ಕೆ.ಎಸ್.ಮಂಜೇಗೌಡ ಎಚ್ಚರಿಕೆ
ಪ್ರತಿನಿಧಿ ವರದಿ ಆಲೂರು
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಹೆದ್ದುರ್ಗ ಕೂಡಿಗೆ ಮತ್ತು ಈಶ್ವರಹಳ್ಳಿ ಕೂಡಿಗೆಯಲ್ಲಿರುವ ತಿರುವು ರಸ್ತೆ ಮುಚ್ಚಿದರೆ ಭಾರಿ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸ್ಥಳೀಯರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ನಾಗರಿಕ ಸಮಿತಿ ಹೋರಾಟಗಾರ ಕೆ.ಎಸ್.ಮಂಜೇಗೌಡ ಮಾತನಾಡಿ, ಈ ಹಿಂದೆ ಆಲೂರು ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಸುರಕ್ಷತೆ ಬಗ್ಗೆ ನಡೆದ ಸಭೆಯಲ್ಲಿ ಹೆದ್ದುರ್ಗ, ಕೂಡಿಗೆ ಮತ್ತು ಈಶ್ವರಹಳ್ಳಿ ಕೂಡಿಗೆ ತಿರುವು ಮುಚ್ಚಬಾರದೆಂದು ಮನವಿ ಮಾಡಲಾಗಿತ್ತು. ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡುವುದಾಗಿ ಡಿವೈಎಸ್ಪಿ ಭರವಸೆ ನೀಡಿದ್ದರು.
ಹೆದ್ದುರ್ಗ ತಿರುವು ಮೂಲಕ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಬೇಲೂರು, ಚಿಕ್ಕಮಗಳೂರಿಗೆ ತಿರುಗಾಡುವ ರಸ್ತೆಯಾಗಿದೆ. ದಿನನಿತ್ಯ ಗ್ರಾಮೀಣ ಭಾಗದ ಸಾವಿರಾರು ಜನರು, ವಿದ್ಯಾರ್ಥಿಗಳು, ರೈತರು ಈ ತಿರುವು ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಚರಿಸುತ್ತಾರೆ. ಈ ತಿರುವು ಮುಚ್ಚಿದರೆ ಸುಮಾರು ಎರಡು ಕಿಮೀ ಮುಂದೆ ಚಲಿಸಿ ನಂತರ ವಾಪಾಸು ಬರಬೇಕಾಗುವುದರಿಂದ ಇದು ಕಷ್ಟಸಾಧ್ಯವಾಗುತ್ತದೆ. ತಿರುವು ಮುಚ್ಚಿದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಮಾಡಲಾಗುವುದು. ಆ ಸಂದರ್ಭದಲ್ಲಿ ಆಗುವ ದುಷ್ಪರಿಣಾಮಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳೀಯ ಗ್ರಾಮಸ್ಥ ಷಣ್ಮುಖ ಮಾತಾನಾಡಿ, ಸುಮಾರು 20 ಹಳ್ಳಿಗಳ ಹತ್ತು ಸಾವಿರ ಜನಸಂಖ್ಯೆ ಸಂಪರ್ಕವನ್ನು ಹೊಂದಿರುವ ಈ ತಿರುವು ಮೂಲಕ ಹಾಸನ-ಸಕಲೇಶಪುರಕ್ಕೆ ತೆರಳುವ ಮುಖ್ಯ ರಸ್ತೆ ತಿರುವು ಇದಾಗಿದೆ. ದಿಂಡಘಟ್ಟ, ತಿಪ್ಪಾಪುರ, ಹೆದ್ದುರ್ಗ, ಬೆಳ್ಳೂರು ಮಡಬಲು, ಬೆಳಮೆ, ಮಂಜಲಗೂಡು, ಕೆರೇಹಳ್ಳಿ, ಹುಲ್ಲಹಳ್ಳಿ, ಅಂಕಿಹಳ್ಳಿ, ಮುಂತಾದ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ನಾಲ್ಕು ಪಂಚಾಯಿತಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ.
ಪ್ರತಿ ದಿನ ಈ ರಸ್ತೆಯಲ್ಲಿ ಎಂಟರಿಂದ ಹತ್ತು ಸರ್ಕಾರಿ ಬಸ್ಸುಗಳು, ನೂರಾರು ಮೋಟಾರು ವಾಹನಗಳು, ಬೈಕುಗಳು ಈ ತಿರುವಿನ ಮಾರ್ಗವಾಗಿ ಸಂಚಾರ ಮಾಡುತ್ತವೆ. ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಈ ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಬೇಕು. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಜನಸಾಮಾನ್ಯರಿಗೆ ಸುಲಭ ಸುಗಮ ಸಂಚಾರಕ್ಕೆ ರಸ್ತೆ ಪ್ರಾಧಿಕಾರ ಅಧಿಕಾರಿಗಳು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಪುರುಷೊತ್ತಮ, ಮಡಬಲು ಪಂಚಾಯಿತಿ ಮಾಜಿ ಅಧ್ಯಕ್ಷ ದೇವರಾಜು, ಮುಖಂಡರಾದ ಕರವೇ ವಿಜಯ್, ಶಾಂತರಾಜು, ಸ್ಥಳೀಯರು ಮತ್ತು ಗ್ರಾಮಸ್ಥರು ಮತ್ತು ರಕ್ಷಣಾ ವೇದಿಕೆ ಸಂಘಟನೆಯವರು ಮತ್ತು ನೂರಾರು ರೈತರು ಪಾಲ್ಗೊಂಡಿದ್ದರು.
ನಂತರ ಸ್ಥಳದಲ್ಲಿ ಹಾಜರಿದ್ದ ರಾ.ಹೆ.ಇಲಾಖೆ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್ ತಂಡದವರು ಸ್ಥಳದಲ್ಲಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಜಾಗ್ರತೆ ವಹಿಸಿದ್ದರು.
ಫೋಟೋ ಕ್ಯಾಪ್ಷನ್
ಆಲೂರು ತಾಲೂಕಿನಲ್ಲಿ ಹಾದು ಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಹೆದ್ದುರ್ಗ ಕೂಡಿಗೆ ಮತ್ತು ಈಶ್ವರಹಳ್ಳಿ ಕೂಡಿಗೆಯಲ್ಲಿರುವ ತಿರುವು ರಸ್ತೆ ಮುಚ್ಚಬಾರದೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.