ಬೆಂಗಳೂರು: ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಸೋಮವಾರ ಜೂನ್ 17 ರಂದು ನಗರದ ವಿವಿಧ ಪ್ರದೇಶಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ 6 ಗಂಟೆಯಿಂದಲೇ ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿಯಿರುವ ಮಸೀದಿ ಮತ್ತು ಚಾಮರಾಜಪೇಟೆಯ ಬಿಬಿಎಂಪಿ ಆಟದ ಮೈದಾನದಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ಹಾಗೆ, ಬನ್ನೇರುಘಟ್ಟ ಮುಖ್ಯ ರಸ್ತೆ ಗುರಪ್ಪನ ಪಾಳ್ಯ ಜಂಕ್ಷನಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು.
ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಬಳಿಯಿರುವ ಮಸೀದಿಯಲ್ಲಿ ಪ್ರಾರ್ಥನೆಗೆ ನೂರಾರು ಮುಸ್ಲಿಮರು ಆಗಮಿಸಿದ್ದಾರೆ. ಇದರಿಂದ ಮೈಸೂರು ರಸ್ತೆಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಾಯಂಡಹಳ್ಳಿಯಿಂದ ಟೌನ್ಹಾಲ್ ವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದ ಮೈಸೂರು, ಕೆಂಗೇರಿ, ನಾಯಂಡಹಳ್ಳಿ ಕಡೆಯಿಂದ ವಿಧಾನಸೌಧ, ಕಬ್ಬನ್ ಪಾರ್ಕ್, ಕಡೆ ಬರುವ ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.
ಈ ಸಂಬಂಧ ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೆ ಮಾರ್ಗಬದಲಾವಣೆಯನ್ನು ಸೂಚಿಸಿದ್ದಾರೆ. ಟೌನ್ಹಾಲ್ ಕಡೆಯಿಂದ ಮೈಸೂರು ಅಥವಾ ಮೈಸೂರು ಕಡೆಯಿಂದ ಟೌನ್ಹಾಲ್ ಕಡೆಗೆ ಹೋಗುವ ವಾಹನಗಳು ಬಿಜಿಎಸ್ ಪ್ಲೈಓವರ್ ಕೆಳ ಸರ್ವಿಸ್ ರಸ್ತೆಯನ್ನು ಬಳಸಿಕೊಂಡು ವೆಟರ್ನರಿ ಜಂಕ್ಷನಲ್ಲಿ ಬಲತಿರುವು ಪಡೆದು ಗೂಡ್ಸ್ ಶೆಡ್ ರಸ್ತೆ ಮೂಲಕ ಅಥವಾ ಸಿರಸಿ ಜಂಕ್ಷನಲ್ಲಿ ಬಲ ತಿರುವು ಪಡೆದುಕೊಂಡು ಜೆಜೆ ನಗರ-ಟ್ಯಾಂಕ್ಬಂಡ್-ಬನ್ನಿಮಿಲ್ ಜಂಕ್ಷನ್-ಹುಣಸೇಮರ ಮೂಲಕ ಸಾಗುವಂತೆ ಸೂಚಿಸಲಾಗಿದೆ.