- ಜಿಲ್ಲಾ ಮಕ್ಕಳ ರಕ್ಷಣ ಘಟಕದ ಆಪ್ತ ಸಮಾಲೋಚಕಿ ಮುಖ್ಯಸ್ಥೆ ಕವಿತಾ ಅಭಿಪ್ರಾಯ
ಪ್ರತಿನಿಧಿ ವರದಿ ಆಲೂರು
ಬಾಲ್ಯ ವಿವಾಹವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣ ಘಟಕದ ಆಪ್ತ ಸಮಾಲೋಚಕಿ ಮುಖ್ಯಸ್ಥೆ ಕವಿತಾ ತಿಳಿಸಿದರು.
ಮಗ್ಗೆ ಗ್ರಾಮದ ಸಂತ ಫ್ರಾನ್ಸಿಸ್ ಕ್ಷೇವಿಯರ್ ಶಾಲೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತರ ಸಹಕಾರದೊಂದಿಗೆ ನಡೆದ ಬಾಲ್ಯ ವಿವಾಹ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ ಮಾಡುವುದು ತಪ್ಪೆಂದು ತಿಳಿದಿದ್ದರೂ ಬಡ ವರ್ಗದವರು ಹಾಗೂ ಕೂಲಿ ಕಾರ್ಮಿಕರು ತಿಳಿದೋ, ತಿಳಿಯದೋ ಬಾಲ್ಯ ವಿವಾಹ ಮಾಡುತ್ತಿದ್ದಾರೆ. ಬಾಲ್ಯ ವಿವಾಹಕ್ಕೊಳಗಾದ ಗಂಡು, ಹೆಣ್ಣು, ಪೋಷಕರು ಮತ್ತು ಪ್ರೋತ್ಸಾಹ ನೀಡಿದ ಎಲ್ಲರಿಗೂ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈಗಾಗಲೇ ಹಲವರು ಶಿಕ್ಷೆಗೊಳಗಾಗಿದ್ದಾರೆ. ಬಾಲ್ಯ ವಿವಾಹ ಮಾಡುವುದು ಗೊತ್ತಾದ ತಕ್ಷಣ ಯಾವುದೇ ಸರ್ಕಾರಿ ಇಲಾಖೆ, ಆಶಾ, ಅಂಗನವಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ, ಸಹಾಯವಾಣಿ-1098 ಗೆ ತಿಳಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಜರೀನಾ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ನಾವು ಎಂಬ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಸಂರಕ್ಷಣೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತಿದೆ. ಹೆಣ್ಣಿಗೆ 18 ಮತ್ತು ಗಂಡಿಗೆ 21 ವಯಸ್ಸು ತುಂಬಿದ ನಂತರ ವಿವಾಹ ಮಾಡಲು ಅವಕಾಶವಿದೆ. ವಯಸ್ಸು ತುಂಬುವ ಮೊದಲೆ ವಿವಾಹ ಮಾಡಿದರೆ ಇಬ್ಬರೂ ಅನರೋಗ್ಯಕ್ಕೆ ತುತ್ತಾಗಿ, ಅವರಿಗೆ ಜನಿಸುವ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಬಾಲ್ಯ ವಿವಾಹವನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಮುಖ್ಯ ಶಿಕ್ಷಕಿ ಗ್ರೇಸಿ ಸಿಸ್ಟರ್, ರಾಯರಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಕಾರ್ಯಕರ್ತೆ ರೋಜಿ, ಆಶಾ ಕಾರ್ಯಕರ್ತೆಯರಾದ ಗೀತಾ, ರಮ್ಯ, ಕವಿತಾ ಹಾಜರಿದ್ದರು.