ಪ್ರತಿನಿಧಿ ವರದಿ ಶೃಂಗೇರಿ
ಇಂಡಸ್ ಹರ್ಬ್ಸ್ ನ ರವೀಂದ್ರ ತುಂಬರಮನೆ ವಿಷಯ ವಿನ್ಯಾಸ ಗೈದು ನಿರ್ಮಿಸಿ, ಮಲೆನಾಡ ಕ್ರಿಯಾಶೀಲ ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿದ ಜಲಪಾತ ಸಿನಿಮಾಕ್ಕೆ ೨೦೨೪ರ ಚಿತ್ತಾರ ಸ್ಟಾರ್ ಅವಾರ್ಡ್ ಲಭಿಸಿದೆ.
ಉತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ವಿಭಾಗದಲ್ಲಿ ಜಲಪಾತ ನಾಮ ನಿರ್ದೇಶನಗೊಂಡಿತ್ತು. ಚಿತ್ರದ ನಾಯಕ ನಟಿ ನಾಗಶ್ರೀ ಬೇಗಾರ್ ಮೊದಲ ಸಿನಿಮಾದಲ್ಲೇ ಶ್ರೇಷ್ಠ ನಾಯಕಿಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಆನ್ ಲೈನ್ ವೋಟಿಂಗ್ ಮತ್ತು ತೀರ್ಪುಗಾರ ತಂಡದ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರಾಂಡ್ ಸಭಾಂಗಣದಲ್ಲಿ ಚಿತ್ತಾರ ಸಿನಿ ಮ್ಯಾಗಜಿನ್ ಕಲರ್ಸ್ ಕನ್ನಡ ಸಹಯೋಗದಲ್ಲಿ ಆಯೋಜಿಸಿದ್ದ ಚಂದನವನ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಸಿದ್ಧ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನ್ಸೋರೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ನಿರಂಜನ್ ದೇಶಪಾಂಡೆ ಮತ್ತು ಜಾಹ್ನವಿ ಕಾರ್ತಿಕ್ ನಿರೂಪಣೆಯ ಈ ವರ್ಣ ರಂಜಿತ ಕಾರ್ಯಕ್ರಮ ದಲ್ಲಿ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಸಿನಿಮಾ ರಂಗದ ಪ್ರಸಿದ್ದ ಕಲಾವಿದರು ಭಾಗವಹಿಸಿದ್ದರು.
ಜಲಪಾತ ತಂಡದ ಪರವಾಗಿ ನಿರ್ಮಾಪಕ ರವೀಂದ್ರ ಮತ್ತು ನಿರ್ದೇಶಕ ರಮೇಶ್ ಬೇಗಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ ಈ ಪ್ರಶಸ್ತಿಯನ್ನು ಸ್ವೀಕರಿದರು.
ಮುಖ್ಯ ತಾಂತ್ರಿಕ ವರ್ಗ ಛಾಯಾಗ್ರಾಹಕ ಶಶಿರ ಶೃಂಗೇರಿ, ಸಂಕಲನ ಕಾರ ಅವಿನಾಶ್ ಶೃಂಗೇರಿ ಕಲಾನಿರ್ದೇಶಕ ಅಭಿಷೇಕ್ ಮತ್ತು ನಿರ್ವಾಹಕ ಕಾರ್ತಿಕ್ ಶೃಂಗೇರಿ ಇವರು ಉಪಸ್ಥಿತರಿದ್ದರು.
ರಮೇಶ್ ಮಾತನಾಡಿ, ಇದೊಂದು ಸಾಮಾಜಿಕ ಸಂದೇಶ ಚಿತ್ರವಾದರೂ ವಾಣಿಜ್ಯ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದಿದೆ. ಮಲೆನಾಡ ಗ್ರಾಮೀಣ ಪ್ರದೇಶದ ಕಲಾವಿದ ತಂತ್ರಜ್ಞರಿಗೆ ಮೊದಲು ಒಲಿದ ಪ್ರಶಸ್ತಿ ಇದಾಗಿದ್ದು, ಮಲೆನಾಡ ಸಮಸ್ತ ಜನತೆಗೆ ಪ್ರಶಸ್ತಿಯನ್ನು ಸಮರ್ಪಿಸುತ್ತೇವೆ ಎಂದರು.
೨೦೨೩ರಲ್ಲಿ ಚಿತ್ರೀಕರಣ ಗೊಂಡು ಬಿಡುಗಡೆ ಆಗಿ ಎಬಿಸಿ ಕೇಂದ್ರಗಳಲ್ಲಿ ೫೦ ದಿನ ಪ್ರದರ್ಶಿತಗೊಂಡ ಜಲಪಾತ ಪ್ರತಿಷ್ಠಿತ ಅಮೆಜಾನ್ ಪ್ರೈಮ್ ನಲ್ಲೂ ಬಿಡುಗಡೆಗೊಂಡಿದೆ. ೮ಕ್ಕೂ ಮಿಕ್ಕಿದ ಐಎಂಡಿಬಿ ರೇಟಿಂಗ್ ದಾಖಲಿಸಿದ ವಿಶಿಷ್ಟ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದೆ.