- ಡಾ.ನಿಸಾರ್ ಫಾತಿಮ ಮಾಹಿತಿ
ಪ್ರತಿನಿಧಿ ವರದಿ ಆಲೂರು
ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ. ರಕ್ತದಾನ ಮಾಡುವುದರಿಂದ ಹೃದಯಾಘಾತ, ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮ ತಿಳಿಸಿದರು.
ಪಟ್ಟಣದ ತಾಲೂಕು ಆರೋಗ್ಯಧಿಕಾರಿಗಳ ಕಚೇರಿ, ಆಟೋ ಚಾಲಕರ ಸಂಘ, ಸಾರ್ವಜನಿಕ ಆಸ್ಪತ್ರೆ, ಆರೋಗ್ಯ ಇಲಾಖೆ, ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಸಂಶೋಧನೆ ತಿಳಿಸಿದೆ. ನಿಯಮಿತ ರಕ್ತದಾನವು ಹೃದಯ ರಕ್ತನಾಳದ ಆರೋಗ್ಯ ಅಪಾಯವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ. ರಕ್ತದ ಹರಿವು ಉತ್ತಮವಾದಾಗ, ಅದು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ತಡೆಯುತ್ತದೆ ಎಂದರು.
18 ರಂದ 60 ವಯೋಮಿತಿಯೊಳಗಿನ ಪ್ರತಿ ಮೂರು ತಿಂಗಳಿಗೊಮ್ಮೆ ಪುರುಷರು ಮತ್ತು ನಾಲ್ಕು ತಿಂಗಳಿಗೊಮ್ಮೆ ಮಹಿಳೆಯರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವ ಸಂದರ್ಭದಲ್ಲಿ ಉಚಿತವಾಗಿ ರಕ್ತದಾನ ಕೇಂದ್ರದಲ್ಲಿ ವೈದ್ಯರು ಹೃದಯಬಡಿತ, ರಕ್ತದೊತ್ತಡ, ಕೊಲೆಸ್ಟ್ರಾಲ್, ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷೆ ಮಾಡುತ್ತಾರೆ. ಕೇವಲ ಒಂದು ದಾನವು ನಾಲ್ವರ ಜೀವವನ್ನು ಉಳಿಸುತ್ತದೆ. ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ. ರಕ್ತದ ಕ್ಯಾನ್ಸರ್ ಅವಕಾಶ ಕಡಿಮೆಯಾಗುತ್ತದೆ. ರಕ್ತದಾನ ಮಾಡುವುದರಿಂದ ಯಾವುದೆ ನಷ್ಟವಾಗುವುದಿಲ್ಲ. ಒಬ್ಬ ವ್ಯಕ್ತಿ 450 ಮಿ.ಲೀ. ನಷ್ಟು ರಕ್ತವನ್ನು ದಾನ ಮಾಡುಬಹುದಾಗಿದೆ ಎಂದು ಮಾಹಿತಿ ನೀಡಿದ್ದರು.
ಶಿಬಿರದಲ್ಲಿ 25 ವ್ಯಕ್ತಿಗಳು ರಕ್ತದಾನ ಮಾಡಿದರು. ಹಾಸನ ರಕ್ತನಿದಿ ಕೇಂದ್ರ ವೈದ್ಯೆ ಡಾ.ನಾಗಲಕ್ಷ್ಮಿ, ಹಿರಿಯ ಪ್ರಯೋಗ ಶಾಖಾ ತಂತ್ರಜ್ಞ ಅಶ್ವತ್, ಕೆ.ಎನ್.ಸುಪ್ರಿಯ, ತಾಲೂಕು ಆರೋಗ್ಯ ಇಲಾಖೆ ಕಚೇರಿ ಸಿಬ್ಬಂದಿಗಳಾದ ಮೋಹನ್, ಶ್ವೇತಾ, ಪಲ್ಲವಿ ಭಾಗವಹಿಸಿದ್ದರು.