ಪ್ರತಿನಿಧಿ ವರದಿ ಹಳೇಬೀಡು
ಶೀಘ್ರದಲ್ಲಿ ಬೂದಿಗುಂಡಿ ನಿರಾಶ್ರಿತರನ್ನು ಸ್ಥಳಾಂತರ ಮಾಡಿ ಅವರಿಗೆ ಒಂಟೆಮಳಿ ಗುಡ್ಡದಲ್ಲಿ (ಮುರಾರ್ಜಿ ದೇಸಾಯಿವಸತಿ ಶಾಲೆ ಬಳಿ) ನಿವೇಶನ ಒದಗಿಸಿಕೊಡುವುದಾಗಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.
ಇಲ್ಲಿನ ದ್ವಾರಸಮುದ್ರ ಕೆರೆ ಪಕ್ಕದ ಬೂದಿಗುಂಡಿ ಬಡಾವಣೆಯ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಭಾಗದಲ್ಲಿ ಸುಮಾರು 120 ಮನೆಗಳಲ್ಲಿ ಜನರು 30 ವರ್ಷಗಳಿಂದ ವಾಸಮಾಡುತ್ತಿದ್ದು, ಇಲ್ಲಿಯ ದ್ವಾರಸಮುದ್ರಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ವಾಸಿಸಲು ತುಂಬ ಅಪಾಯಕಾರಿ ಸ್ಥಳವಾಗಿದೆ ಹೀಗಾಗಿ ಇಲ್ಲಿಯ ಜನರ ಸುರಕ್ಷತೆಗಾಗಿ ಒಂಟೆಮಳಿಗುಡ್ಡದ ಪ್ರದೇಶದಲ್ಲಿ ಎಲ್ಲಾ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಲು ಬದ್ದರಾಗಿದ್ದೇನೆ. ಇಲ್ಲಿ ವಾಸ ಮಾಡುತ್ತಿರುವ 120 ಮನೆಗಳಲ್ಲಿ ಕೇವಲ 34ಮನೆಗಳಿಗೆ ಮಾತ್ರ ಇ-ಸ್ವತ್ತು ಮಾಡಲಾಗಿದೆ, ಇಲ್ಲಿಯ ನಿವಾಸಿಗಳ ಸುರಕ್ಷತೆಗೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದು, ಅದನ್ನು ಶೀರ್ಘಅನುಷ್ಠಾನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇಂಜಿನಿಯರ್ ಸುಂದರ್ ರಾಜ್ ಮಾತನಾಡಿ, ಬೂದಿಗುಂಡಿ ನಿವಾಸಿಗಳ ಸ್ಥಳ ಅನೈರ್ಮಲ್ಯತೆ ತಾಣವಾಗಿದ್ದು ಸೊಳ್ಳೆ ಕೀಟಗಳ ಆವಾಸ ತಾಣವಾಗಿದ್ದು ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ರೋಗ ರುಜನೆಗಳು ಹರಡುವ ಭೀತಿ ಕೂಡ ಇದ್ದು ಆರೋಗ್ಯ ಇಲಾಖೆ ಕೂಡ ಈ ಸ್ಥಳ ವಾಸಿಸಲು ಸೂಕ್ತ ಸ್ಥಳವಾಗಿಲ್ಲವೆಂದು ಹಲವು ಬಾರಿ ತಿಳಿಸಿದ್ದು, ಸದ್ಯಕ್ಕೆ ಸಣ್ಣನೀರಾವರಿ ಇಲಾಖೆಯಿಂದ 59 ಲಕ್ಷ ರೂ. ಅನುದಾನದಲ್ಲಿ ಸುಮಾರು 130 ಮೀಟರ್ ಉದ್ದದ ಚರಂಡಿ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷ ಮಾತನಾಡಿ, ಬೂದಿಗುಂಡಿ ನಿವಾಸಿಗಳ ಸುಮಾರು 120 ಕುಟುಂಬಗಳ ಭದ್ರತೆ ಹಾಗೂ ಸುರಕ್ಷತೆಯ ಹಿತದೃಷ್ಠಿಯಿಂದ ಶಾಸಕರು ತೆಗೆದುಕೊಂಡಿರುವ ನಿರ್ಧಾರ ಉತ್ತಮವಾಗಿದೆ ಎಲ್ಲ ಬೂದಿಗುಂಡಿ ನಿವಾಸಿಗಳು ಇದಕ್ಕೆ ಸಹಕರಿಸಬೇಕಾಗಿ ಮನವಿ ಮಾಡಿದರು.
ಎ.ಇ.ಉಮೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸೋಮಶೇಖರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಪಕ್ಷದ ಮುಖಂಡರಾದ ಪ್ರಸನ್ನ, ಬಸವರಾಜು, ಶಿವನಾಗ್, ರಂಜಿತ್, ರಾಜು,ಈಶ್ವರ್, ಕೆಂಪರಾಜು, ಪ್ರದೀಪ್, ಹರೀಶ್ ಹಾಜರಿದ್ದರು.