ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರ ಅರುಣ್ ಕುಮಾರ್ ಕರಡಿಗಾಲ ಅಭಿಪ್ರಾಯ
ಪ್ರತಿನಿಧಿ ವರದಿ ಆಲೂರು
ಭಾರತ ಹಳ್ಳಿಗಳ ದೇಶವಾದ್ದರಿಂದ ದೇಶದ ಬಹುತೇಕ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ದೇಶದ ಭವಿಷ್ಯವಿರುವುದೇ ಸರ್ಕಾರಿ ಶಾಲೆಗಳಲ್ಲಿ ಎಂದು ಚಲನಚಿತ್ರ ನಿರ್ದೇಶಕ ಹಾಗೂ ಬರಹಗಾರ ಅರುಣ್ ಕುಮಾರ್ ಕರಡಿಗಾಲ ಅಭಿಪ್ರಾಯಪಟ್ಟರು.
ತಾಲೂಕಿನ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಪ್ಪತ್ತೈದು ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ಗಳನ್ನು ಉಚಿತವಾಗಿ ನೀಡಿ ಮಾತನಾಡಿದರು.
ಸರ್ಕಾರ ಮಕ್ಕಳಿಗೆ ಅಗತ್ಯವಿರುವ ಸಮವಸ್ತ್ರ, ಶೂ, ಊಟ, ಪಠ್ಯಪುಸ್ತಕಗಳನ್ನು ಒದಗಿಸುತ್ತದೆ. ಆದರೆ ನಿತ್ಯ ಅಗತ್ಯವಿರುವ ನೋಟ್ ಬುಕ್, ಪೆನ್ನುಗಳು ಇತರೆ ಲೇಖನ ಸಾಮಾಗ್ರಿಗಳ ಅಗತ್ಯವಿರುವುದರಿಂದ ಶಿಕ್ಷಣ ಆಸಕ್ತರಿಂದ ಸಂಗ್ರಹಿಸಿ ಮಕ್ಕಳಿಗೆ ನೀಡುವುದರಿಂದ ಅವರ ಕಲಿಕೆಗೆ ಪ್ರೋತ್ಸಾಹ ದೊರೆಯುತ್ತದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಆಸಕ್ತರು, ಸಾಮಾಜಿಕ ಸೇವಕರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಇದು ಸಾಮಾಜಿಕ ಜವಾಬ್ದಾರಿಯೂ ಆಗಿದೆ ಎಂದರು.
ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ, ಅರುಣ್ ಕುಮಾರ್ ಅವರು ನಮ್ಮ ಶಾಲೆಯ ಮೇಲಿನ ಅಭಿಮಾನದಿಂದ ಎಲ್ಲ ಮಕ್ಕಳಿಗೂ ಅಗತ್ಯವಿರುವ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದಾರೆ. ಈ ಕೊಡುಗೆಯ ಹಿಂದೆ ಅವರ ದುಡಿಮೆಯ ಪರಿಶ್ರಮವಿದೆ. ಮಕ್ಕಳು ಸಕಾರಾತ್ಮಕವಾಗಿ ಸದ್ಬಳಕೆ ಮಾಡಿಕೊಂಡು ಶಿಕ್ಷಣದಲ್ಲೂ ಗುಣಾತ್ಮಕತೆಯನ್ನು ಸಾಧಿಸಿದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ ಎಂದರು.
ಶಿಕ್ಷಕರಾದ ವಿ.ರವಿತ, ರೇಖಾ ಸೇರಿದಂತೆ ಮಕ್ಕಳು ಹಾಜರಿದ್ದರು.