ಕೊಡವ, ಅರೆಭಾಷೆ ಅಕಾಡೆಮಿಗಳಿಗೆ ನೇಮಕ ಪೂರ್ಣಕ್ಕೆ ಕ್ಷಣಗಣನೆ । ಒಂದು ವಾರದಲ್ಲಿ ನೇಮಕ ಪ್ರಕ್ರಿಯೆ ಪೂರ್ಣ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಕೊಡವ ಮತ್ತು ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ಸ್ವೀಕರಿಸಿರುವ ಅಧ್ಯಕ್ಷರುಗಳು ತಂಡ ಕಟ್ಟಿ ಮುನ್ನಡೆಯುವ ಕಾತರದಲ್ಲಿದ್ದಾರೆ. ಚುನಾವಣೆ ನೀತಿ ಸಂಹಿತೆ ನಂತರ ಈಗಾಗಲೇ ಅಧಿಕಾರ ಪಡೆದುಕೊಂಡಿದ್ದು, ಸದಸ್ಯರ ನೇಮಕಕ್ಕೆ ಕಾದಿದ್ದಾರೆ. ಒಂದು ವಾರದಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುವ ಎಲ್ಲ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸದಾನಂದ ಗೌಡ ಮಾವಜಿ ಅಧಿಕಾರ ಸ್ವೀಕರಿಸಿ ಚಿಂತನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಸ್ಥಳೀಯ ಶಾಸಕಧ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ಗೌಡ ಮೂಲಕ ನೇಮಕಗೊಳ್ಳುವ ಸದಸ್ಯಬಲಕ್ಕೆ ಕಾದಿದ್ದಾರೆ.
ಜಾತಿಯಲ್ಲ..ಕೊಡವ ಭಾಷೆ ಮುಖ್ಯ: ಕೊಡವ ಭಾಷೆಗೆ ಮೊದಲ ಆದ್ಯತೆ ನೀಡುವ ಚಿಂತನೆ ಹೊಂದಿದ್ದು, ಜಾತಿ ಆಧಾರದಲ್ಲಿ ವಿಂಗಡಣೆ ಮಾಡುವ ಪ್ರಶ್ನೆಯೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡವ ಭಾಷೆ ಎಂಬುವುದು ದೊಡ್ಡ ಆಲದ ಮರವಿದ್ದಂತೆ. ಆದ್ದರಿಂದ ಕೊಡವ ಮೂಲ ಭಾಷೆ ಹೊಂದಿರುವವರನ್ನು ಒಂದೇ ರೀತಿ ನೋಡಬೇಕಿದೆ. ಈ ನಿಟ್ಟಿನಲ್ಲಿ ಜಾತಿಗೊಂದು ಕೊಡವ ಭಾಷೆ ಇಲ್ಲ ಎಂಬ ಜಾಗೃತಿ ಕೂಡ ಮುಖ್ಯ. ಕೊಡವ ಎಂಬ ಮೂಲವೇ ಮುಖ್ಯವಾಗುತ್ತದೆ. ಕೊಡವ ಆಟ್-ಪಾಟ್ ಪಡಿಪು ಕಾರ್ಯಕ್ರಮ ಕೊಡವ ಸಂಸ್ಕೃತಿಯ ಭಾಗವಾಗಿದೆ. ಕಿರಿಯರಿಂದಲೇ ಭಾಷೆ, ಕಲೆ, ಸಂಸ್ಕೃತಿ ಪೋಷಿಸಲು ಸಾಧ್ಯ ಎಂಬ ಅರಿವು ಮುಖ್ಯ. ಇದರಿಂದಾಗಿ ಕೊಡವ ಆಟ್-ಪಾಟ್ ಪಡಿಪು ಕಾರ್ಯಕ್ರಮವನ್ನು ಮುಂದುವರಿಸಲು ಎಲ್ಲರ ಸಹಕಾರ ಬಯಸುವುದಾಗಿ ತಿಳಿಸಿದರು. ಐನ್ಮನೆಗೆ ವಿಶೇಷ ಗೌರವ ನೀಡಲು ಯೋಜನೆ ಅವಶ್ಯವಿದೆ. ಮಕ್ಕಳ ಮನಸ್ಸಿಗೆ ಐನ್ಮನೆ ತುಂಭಾ ಬೇಗವಾಗಿ ಹಿಡಿಸುತ್ತದೆ. ಇವುಗಳ ಅಭಿವೃದ್ದಿಗೂ ಚಿಂತನೆ ನಡೆಸಲಾಗುವುದು.
