ಶಾಸಕ ಎಚ್.ಕೆ.ಸುರೇಶ್ ಟೀಕೆ ಇಂಧನ ತೈಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಪ್ರತಿಭಟನೆ
ಪ್ರತಿನಿಧಿ ವರದಿ ಬೇಲೂರು
ಪುಕ್ಕಟ್ಟೆ ಭಾಗ್ಯಗಳನ್ನು ಜನರಿಗೆ ತಲುಪಿಸಲು ಆರ್ಥಿಕ ಸಮಸ್ಯೆ ಇರುವುದರಿಂದ ದಿಢೀರ್ ಇಂಧನ ತೈಲ ಬೆಲೆ ಏರಿಸಿ ರಾಜ್ಯದ ಸರ್ಕಾರ ಜನತೆಗೆ ಬರೆ ಎಳೆದಿದ್ದಾರೆ. ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ಆಶ್ವಾಸನೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗದೆ ತೈಲ ಬೆಲೆ ಏರಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ವೆಂದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಶಾಸಕ ಎಚ್.ಕೆ.ಸುರೇಶ್ ಟೀಕಿಸಿದ್ದರು.
ನಗರದ ನೆಹರು ವೃತ್ತದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ರಸ್ತೆ ಸಂಚಾರ ತಡೆ ಮಾಡಿ ಪ್ರತಿಭಟನೆ ನಡೆಸಿ ಇದ್ದರ ನೇತೃತ್ವ ವಹಿಸಿ ಮಾತನಾಡಿದರು.
ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಅದ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಎರಡಂಕೆ ದಾಟಲು ಸಾಧ್ಯವಾಗಿಲ್ಲ. ಅವರದೇ ಸರ್ಕಾರ ಇದ್ದು 135 ಶಾಸಕರನ್ನು ಹೊಂದಿದ್ದರು ವಿಫಲರಾಗಿದ್ದಾರೆ. ರಾಜ್ಯದ ಜನತೆ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಜನರ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡಬೇಕಾದ ಪ್ರತಿನಿದಿಗಳು ಜನರಿಗೆ ಸಮಸ್ಯೆ ತಂಡೊಡುವ ಕೆಲಸ ಮಾಡುತ್ತಿದ್ದಾರೆ. ಏರಿಸಿರುವ ತೈಲ ಬೆಲೆಯನ್ನು ತಕ್ಷಣ ಇಳಿಸಬೇಕು, ಇಲ್ಲದಿದ್ದಲ್ಲಿ ನಮ್ಮ ಹೋರಾಟವನ್ನು ಬೇರೆ ಸ್ವರೂಪಕ್ಕೆ ಕೊಂಡೋಯ್ಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ರೇಣುಕುಮಾರ್ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹಗಲು ಕನಸು ಕಂಡಿದ್ದರು, ಆದರೆ ನಮ್ಮ ನಾಯಕರು ಮಾಡುತ್ತಿರುವ ದೇಶದ ಅಭಿವೃದ್ಧಿ ನೋಡಿ ಮತ್ತೆ ಏನ್ ಡಿ ಎ ಮಿತ್ರ ಪಕ್ಷ ಅಧಿಕಾರಕ್ಕೆ ಬಂದಿತು. ರಾಜ್ಯದಲ್ಲಿ 20 ಕ್ಕೂ ಅಧಿಕ ಸ್ಥಾನ ಬರುತ್ತದೆ ಎಂದು ಸಿಎಂ, ಡಿಸಿಎಂ ಹೇಳಿಕೆ ಕೊಡುತ್ತಿದ್ದರು. ಗ್ಯಾರಂಟಿ ಯೋಜನೆ ನೀಡಿದ್ದೇವೆ ನಮ್ಮ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ಅತಿಯಾದ ಭರವಸೆ ಇಟ್ಟುಕೊಂಡಿದ್ದರು ಇವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ, ಕೇವಲ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ತೈಲ ಬೆಲೆ ಏರಿಸಿ ರಾಜ್ಯದ ಜನತೆ ಮೇಲೆ ಹೊರೆ ಏರಿಸಿದ್ದಾರೆ, ಈ ಕೂಡಲೇ ಏರಿಸಿರುವ ಬೆಲೆಯನ್ನು ಇಳಿಸದಿದ್ದರೆ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ದಿನಾ ನಿತ್ಯ ವಸ್ತುಗಳ ಬೆಲೆ ಗಗನಕ್ಕೆರಿರುವಾಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದು ಸರಿಯಲ್ಲ. ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೇ ಕುರಿಸುವ ಕೆಲಸ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಅಲ್ಲದೆ ತೈಲ ಬೆಲೆ ಇಳಿಸಬೇಕು ಎಂದರು ಮಾನಸು ಮಾಡುತ್ತಿಲ್ಲ ಎಂದರು.
ಪ್ರತಿಭಟನೆ ನಂತರ ಬಿಜೆಪಿ ಸದಸ್ಯರು ತಾಲ್ಲೂಕು ದಂಡಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಪಂಚಾಯತಿ ಮಾಜಿ ಸದಸ್ಯ ಪರ್ವತಯ್ಯ, ರೇಣುಕುಮಾರ್, ಮುಖಂಡರಾದ ಕುಮಾರ್ ಗೆಂಡೆಹಳ್ಳಿ, ರಮೇಶ್, ಶೋಭಾ ಗಣೇಶ್, ಅಭಿಗೌಡ, ಶಿವಣ್ಣ, ಸಂಗಪ್ಪ, ತಾಲೂಕು ಯೂತ್ ಅಧ್ಯಕ್ಷ ವಿನಯ್, ತೀರ್ಥಂಕರ್, ಕೇಬಲ್ ರಾಜಣ್ಣ, ಉಮೇಶ್, ಶ್ರೇಯಸ್ಸು, ಅರುಣ್ ಕೋಗಿಲಮನೆ, ಕೌಶಿಕ್ ಇನ್ನೂ ಮುಂತಾದವರಿದ್ದರು ಹಾಜರಿದ್ದರು.
—————–
ಚಿತ್ರ: ರಾಜ್ಯದಲ್ಲಿ ಭ್ರಷ್ಟ ಸರ್ಕಾರವೆಂದರೆ ಅದು ಸಿದ್ದರಾಮಯ್ಯ ಸರ್ಕಾರ