- ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯ
ಪ್ರತಿನಿಧಿ ವರದಿ ಅರಸೀಕೆರೆ
ರಾಜ್ಯ ಹಾಗೂ ದೇಶದ ಬಲವರ್ಧನೆಗೆ ಶಿಕ್ಷಣ ಕ್ಷೇತ್ರ ತಳಪಾಯವಿದ್ದಂತೆ ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕಿನ ಬಾಗೇಶಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಕೋರಿಕೆಯಂತೆ 20 ಲಕ್ಷ ವೆಚ್ಚದಲ್ಲಿ 2 ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅದರಲ್ಲೂ ವಿಶೇಷವಾಗಿ ನಾನು ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಮಹತ್ವ ನೀಡಿದ್ದೇನೆ. ಹೋಬಳಿವಾರು ಯಶಸ್ವಿಯಾಗಿ ನಡೆಯುತ್ತಿರುವ ವಸತಿ ಶಾಲೆಗಳು, ಮುಕ್ತಾಯದಲ್ಲಿರುವ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಕಾಮಗಾರಿಯ ಕಟ್ಟಡ ಹಾಗೂ ಕ್ಷೇತ್ರದ್ಯಂತ ಇರುವ ಸರ್ಕಾರಿ ಪ್ರಾಥಮಿಕ ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟಿರುವುದು ಹಾಗೂ ಕಲ್ಪಿಸಿ ಕೊಡುತ್ತಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ತೊಂದರೆ ಆಗಿಲ್ಲ. ಚುನಾವಣೆ ನೀತಿ ಸಂಹಿತಿ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಕ್ಷೇತ್ರದಲ್ಲಿ ಹೊಸ ಕಾಮಗಾರಿಗಳಿಗೆ ಚಾಲನೆ ದೊರೆತಿರಲಿಲ್ಲ. ಇನ್ನು ಎಂದಿನಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ ಎಂದು ಪ್ರತಿಪಕ್ಷಗಳ ನಾಯಕರ ಟೀಕೆಗೆ ಉತ್ತರ ನೀಡಿದರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಶಿವಣ್ಣ ಮಾತನಾಡಿ, ರೈತರು ವಿದ್ಯಾರ್ಥಿಗಳು ಸೇರಿದಂತೆ ಕ್ಷೇತ್ರದ ಜನತೆಯ ಅಪೇಕ್ಷೆಗೆ ಅನುಗುಣವಾಗಿ ಅವರ ನೋವು ನಲಿವಿಗೆ ಸ್ಪಂದಿಸುತ್ತಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಶಿವಲಿಂಗೇಗೌಡರು ಶ್ರಮಿಸುತ್ತಿರುವುದರಿಂದಲೇ ಸತತ ನಾಲ್ಕು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕಪಡಿಸಿದರು.
ಮಾಜಿ ತಾಪಂ ಉಪಾಧ್ಯಕ್ಷೆ ಶೋಭಾ ಶಿವಣ್ಣ, ಮಾಜಿ ತಾಪಂ ಅಧ್ಯಕ್ಷ ಹನುಮೇಗೌಡ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವೇಗೌಡ, ಮುಖಂಡರಾದ ಈರೇಗೌಡ, ಸ್ವಾಮಿ, ಚಿಟ್ನಹಳ್ಳಿ ರಮೇಶ, ಇಂಜಿನಿಯರ್ ದೀಕ್ಷಿತ್, ಮುಖ್ಯಶಿಕ್ಷಕಿ ಶಬನಂ, ಗ್ರಾಮಸ್ಥರು ಹಾಜರಿದ್ದರು.