ತೂಕದ ಸಾಹಿತ್ಯ ಮುಖ್ಯ: ಕೊಡವ ಸಾಹಿತ್ಯ ಅಕಾಡೆಮಿ ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ. ಸಾಹಿತ್ಯಕ್ಕೆ ಶೇ. 50 ರಷ್ಟು ಗುಣಮಟ್ಟ ಕೂಡ ಮುಖ್ಯ. ತೂಕದ ಸಾಹಿತ್ಯದಿಂದ ದಾಖಲೆಗಳ ಮೂಲಕ ಓದುಗರಿಗೆ ತಲುಪಿಸುವ ಗುರಿ ಇದೆ. ಅಕಾಡೆಮಿ ಕಚೇರಿಯಲ್ಲಿ ಉಳಿದಿರುವ ಸಾಹಿತ್ಯ ಪುಸ್ತಕಗಳು ಎಲ್ಲವನ್ನೂ ಸಾರುತ್ತಿದೆ. ಇದರಿಂದಾಗಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುವುದು. ಪುಸ್ತಕಗಳು ಕಚೇರಿಯಲ್ಲಿ ಬಿದ್ದಿರುವುದನ್ನು ನೋಡುವಾಗ ಬೇಸರವಾಗುತ್ತದೆ. ಅಕಾಡೆಮಿ ಮಾಸಿಕ, ತ್ರೆöÊಮಾಸಿಕ ಸಂಚಿಕೆಗಳು ಎಷ್ಟು ಮುಖ್ಯ ಎಂಬುವುದು ಅರ್ಥೈಸಿಕೊಂಡು ಮುನ್ನಡೆಯಬೇಕಿದೆ. ಓದುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಬೇಕಿದೆ.
ಜಾನಪದ ಉಳಿಯಬೇಕು: ಕೊಡವ ವಾಲಗ ಸಂಸ್ಕೃತಿ ಜಾನಪದದ ಭಾಗವಾಗಿದೆ. ಇಂತಹ ಜಾನಪದ ಕಲೆಯನ್ನು ಪೋಷಿಸುವವರ ಪೋಷಣೆ ಕೂಡ ಮುಖ್ಯ. ವಾಲಗ ಇದ್ದರೆ ಮಾತ್ರ ನಮ್ಮ ಕಲೆ, ಸಂಸ್ಕೃತಿಗೆ ರಕ್ಷಣೆ ಸಾಧ್ಯ ಎಂಬ ಅರಿವು ಇದೆ. ಈ ನಿಟ್ಟಿನಲ್ಲಿ ಕೊಡವ ವಾಲಗ ಕಲೆಗೆ ಬೆಂಬಲ ಮುಖ್ಯ. ಬಾಳೋಪಾಟ್ ಕಲಿತಿರುವುವರಿಗೆ ಹಿಂದಿನ ಕಾಲದಲ್ಲಿ ಗೌರವ ಸಿಗುತ್ತಿರಲಿಲ್ಲ. ಈಗ ಕಾಲ ಬದಲಾದಂತೆ ಬಾಳೋಪಾಟ್ ಗೌರವ ಹೆಚ್ಚಿಸಿಕೊಳ್ಳುತ್ತಿದೆ ಎಂದರು.
ಆಯ್ಕೆಗೆ ಕ್ಷಣಗಣನೆ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಮಾರ್ಚ್ 23 ರಂದು ಸರ್ಕಾರ ಅಧಿಸೂಚನೆ ಹೊರಡಿಸಿ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ಲೋಕಸಭಾ ಚುನಾವಣೆಗೂ ಮುನ್ನ ಚುನಾವಣೆ ನೀತಿ ಸಂಹಿತ ಘೋಷಣೆಗೂ ಮುನ್ನ ನೇಮಕಗೊಂಡಿದ್ದರು. ಅಧ್ಯಕ್ಷ ಸೇರಿದಂತೆ 12 ಸದಸ್ಯ ಬಲ ಅಕಾಡೆಮಿ ಹೊಂದಿದ್ದು, ಇನ್ನಷ್ಟೆ ನೇಮಕವಾಗಬೇಕಿದೆ. ಉಳಿದಂತೆ ಸಮಿತಿಯಿಂದ ಮೂವರು ಸದಸ್ಯರನ್ನು ನಾಮ ನಿದೇರ್ಶನದ ಮೂಲಕ ಆಯ್ಕೆ ಮಾಡಲಿದೆ.
