- ಸೈಕಲ್, ಎತ್ತಿನಗಾಡಿ, ಕಾಲ್ನಡಿಗೆಯಲ್ಲಿ ಮೆರವಣಿಗೆ । ಎನ್ ಆರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ಸಂಚಾರ ತಡೆ
- ನಗರದ ಹೇಮಾವತಿ ಪ್ರತಿಮೆ ಬಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ
ಪ್ರತಿನಿಧಿ ವರದಿ ಹಾಸನ
ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಏರಿಕೆ ಮಾಡಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿ ಸೇರಿದ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸೈಕಲ್, ಎತ್ತಿನಗಾಡಿ, ಕಾಲ್ನಡಿಗೆಯಲ್ಲಿ ಮೆರವಣಿಗೆ ಹೊರಟ ಪ್ರತಿಭಟನಕಾರರು ಎನ್ ಆರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿಸಿ ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿ ಎಡಿಸಿ ಕೆ.ಟಿ.ಶಾಂತಲಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಆರ್ಥಿಕ ಹೊರೆಯಾಗಿದೆ. ಗುರುವಾರ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಎಸ್ಟಿ ನಿಗಮದಲ್ಲಿ 189ಕೋಟಿ ರೂ. ಭ್ರಷ್ಟಚಾರ ನಡೆದಿದ್ದು, ಈಗಾಗಲೇ ಸಚಿವರ ತಲೆದಂಡ ಆಗಿದ್ದು, ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟದ ಸಚಿವರು ಕೂಡ ಸಹ ಭಾಗಿಯಾಗಿದ್ದಾರೆ ಎಂದು ದೂರಿದರು.
ಗ್ಯಾರಂಟಿ ವಿಚಾರದಲ್ಲಿ ಗೃಹಲಕ್ಷ್ಮೀ ಯೋಜನೆಯ ಮೂರು ತಿಂಗಳ ಹಣವನ್ನು ನೀಡದೆ ವಿಳಂಬ ಮಾಡಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಭಾಗ್ಯ ಕೇವಲ ಕಣ್ಣೋರಿಸುವ ಭಾಗ್ಯಗಳಾಗಿವೆ ಎಂದು ಇಡೀ ರಾಷ್ಟ್ರದ ಜನತೆ ಇಂಡಿ ಒಕ್ಕೂಟವನ್ನು ತಿರಸ್ಕರಿಸಿ ಎನ್.ಡಿ.ಎ. ಒಕ್ಕೂಟಕ್ಕೆ ಬಹುಮತದ ಸರ್ಕಾರ ರಚಿಸಲು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಹಲವಾರು ಭಾಗ್ಯಗಳ ಆಸೆ ಆಮಿಷಗಳನ್ನು ತೋರಿಸಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರವು ಇಡೀ ರಾಜ್ಯದ ಜನತೆಗೆ ಅದರಲ್ಲೂ ಬಡವರ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಕೊಟ್ಟರೂ ಕೂಡ ಬಡವರ ಮೇಲೆ ತೆರಿಗೆಯನ್ನು ಹೆಚ್ಚಿಸುವ ಕೆಲಸ ಮಾಡಿದೆ ಎಂದು ದೂರಿದರು.
ದಿನನಿತ್ಯ ವಸ್ತುಗಳ ಬೆಲೆ ಏರಿಕೆಯೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದ್ದು ಇದರಿಂದ ಬರುವ ತೆರಿಗೆ ಹಣವನ್ನು ನಮ್ಮ ಭಾಗ್ಯಗಳಿಗೆ ಉಪಯೋಗ ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ವೇಳೆ ಬೆಲೆ ಏರಿಕೆ ಮಾಡುವುದಾಗಿ ಯಾವ ಆಶ್ವಾಸನೆ ಕೊಟ್ಟಿರುವುದಿಲ್ಲ. ಇಡೀ ಕರ್ನಾಟಕದ ಜನತೆಗೆ ಚಿಪ್ಪನ್ನು ಕೊಡುವ ಕೆಲಸ ಯಾವುದಾದರೂ ಸರ್ಕಾರ ಮಾಡಿದೆ ಎಂದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಆರೋಪ ಮಾಡಿದರು.
ದಲಿತಪರ ಎಂದು ಹೇಳುವ ಸರಕಾರವು 25 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿದ್ದು, ಪರಿಶಿಷ್ಟ ಜಾತಿಯವರ 187 ಕೋಟಿ ಹಣವನ್ನು ಕೂಡ ದುರ್ಭಳಕೆ ಮಾಡಿ ಬೇರೆ ಬೇರೆಯವರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವ ಮೂಲಕ ಹಗಲು ದರೋಡೆ ಮಾಡಿದೆ ಎಂದು ದೂರಿದರು. ಬಡವರ ಬಗ್ಗೆ ಕಾಳಜಿ, ಪ್ರೀತಿ ಇದ್ದರೇ ಉತ್ತಮವಾದ ಭಾಗ್ಯಗಳನ್ನು ಕೊಡಬೇಕು. ಸರಕಾರ ಆಡಳಿತ ನೀಡುವುದಾದರೆ ಇಂದು ರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡುವಂತೆ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ತೈಲ ಬೆಲೆ ಕಡಿಮೆ ಮಾಡದೇ ಹೋದರೆ ಇಡೀ ರಾಜ್ಯಾದ್ಯಂತ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಪ್ರತಿಭಟನೆ ವೇಳೆ ಸಿದ್ದೇಶ್ ನಾಗೇಂದ್ರ ಮತ್ತು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಸೇರಿದಂತೆ ಇತರರು ಸೈಕಲ್ನಲ್ಲಿ ಸವಾರಿ ಮಾಡಿ ತೈಲ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಅಮಿತ್ ಶೆಟ್ಟಿ, ಗಿರೀಶ್, ವೇಣುಕುಮಾರ್, ಶೋಭನ್ ಬಾಬು, ಹೆಚ್.ಎನ್. ನಾಗೇಶ್, ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್, ರೇಣುಕುಮಾರ್, ಪುನೀತ್, ಯೋಗೀಶ್, ಹರ್ಷಿತ್, ಅಡಗೂರು ಬಸವರಾಜು, ಬಿ.ಎಚ್.ನಾರಾಯಣಗೌಡ, ಆನಂದ್, ಅಶ್ವಥ್, ಉಮಾರವಿಪ್ರಕಾಶ್, ನೇತ್ರಾ ಮಂಜುನಾಥ್, ಕುಸಮಾ, ಶೋಭಾ ಗಣೇಶ್, ಸಶೀಲಾ ಅಣ್ಣಪ್ಪ, ಎಸ್.ಡಿ.ಚಂದ್ರು, ಗಗನ್ ಗಾಂಧಿ, ಶಿವಕುಮಾರ್, ರಾಜಕುಮಾರ್ ಇತರರು ಭಾಗವಹಿಸಿದ್ದರು.