ಚಿಕ್ಕಮಗಳೂರು: ವಿದ್ಯುತ್ ಶಾಕ್ನಿಂದ 7 ನೇ ತರಗತಿ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಭಾರ ಪ್ರಾಂಶುಪಾಲ, ನಿಲಯ ಪಾಲಕ ಸೇರಿ 8 ಮಂದಿ ಅಮಾನತುಗೊಳಿಸಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ ಅವರು ಆದೇಶ ಹೊರಡಿಸಿದ್ದಾರೆ.
ನಿನ್ನೆ ಶಾಲಾ ಆವರಣದಲ್ಲಿ ಇದ್ದ ನೇರಳೆ ಮರದಿಂದ ನೇರಳೆಹಣ್ಣು ಕೀಳಲು ಆಕಾಶ್ ಮತ್ತು ಆವರ ಸ್ನೇಹಿತರು ಹೋಗಿದ್ದರು. ಈ ವೇಳೆ ವಿದ್ಯುತ್ ಶಾಕ್ನಿಂದ 13 ವರ್ಷದ ಆಕಾಶ್ ಎಂಬ ಬಾಲಕ ಸಾವನ್ನಪ್ಪಿದ್ದ. ಬಾಲಕ ಮರದಿಂದ ಬೀಳುವಾಗ ವಿದ್ಯುತ್ ತಂತಿ ಹಿಡಿದು ಶಾಕ್ ಹೊಡೆದಿತ್ತು. ಸಿಬ್ಬಂದಿ ಬೇಜವಾಬ್ದಾರಿಯಿಂದ ಸಾವು ಎಂದು ಅಮಾನತು ಮಾಡಲಾಗಿದೆ.
ಘಟನೆ ನಡೆದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಆಕಾಶ್ ಸಾವನ್ನಪ್ಪಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.