————————–
ಅರೆಭಾಷೆ ತೃತೀಯ ಭಾಷೆಯಾಗಬೇಕು:
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಸುಳ್ಯ ಮೂಲದ ಸದಾನಂದ ಗೌಡ ಮಾವಜಿ ಅಧಿಕಾರ ಸ್ವೀಕರಿಸಿದ್ದು, ಅಧ್ಯಕ್ಷ ಸ್ಥಾನ ಸೇರಿದಂತೆ ಒಟ್ಟು 11 ಜನರ ತಂಡದಲ್ಲಿ 6 ಸದಸ್ಯರ ನೇಮಕವಾಗಿದೆ. ದಕ್ಷಿಣ ಕನ್ನಡಕ್ಕೆ ಮೊದಲ ನೇಮಕ ಪಟ್ಟಿಯಲ್ಲಿ ಆದ್ಯತೆ ನೀಡಿದ್ದು, ಉಳಿದ 4 ಸದಸ್ಯ ಸ್ಥಾನಕ್ಕೆ ಕೊಡಗು ಜಿಲ್ಲೆಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಆಯ್ಕೆ ನಂತರ ಮೂವರು ಸದಸ್ಯರನ್ನು ನಾಮ ನಿರ್ದೇಶನದ ಮೂಲಕ ನೇಮಕ ಮಾಡಿಕೊಳ್ಳಲಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಗೌಡ ಮಾವಜಿ ಅರೆಭಾಷೆ ಸಂಸ್ಖೃತಿ, ಭಾಷೆ ಪೋಷಣೆಗೆ ಒತ್ತು ನೀಡುವ ಕುತೂಹಲ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಅರೆಭಾಷೆ ಜನಾಂಗದ ಸದಸ್ಯರಿದ್ದು, ನಂತರದ ಸ್ಥಾನದಲ್ಲಿ ಕೊಡಗು ಜಿಲ್ಲೆ ಹೊಂದಿದೆ. ಅರೆಭಾಷಿಗರು ಮಾತ್ರವಲ್ಲದೆ ಬೇರೆ ಜಾತಿಯವರು ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಷೆ ಅವಲಂಬಿಸಿದ್ದಾರೆ. ಇದರಿಂದಾಗಿ ಭಾಷೆ ರಕ್ಷಣೆಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಮೂರನೇ ಭಾಷೆಯಾಗಿ ಅರೆಭಾಷೆಯನ್ನು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಹಿಂದಿನ ಸಾಕಷ್ಟು ಅಧ್ಯಕ್ಷರು ಒಂದಲ್ಲ ಒಂದು ಕಾರಣದಿಂದ ಪೂರ್ಣಾವಧಿ ಪೂರೈಸಲು ಸಾಧ್ಯವಾಗಿಲ್ಲ. ಅವರಲ್ಲಿನ ಚಿಂತನೆ, ಯೋಜನೆಗಳ ಬಗೆಯೂ ಗಮನ ಹರಿಸಲು ಮುಂದಾಗಿದ್ದಾರೆ. ಸದಸ್ಯರಲ್ಲಿ ಸಾಹಿತ್ಯ, ಸಂಸ್ಕೃತಿ, ಅಧ್ಯಯನ ಮಾಡಿದವರು ಇದ್ದಾರೆ. ಅವರೆಲ್ಲರನ್ನೂ ಸೇರಿಸಿಕೊಂಡು ಮುಂದುವರಿಯಲಾಗುವುದು. ಗಡಿ ಪ್ರದೇಶ, ರಾಷ್ಟçಮಟ್ಟದಲ್ಲೂ ಸಾಕಷ್ಟು ಕಾರ್ಯಕ್ರಮ ಆಯೋಜಿಸುವ ಚಿಂತನೆ ವ್ಯಕ್ತಪಡಿಸಿದ್ದಾರೆ.
ಕೊಡವ ಭಾಷೆ ಮುಖ್ಯವಾಗುತ್ತದೆ. ಜಾತಿ ಆಧಾರದಲ್ಲಿ ಭಾಷೆಯನ್ನು ಪೋಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆ ಜತೆಗೆ ಸದಸ್ಯರ ಆಯ್ಕೆ ನಂತರ ಒಮ್ಮತದ ತೀರ್ಮಾನದ ನಂತರ ಉತ್ತಮ ಕಾರ್ಯಕ್ರಮ ಆಯೋಜಿಸಲಾಗುವುದು.
– ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಅಧ್ಯಕ್ಷ, ಕೊಡವ ಸಾಹಿತ್ಯ ಅಕಾಡೆಮಿ.
ಅರೆಭಾಷೆ ತೃತೀಯ ಭಾಷೆಯಾಗಬೇಕು ಎಂಬ ಕೂಗು ಸರ್ಕಾರಕ್ಕೆ ಮುಟ್ಟಿಸಲಾಗುವುದು. ಇದರ ಅನುಷ್ಠಾನದಿಂದ ಭಾಷೆ ಪೋಷಣೆಗೂ ನೆರವಾಗಲಿದೆ. ಗಡಿ ಭಾಗದಲ್ಲೂ ಕಾರ್ಯಕ್ರಮದ ಮೂಲಕ ಗಮನ ಸೆಳೆಯಲಾಗುವುದು.
– ಸದಾನಂದ ಗೌಡ ಮಾವಜಿ, ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ.
ಫೋಟೋ 16 ಎಂಡಿಕೆ 03 ; ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಲಾಂಛನ
04 ; ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಲಾಂಛನ
05 ; ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ,
06 ; ಸದಾನಂದ ಗೌಡ ಮಾವಜಿ