- ಸಂಸದ ಶ್ರೇಯಸ್ ಪಟೇಲ್ ಹೇಳಿಕೆ
ಪ್ರತಿನಿಧಿ ವರದಿ ಹಾಸನ
ಜಿಲ್ಲೆಯ ಅಭಿವೃದ್ಧಿ, ಜ್ವಲಂತ ಸಮಸ್ಯೆಗಳ ನಿವಾರಣೆಗೆ ಆದ್ಯತೆ ಕೊಡುವುದರ ಜತೆಗೆ, ಜನಸ್ನೇಹಿ ಸಂಸದನಾಗಿ ಕೆಲಸ ಮಾಡುವ ಇರಾದೆ ಹೊಂದಿದ್ದು, ಆ ನಿಟ್ಟಿನಲ್ಲಿ ಹೆಜ್ಜೆ ಇಡುವೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎರಡೂವರೆ ದಶಕಗಳ ನಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದಿರುವುದು ಖುಷಿ ತಂದಿದ್ದರೆ ದೊಡ್ಡ ದೊಡ್ಡ ಸವಾಲು, ಜನರ ನಿರೀಕ್ಷೆ, ಜವಾಬ್ದಾರಿ ನನ್ನ ಮೇಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುವೆ. ಇದಕ್ಕಾಗಿ ಜಿಲ್ಲಾಡಳಿತದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಸಮಗ್ರ ವರದಿ ಕೇಳಿದ್ದೇನೆ ಎಂದರು.
ರಾಷ್ಟ್ರೀಯ ಹೆದ್ದಾರಿ, ಹಾಸನದ ಫೈ ಓವರ್ ಬಾಕಿಇರುವ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುವೆ. ರಾಜ್ಯ ಸರ್ಕಾರದ ಕಡೆಯಿಂದ ಅನುದಾನ ಬಾಕಿಯಿದ್ದರೆ ಬಿಡುಗಡೆ ಮಾಡಿಸಲು ನಾನೇ ಮುಂದೆ ನಿಂತು ಕ್ರಮ ವಹಿಸುವೆ. ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಹಸನಾಗಬೇಕು ಎಂಬ ಆಶಯ ಹೊಂದಿದ್ದೇನೆ. ಹಾಗೆಯೇ ಮಹಿಳಾ ಸ್ವಸಹಾಯ ಸಂಘಗಳಿಗೆ ಶಕ್ತಿ ಸಿಗಬೇಕು, ಜನರ ಕೆಲಸ ಆಗಬೇಕು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಒಗ್ಗೂಡಿ ಭ್ರಷ್ಟಾಚಾರ ಮುಕ್ತ ಜಿಲ್ಲೆ ಮಾಡಲು ಶ್ರಮಿಸುವೆ. ವಿಮಾನ ನಿಲ್ದಾಣ ಕಾಮಗಾರಿಯನ್ನು ಶೀಘ್ರ ಮುಗಿಸಲು ಮುಂದಿನವಾರ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯುವೆ ಎಂದ ಶ್ರೇಯಸ್, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಯತ್ನಿಸುವೆ ಎಂದು ಹೇಳಿದರು.
ವಾರದಲ್ಲಿ ಎರಡು ದಿನ ಜಿಲ್ಲಾ ಕೇಂದ್ರದಲ್ಲಿ ಇದ್ದು ಕೆಲಸ ಮಾಡುವೆ. ಗ್ರಾ.ಪಂ.ಗಳಿಗೂ ಭೇಟಿ ನೀಡುವೆ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಆದರೂ ಅವರು ಸ್ಪಂದಿಸುವ ಭರವಸೆ ಇದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಜನರ ಭರವಸೆ ಈಡೇರಿಸಲು ಒತ್ತು ಕೊಡುವೆ ಎಂದು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನ್, ಕಾರ್ಯಕಾರಿ ವಿಶೇಷ ಆಹ್ವಾನಿತ ರವಿ ನಾಕಲಗೂಡು, ಉಪಾಧ್ಯಕ್ಷ ಕೆ.ಎಂ.ಹರೀಶ್, ಕಾರ್ಯದರ್ಶಿ ಸಿ.ಬಿ.ಸಂತೋಷ್ ಇದ್ದರು.
ಕಾಡಾನೆ ಸಮಸ್ಯೆ ನಿವಾರಣೆಗೆ ಆನೆ ಕಾರಿಡಾರ್ ನಿರ್ಮಾಣ ಆಗಬೇಕು. ಅದನ್ನೂ ಸಾಕಾರ ಮಾಡುವ ನಿಟ್ಟಿನಲ್ಲಿ ವರದಿ ಕೇಳಿದ್ದೇನೆ. ಈ ಬಗ್ಗೆ ರಾಜ್ಯ ಸಚಿವರು, ಕೇಂದ್ರ ಸಚಿವರ ಗಮನಕ್ಕೆ ತಂದು ಆನೆ ಕಾರಿಡಾರ್ ನಿರ್ಮಾಣಕ್ಕೆ ಆದ್ಯತೆ ನೀಡುವೆ.
-ಶ್ರೇಯಸ್ ಪಟೇಲ್, ಸಂಸದ