವಾ ಸಮಯ ನಿಗದಿ ಮಾಡಿಕೊಂಡು ಸೈಬರ್ ಕ್ರೈಂ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಸೈಬರ್ ಕಳ್ಳರು ಯಾವ ರೀತಿ ಜನರಿಗೆ ಮರಳು ಮಾಡುತ್ತಾರೆ, ಯಾವ ರೀತಿ ಹಣ ದೋಚುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತೆ.
ಸೈಬರ್ ಪ್ರಕರಣಕ್ಕೆ ಒಳಗಾದರೆ ಮುಂದೆ ಏನು ಮಾಡ ಬೇಕು. ಪ್ರಕರಣ ಯಾವ ರೀತಿ ದಾಖಲು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡಲಾಗುತ್ತದೆ. ಪೊಲೀಸ್ ಸಹಾಯವಾಣಿ ಬಗ್ಗೆ ಇತರೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅತೀ ಹೆಚ್ಚು ಸೈಬರ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಆದಷ್ಟು ಶೀಘ್ರದಲ್ಲೆ ಸೈಬರ್ ಕ್ರೈಂ ಹತೋಟಿಗೆ ತರಲು ಬಳ್ಳಾರಿ ಪೊಲೀಸ್ ಇಲಾಖೆ ಟೊಂಕ ಕಟ್ಟಿ ನಿಂತಿದೆ.